
ಶಿವಮೊಗ್ಗ (ಡಿ.17):ರಾಜ್ಯ ಸರ್ಕಾರ ಅನ್ವರ್ ಮಾಣಿಪ್ಪಾಡಿ ವರದಿಯನ್ನು ವಿಧಾನ ಮಂಡಲದಲ್ಲಿ ಚರ್ಚೆ ಮಾಡಬೇಕು. ವಕ್ಫ್ ಆಸ್ತಿಯನ್ನ ಕಾಂಗ್ರೆಸ್ ನಾಯಕರೇ ಹೆಚ್ಚು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಆರೋಪಿಸಿದರು.
ವಕ್ಫ್ ವಿಚಾರವಾಗಿ ಇಂದು ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಕ್ಫ್ ಆಸ್ತಿಯನ್ನು ಯಾರೇ ಒತ್ತುವರಿ ಮಾಡಿಕೊಂಡರು ಅವರ ಮೇಲೆ ಕ್ರಮ ಕೈಗೊಳ್ಳಬೇಕು. ವಕ್ಫ್ ಆಸ್ತಿ ಒತ್ತುವರಿ ಮಾಡಿಕೊಂಡವರಲ್ಲಿ ಮಲ್ಲಿಕಾರ್ಜುನ್ ಖರ್ಗೆ, ರೆಹಮಾನ್ ಖಾನ್, ಖಮರುಲ್ ಇಸ್ಲಾಂ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಇದ್ದಾರೆ, ಬಿಜೆಪಿಯವರೂ ಇದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಬಾಂಗ್ಲಾದೇಶಿ 'ಮುಸ್ಲಿಮರು ಅನ್ನ ತಿಂದ ಮನೆಗೆ ಕನ್ನ ಹಾಕುವವರು'; ಕೆ.ಎಸ್. ಈಶ್ವರಪ್ಪ!
ಅನ್ವರ್ ಮಾಣಿಪ್ಪಾಡಿ ಅವರಿಗೆ ವಿಜಯೇಂದ್ರ 150 ಕೋಟಿ ಆಫರ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೆಎಸ್ ಈಶ್ವರಪ್ಪ ಅವರು, ಈ ಬಗ್ಗೆ ಸಿಬಿಐ ತನಿಖೆಯಾಗಲಿ ಅಂತಾ ಸಿಎಂ ಹೇಳಿದ್ದಾರೆ. ಎಲ್ಲದಕ್ಕೂ ಎಸ್ಐಟಿ ಎನ್ನುತ್ತಿದ್ದ ಸಿದ್ದರಾಮಯ್ಯ, ಈ ವಿಚಾರದಲ್ಲಿ ಸಿಬಿಐ ಮೇಲೆ ವ್ಯಾಮೋಹ ಬಂದಿರುವುದು ಸಂತೋಷ. ಸರ್ಕಾರವೇ ಈ ಪ್ರಕರಣವನ್ನು ಸಿಬಿಐಗೆ ವಹಿಸಲಿ ಎಂದು ಆಗ್ರಹಿಸಿದರು.
ಮಠ-ಮಂದಿರ ದೇವಸ್ಥಾನ, ರೈತರ ಭೂಮಿಯ ಪಹಣಿಯಲ್ಲಿ ವಕ್ಪ್ ಅಂತಾ ಇದ್ದರೂ ಸರಕಾರ ತೆಗೆಯುವ ಪ್ರಯತ್ನ ಮಾಡ್ತಿಲ್ಲ. ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸಿಎಂ ಅಧಿವೇಶನದಲ್ಲಿ ಏಕೆ ಮಂಡನೆ ಮಾಡಿಲ್ಲ? ಕನಿಷ್ಟಪಕ್ಷ ಅದರ ಚರ್ಚೆ ಕೂಡ ಮಾಡಲು ಬಿಟ್ಟಿಲ್ಲ. ವಕ್ಫ್ ಆಸ್ತಿ ಯಾರಾರು ಲೂಟಿ ಮಾಡಿದ್ದಾರೆ ಎಂಬ ಬಗ್ಗೆ ಚರ್ಚೆ ಮಾಡಿಲ್ಲ. ಅನ್ವರ್ ಮಾಣಿಪ್ಪಾಡಿ ಒಂದೊಂದು ಬಾರಿ ಒಂದೊಂದು ರೀತಿ ಹೇಳಿದ್ದಾರೆ. ವಿಜಯೇಂದ್ರ ಬಿಜೆಪಿ ಕಚೇರಿಗೆ ಬಂದಿದ್ದರು. ಕಾಂಗ್ರೆಸ್ ನವರು ದುಡ್ಡು ಕೊಟ್ಟರೆ ತೆಗೆದುಕೊಳ್ಳಿ ಅಂತಾ ತಮಾಷೆಗೆ ಹೇಳಿದ್ದಾರೆ ಅಂತಾ ಮಾಧ್ಯಮದ ಮುಂದೆ ಹೇಳಿದ್ದಾರೆ. ಆದರೆ ಈ ವಿಚಾರದಲ್ಲಿ ಸತ್ಯ ಹೊರಬರಲು ಸಿಬಿಐ ತನಿಖೆ ಆಗಬೇಕು ಎಂದರು.
ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸ್ಪಂದಿಸಲೆಂದೇ ಬೆಳಗಾವಿ ಅಧಿವೇಶನ ನಡೆಸಲಾಗುತ್ತದೆ ಆದರೆ ಅಧಿವೇಶನದುದ್ದಕ್ಕೂ ಏನು ಚರ್ಚೆ ಆಗಿದೆ? ಅಧಿವೇಶನದಲ್ಲಿ ಯಾವುದೇ ಚರ್ಚೆ ಸರಿಯಾಗಿ ನಡೆಯುತ್ತಿಲ್ಲ. ಉತ್ತರ ಕರ್ನಾಟಕ ಭಾಗಕ್ಕೆ ಅಧಿವೇಶನವೇ ದ್ರೋಹ ಅನ್ಯಾಯ ಮಾಡಿದಂತಾಗಿದೆ. ಈ ಭಾಗಕ್ಕೆ ಯಾವುದೇ ಅನುಕೂಲ ಇಲ್ಲ. ಸರ್ಕಾರ ಬದುಕಿದೆಯ, ಸತ್ತಿದೆಯೋ ಗೊತ್ತಿಲ್ಲ. ರಸ್ತೆಯಲ್ಲಿ ಗುಂಡಿ ಇದೆಯೋ, ಗುಂಡಿಯಲ್ಲಿ ರಸ್ತೆಯಿದೆಯೋ ಎಂಬಂಥ ಪರಿಸ್ಥಿತಿ ಉತ್ತರ ಕರ್ನಾಟಕ ಭಾಗದಲ್ಲಿದೆ. ಆದರೆ ಇದ್ಯಾವುದರ ಬಗ್ಗೆ ಚರ್ಚೆ ಇಲ್ಲ. ಸಾಲದ್ದಕ್ಕೆ ಎಲ್ಲ ಇಲಾಖೆಯಿಂದ ಸರ್ಕಾರ ಹಣ ವಾಪಸ್ ಪಡೆಯುತ್ತಿರುವುದರಿಂದ ಅಭಿವೃದ್ಧಿಯೇ ನಿಂತು ಹೋಗಿದೆ ಎಂದು ರಾಜ್ಯಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ