ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ಇದೀಗ ಗುಡ್ ನ್ಯೂಸ್ ಒಂದನ್ನು ನೀಡಿದೆ. ಇನ್ನು ಮುಂದೆ ಪೊಲೀಸರಿಗೆ ಇದ್ದ ಕಡ್ಡಾಯ ವರ್ಗಾವಣೆಯನ್ನು ರದ್ದು ಮಾಡಿದೆ.
ಬೆಂಗಳೂರು : ಕಮಿಷನರೇಟ್ಗಳಲ್ಲಿ 5 ವರ್ಷ ಕೆಲಸ ಮಾಡಿದ ಪೊಲೀಸ್ ಅಧಿಕಾರಿಗಳನ್ನು ಕಡ್ಡಾಯವಾಗಿ ಬೇರೆ ಕಡೆಗೆ ವರ್ಗಾಯಿಸಬೇಕು ಎಂಬ ನಿಯಮವನ್ನು ರಾಜ್ಯ ಸರ್ಕಾರ ರದ್ದುಪಡಿಸಿದೆ.
ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ ಕಮಿಷನರೇಟ್ ವ್ಯಾಪ್ತಿಯಲ್ಲಿ 5 ವರ್ಷ ಕಡ್ಡಾಯವಾಗಿ ಕೆಲಸ ಮಾಡಿದ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಎಸಿಪಿಗಳನ್ನು ಬೇರೆ ಡೆಗೆ ವರ್ಗಾಯಿಸಬೇಕು ಎಂಬ ನಿಯಮ ಜಾರಿಗೊಳಿಸಿತ್ತು. ಇತ್ತೀಚೆಗೆ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಸಿಸಿಬಿಗಳನ್ನು ಈ ನಿಯಮದಿಂದ ಹೊರಗಿಟ್ಟು ಕುಮಾರ ಸ್ವಾಮಿ ಸರ್ಕಾರ ಆದೇಶ ಹೊರಡಿಸಿತ್ತು.
ಬುಧವಾರ ಕಮಿಷನರೇಟ್ ವ್ಯಾಪ್ತಿಯ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗಗಳಿಗೂ ಅನ್ವಯಿಸುವಂತೆ ಈ ನಿಯಮವನ್ನು ಸರ್ಕಾರ ಹಿಂಪಡೆದಿದೆ. ತನ್ಮೂಲಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರದ ಬಹುಮುಖ್ಯ ಆದೇಶವನ್ನು ಹಿಂಪಡೆದುಕೊಂಡಂತಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಪೊಲೀಸ್ ಕಮಿಷನರೇಟ್ಗಳಲ್ಲಿ ಇನ್ಸ್ ಪೆಕ್ಟರ್ ಮತ್ತು ಎಸಿಪಿಗಳಿಗೆ ಐದು ವರ್ಷ ಸೇವಾವಧಿ ನಿಗದಪಡಿಸಿ ಕಾಂಗ್ರೆಸ್ ಸರ್ಕಾರವು ನಿಯಮ ಜಾರಿಗೆ ತಂದಿತ್ತು. ಇದರ ಪರಿಣಾಮ ಹತ್ತಾರು ವರ್ಷಗಳು ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದ ಅಧಿಕಾರಿ ಗಳು ನಗರವನ್ನು ತೊರೆಯುವಂತಾ ಯಿತು.
ಈ ಆದೇಶ ಹಿಂಪಡೆಯುವಂತೆ ನಾಲ್ಕು ವರ್ಷಗಳಿಂದ ಕೆಲ ಅಧಿಕಾರಿಗಳು ತಮ್ಮ ಗಾಡ್ಫಾದರ್ಗಳ ಮೂಲಕ ಸರ್ಕಾರ ಮಟ್ಟದಲ್ಲಿ ಲಾಬಿ ನಡೆಸಿದ್ದರು. ಇದಕ್ಕೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸೊಪ್ಪು ಹಾಕಿರಲಿಲ್ಲ. ಆದರೆ, ಈಗ ಅಧಿಕಾರಿಗಳ ಲಾಬಿ ಯಶಸ್ಸು ಕಂಡಿದೆ.
ವಾರದ ಹಿಂದೆ ಐದು ವರ್ಷ ಸೇವಾವಧಿ ನಿಯಮದಿಂದ ಸಿಸಿಬಿಯನ್ನು ಪ್ರತ್ಯೇಕ ಗೊಳಿಸಿದ ಸರ್ಕಾರವು, ಈಗ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗಗಳಿಗೂ ಆ ನಿಯಮವನ್ನು ಹಿಂಪ ಡೆದುಕೊಂಡಿದೆ. ಇದರೊಂದಿಗೆ ಬೆಂಗಳೂರಿಗೆ ಹಳೇ ಅಧಿಕಾರಿಗಳ ದಂಡು ಮರು ಪ್ರವೇಶಕ್ಕೂ ಬಾಗಿಲು ತೆರೆದಂತಾಗಿದೆ.
ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಅನುಭವಿ ಅಧಿಕಾರಗಳ ಅಗತ್ಯವಿದೆ. ಹಾಗಾಗಿ ಹಿಂದಿನ ವರ್ಗಾವಣೆ ನಿಯಮ ಆದೇಶವನ್ನು ಹಿಂಪಡೆಯಲಾಗುತ್ತಿದೆ ಎಂದು ಪೊಲೀಸ್ ಸೇವೆಗಳಿಗೆ ಸಂಬಂಧಿಸಿದ ಒಳಾಡಳಿತ ಇಲಾಖೆಯ ಅಧೀನ ಕಾರ್ಯ ದರ್ಶಿ ವಿಜಯಕುಮಾರ್ ಬುಧವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.