
ಬೆಂಗಳೂರು (ಫೆ.20): ರಾಜ್ಯ ಕಾಂಗ್ರೆಸ್ ಸರ್ಕಾರವು ‘ಇ’ ಖಾತೆ, ‘ಎ’ ಖಾತೆ, ‘ಬಿ’ ಖಾತೆ ಎಂದು ಹೇಳಿ ಖಾತೆಗಳ ವಿಷಯದಲ್ಲೂ ಖ್ಯಾತೆ ತೆಗೆಯುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಕಿಡಿಕಾರಿದ್ದಾರೆ.
ಅರಮನೆ ಮೈದಾನದಲ್ಲಿ ಗುರುವಾರ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಣಿ ವೇಳೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ 35 ಲಕ್ಷ ಜನರು ಖಾತೆ ಬೇಕಾದವರು ಇದ್ದಾರೆ. ಈ ಸರ್ಕಾರವು ಖಾತೆಗಳ ಹೆಸರಿನಲ್ಲಿ ಜನರ ಸುಲಿಗೆಗೆ ಮುಂದಾಗಿದೆ ಎಂದು ಆರೋಪಿಸಿದರು.
ಬೆಂಗಳೂರಿನಲ್ಲಿ ಮನೆ ಕಟ್ಟಿಕೊಳ್ಳುವವರಿಗೆ ಸುಪ್ರೀಂಕೋರ್ಟ್ನ ತೀರ್ಪಿನ ಕಾರಣ ಕೊಟ್ಟು ಒಸಿ, ಸಿಸಿ ಹಾಕಿ, ಯಾವ ರಾಜ್ಯದಲ್ಲೂ ಇಲ್ಲದಷ್ಟು ಶುಲ್ಕ ವಿಧಿಸಿ ಅವರ ಕಣ್ಣಲ್ಲಿ ರಕ್ತ ಹರಿಸುತ್ತಿದೆ. ಜನರು ಸಾಲ ಮಾಡಿ ಮನೆ ನಿರ್ಮಿಸಿದರೂ ಒಳಗೆ ಹೋಗಲಾಗದೆ ಆ ಮನೆಗಳು ಹರಾಜಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಗ್ರೇಟರ್ ಬೆಂಗಳೂರು ಗವರ್ನೆನ್ಸ್ ಬಿಲ್ (ಜಿಬಿಜಿಬಿ) ಮಾಡಿದ್ದಾರೆ. ಈ ಬಿಲ್ ಮುಖಾಂತರ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಬಿಬಿಎಂಪಿ ವಿಭಜಿಸಿ ಐದು ನಗರ ಪಾಲಿಕೆ ಮಾಡಿದ್ದಾರೆ. ಹಿಂದಿನ 198 ವಾರ್ಡ್ ಇದ್ದ ಬಿಬಿಎಂಪಿಯಲ್ಲಿ ಒಂದು ವಾರ್ಡ್ಗೆ ಅಗತ್ಯವಿರುವ ಎಂಜಿನಿಯರ್, ಹೆಲ್ತ್ ಇನ್ಸ್ಪೆಕ್ಟರ್ ಮೊದಲಾದ ಸಿಬ್ಬಂದಿ ಇರಲಿಲ್ಲ. ಇದೀಗ 369 ವಾರ್ಡ್ಗೆ ಸಿಬ್ಬಂದಿ ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿಸಿದರು.
ಈ ಸರ್ಕಾರದಲ್ಲಿ ಸಮಸ್ಯೆ ಮೇಲೆ ಸಮಸ್ಯೆ ನಿರ್ಮಾಣವಾಗಿದೆ. ಗೊಂದಲ ಮುಂದುವರಿದಿದ್ದು, ಆಡಳಿತ ವೆಚ್ಚ ಹೆಚ್ಚಾಗಿದೆ. ಸಿಬ್ಬಂದಿ ಇಲ್ಲದೇ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಆ ಜಿಬಿಜಿಬಿ ಬಿಲ್ ಸಹ ಸಂವಿಧಾನಕ್ಕೆ ವಿರುದ್ಧವಾಗಿದೆ. ಚುನಾವಣೆಯನ್ನು ಮಾಡಲು ಹೋಗುವುದಿಲ್ಲ. ಇನ್ನು ಮೂರು ವರ್ಷ ಕಳೆದರೂ ಬೆಂಗಳೂರು ನಗರ ಚುನಾವಣೆ ಕಾಣಲಾರದು ಎಂದು ಹೇಳಿದರು.
ಕಸ ನಿರ್ವಹಣೆಯಲ್ಲಿ ವಿಫಲ
ಈ ಸರ್ಕಾರ ನಗರದ ಕಸ ನಿರ್ವಹಣೆಯಲ್ಲೂ ವಿಫಲವಾಗಿದೆ. ತ್ಯಾಜ್ಯ ಸಂಸ್ಕರಣೆ ಶುಲ್ಕ, ಬಳಕೆದಾರರ ಶುಲ್ಕ ಸೇರಿ ಗರಿಷ್ಠ ಹಣ ಸಂಗ್ರಹಿಸುತ್ತಿದ್ದಾರೆ. ಆದರೂ ಬೆಂಗಳೂರಿನಲ್ಲಿ ಕಸ ಗುಡಿಸಲು ಜನ ಇಲ್ಲ. ಬ್ರ್ಯಾಂಡ್ ಬೆಂಗಳೂರು ಮಾಡುವುದಾಗಿ ಹೇಳಿದವರು ಕಸ ನಿರ್ವಹಣೆ, ಗುಂಡಿಗಳ ಮುಚ್ಚುವಿಕೆಯಲ್ಲೂ ವಿಫಲರಾಗಿದ್ದಾರೆ ಎಂದು ಅವರು ರಾಜ್ಯ ಸರ್ಕಾರದ ವಿರುದ್ಧ ಅಶ್ವತ್ಥನಾರಾಯಣ ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ