ಊರಿಗೆ ತೆರಳುವ ಕಾರ್ಮಿಕರಿಗೆ ಇನ್ನೂ 3 ದಿನ ‘ಫ್ರೀ ಬಸ್‌’ ಸೇವೆ!

By Suvarna NewsFirst Published May 5, 2020, 7:33 AM IST
Highlights

ಊರಿಗೆ ತೆರಳುವ ಕಾರ್ಮಿಕರಿಗೆ ಇನ್ನೂ 3 ದಿನ ‘ಫ್ರೀ ಬಸ್‌’ ಸೇವೆ| ನಿನ್ನೆ ಒಂದೇ ದಿನ 23000ಕ್ಕೂ ಹೆಚ್ಚು ಮಂದಿ ಪ್ರಯಾಣ|  2 ದಿನ ವಿಸ್ತರಣೆ, ಮೇ 7ರವರೆಗೂ ಅವಕಾಶ: ಬಿಎಸ್‌ವೈ

ಬೆಂಗಳೂರು(ಮೇ..05): ರಾಜಧಾನಿಯಿಂದ ರಾಜ್ಯದ ವಿವಿಧ ಸ್ಥಳಗಳಿಗೆ ತೆರಳುವ ವಲಸೆ ಕಾರ್ಮಿಕರ ಸಂಚಾರಕ್ಕೆ ಮೇ 7ರವರೆಗೆ ಉಚಿತ ಸಾರಿಗೆ ಸೌಲಭ್ಯವನ್ನು ಸರ್ಕಾರ ವಿಸ್ತರಿಸಿದೆ.

ಈ ಹಿಂದೆ ಮೇ 5ರ ವರೆಗೆ ಉಚಿತ ಪ್ರಯಾಣಕ್ಕೆ ಸರ್ಕಾರ ಅವಕಾಶ ಕಲ್ಪಿಸಿತ್ತು. ಊರುಗಳಿಗೆ ತೆರಳುವ ಕಾರ್ಮಿಕರ ಸಂಖ್ಯೆ ದಿನವೂ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮತ್ತೆ ಎರಡು ದಿನ ಉಚಿತ ಸಾರಿಗೆ ಸೌಲಭ್ಯ ವಿಸ್ತರಿಸಿದ್ದಾರೆ. ಪ್ರಯಾಣಕ್ಕೆ ಅಗತ್ಯ ಬಸ್‌ ವ್ಯವಸ್ಥೆ ಮಾಡಿದ್ದು, ನೆಮ್ಮದಿಯಿಂದ ತಮ್ಮ ಊರುಗಳಿಗೆ ತೆರಳುವಂತೆಯೂ ಕಾರ್ಮಿಕರಲ್ಲಿ ಅವರು ಮನವಿ ಮಾಡಿದ್ದಾರೆ.

ಕೊರೋನಾತಂಕ ನಡುವೆ ಗುಡ್ ನ್ಯೂಸ್: ರಾಜ್ಯದಲ್ಲೀಗ ಸೋಂಕಿತರಿಗಿಂತ ಚೇತರಿಕೆ ಹೆಚ್ಚು!

ಸೋಮವಾರ 776 ಬಸ್‌ಗಳಲ್ಲಿ 23,280 ಮಂದಿ ವಿವಿಧ ಕಡೆ ಪ್ರಯಾಣಿಸಿದರು. ಈ ಪೈಕಿ ಅತಿ ಹೆಚ್ಚು ಅಂದರೆ 108 ಬಸ್‌ಗಳಲ್ಲಿ ಯಾದಗಿರಿಗೆ 3,224 ಜನರು ಪ್ರಯಾಣಿಸಿದರು. ಉಳಿದಂತೆ ಕಲಬುರಗಿಗೆ 78, ರಾಯಚೂರಿಗೆ 46, ಶಿವಮೊಗ್ಗಕ್ಕೆ 36, ಹಾಸನಕ್ಕೆ 26, ಬೀದರ್‌ಗೆ 28, ಬಳ್ಳಾರಿಗೆ 28 ಸೇರಿದಂತೆ ರಾಜ್ಯದ 101 ಸ್ಥಳಗಳಿಗೆ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಯಿತು.

ನರಗದ ವಿವಿಧೆಡೆ ನೆಲೆಸಿದ್ದ ಈ ಕಾರ್ಮಿಕರು ಟ್ರ್ಯಾಕ್ಟರ್‌ಗಳಲ್ಲಿ ಬಸ್‌ ನಿಲ್ದಾಣಕ್ಕೆ ಬಂದಿದ್ದರು. ಕೆಲವು ಕಾರ್ಮಿಕರು ಸಾರಿಗೆ ಸೌಲಭ್ಯ ಇಲ್ಲದೆ ಕಾಲ್ನಡಿಗೆಯಲ್ಲೇ ಮೆಜೆಸ್ಟಿಕ್‌ ತಲುಪಿದ್ದರು. ನಿಲ್ದಾಣದಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಇದ್ದರೂ, ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಜಮಾವಣೆಗೊಂಡಿದ್ದರಿಂದ ಸಮಸ್ಯೆ ಎದುರಾಯಿತು.

ಚಟುವಟಿಕೆಗಳು ದಿಢೀರ್‌ ಹೆಚ್ಚಳ: ಎಚ್ಚರ, ಈಗ ಗರಿಷ್ಠ ಅಪಾಯ!

ಸಚಿವರಿಂದ ಊಟದ ವ್ಯವಸ್ಥೆ:

ಸೋಮವಾರ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ, ಸಚಿವ ಸುರೇಶ್‌ ಕುಮಾರ್‌, ಸಂಸದ ಪಿ.ಸಿ.ಮೋಹನ್‌ ಸೇರಿದಂತೆ ಬಿಜೆಪಿ ನಾಯಕರು ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿ ಪ್ರಯಾಣಿಕರ ಸಮಸ್ಯೆ ಆಲಿಸಿದರು. ಹಸಿವಿನಿಂದ ಬಳಲಿದ್ದ ಕಾರ್ಮಿಕರಿಗೆ ಊಟದ ವ್ಯವಸ್ಥೆಯನ್ನೂ ಮಾಡಿಸಿದರು.

click me!