ಬೆಂಗಳೂರು ಐಟಿ ಹಬ್ ಮಂದಿಗೆ ಗುಡ್‌ನ್ಯೂಸ್ ಕೊಟ್ಟ ಸರ್ಕಾರ! ಡಿಕೆ ಶಿವಕುಮಾರ ಕೊಟ್ಟ ಶುಭ ಸುದ್ದಿ ಏನು?

By Ravi JanekalFirst Published Sep 28, 2024, 11:52 AM IST
Highlights

ಬೆಳ್ಳಂದೂರು ಸುತ್ತಮುತ್ತ ಜನರಿಗೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗ್ತಿರೋ ಬಗ್ಗೆ ದೂರುಗಳು ಬಂದಿದ್ದವು. ನಾವು ಅಲ್ಲಿನ ಜನರ ಸಮಸ್ಯೆ ಆಲಿಸಿದ್ದೆವು. ಐಟಿ ಹಬ್‌ನವರಿಗೆ ಮುಂದಿನ ದಿನಗಳಲ್ಲಿ ಸ್ಪೆಷಲ್ ನ್ಯೂಸ್ ಕೊಡ್ತೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.

ವಿಧಾನಸೌಧ (ಸೆ.28): ಬೆಂಗಳೂರಿನ ಅತ್ಯಂತ ಟ್ರಾಫಿಕ್ ಸಮಸ್ಯೆ ಇರುವ ಏರಿಯಾ ಯಾವುದಾದ್ರೂ ಇದ್ದರೆ ಅದು ಬೆಳ್ಳಂದೂರು. ಇಲ್ಲಿನ ಜನರಿಗೆ ದಿನನಿತ್ಯ ಟ್ರಾಫಿಕ್ ನಿಂದ ಕಿರಿಕಿರಿ. ಹಲವು ದಶಕಗಳಿಗೆ ಬಗೆಹರಿಯದ ಸಮಸ್ಯೆಗೆ ಮುಕ್ತಿ ನೀಡಲು ಸರ್ಕಾರ ಮುಂದಾಗಿದೆ.  

ಈ ವಿಚಾರವಾಗಿ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು, ಬೆಳ್ಳಂದೂರು ಸುತ್ತಮುತ್ತ ಜನರಿಗೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗ್ತಿರೋ ಬಗ್ಗೆ ದೂರುಗಳು ಬಂದಿದ್ದವು. ನಾವು ಅಲ್ಲಿನ ಜನರ ಸಮಸ್ಯೆ ಆಲಿಸಿದ್ದೆವು. ಐಟಿ ಹಬ್‌ನವರಿಗೆ ಮುಂದಿನ ದಿನಗಳಲ್ಲಿ ಸ್ಪೆಷಲ್ ನ್ಯೂಸ್ ಕೊಡ್ತೇವೆ ಐಟಿ ಹಬ್‌ಗೆ ಹೋಗಲು ಜನರಿಗೆ ಸಮಸ್ಯೆಯಾಗದಂತೆ ಹೊಸ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಐಟಿ ಹಬ್ ಜನರಿಗೆ ಆಗುತ್ತಿರುವ ತೊಂದರೆ ಬಗ್ಗೆ  ರಕ್ಷಣಾ ಸಚಿವರಿಗೆ ನಾನು ಸಿಎಂ ಮನವಿ ಸಲ್ಲಿಸಿದ್ದೆವು ಹೀಗಾಗಿ 22 ಎಕರೆ ಜಮೀನು ಹೊಸ ರಸ್ತೆ ನಿರ್ಮಾಣಕ್ಕೆ ಕೊಟ್ಟಿದ್ದಾರೆ. ಆ ಪೈಕಿ 12 ಎಕರೆ ಭೂಮಿಯನ್ನ ತಮ್ಮ ಸುಪರ್ದಿಗೆ ನೀಡಿದ್ದಾರೆ. ಸಹಕಾರ ಕೊಟ್ಟ ಅಧಿಕಾರಿಗಳು ರಿಟೈರ್ ಆಗ್ತಿದ್ದಾರೆ. ಹೀಗಾಗಿ ಅವರಿಗೆ ಸನ್ಮಾನಿಸಿದ್ದೇವೆ ಎಂದರು.

Latest Videos

'ನಾನು ಸರಿಯಾದ ಶಿಕ್ಷಣ ಇಲ್ಲದ ವಿದ್ಯಾರ್ಥಿ, ಅದರ ಮಹತ್ವ ಅರಿವಿದೆ ..'; ಡಿಕೆ ಶಿವಕುಮಾರ ಮಾತು

ಈಗಾಗಲೇ ಈಜಿಪುರ-ಬೆಳ್ಳಂದೂರು ನಡುವಿನ  3.5 ಕಿಮೀಗೆ 32 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಟೆಂಡರ್ ಕೂಡ ಕರೆದಿದ್ದೇವೆ. ಅವರು ಪೇಪರ್ಸ್ ನಮಗೆ ಕೊಟ್ಟಿದ್ದಾರೆ. ಇನ್ನು ಹೆಬ್ಬಾಳ ಬಳಿ ಎರಡು ಎಕರೆ ಜಮೀನಿಗೆ ಕೇಳಿದ್ದೇವೆ. ಶೀಘ್ರದಲ್ಲೇ ಅದಕ್ಕೆ ಮನವಿ ಸಲ್ಲಿಸುತ್ತೇವೆ. ಔಟರ್ ರಿಂಗ್ ರೋಡ್ ಗಾಗಿ ಕೇಳ್ತೇವೆ. ಇದರಿಂದ ಮುಂದಿನ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಯಲಿದೆ ಎಂದು ಭರವಸೆ ನೀಡಿದರು.

ಬಿಬಿಎಂಪಿ-ರಕ್ಷಣಾ ಇಲಾಖೆ ವಿಚಾರ:

ಇನ್ನು ಬಿಬಿಎಂಪಿ ರಕ್ಷಣಾ ಇಲಾಖೆ ನಡುವಿನ ವಿವಾದ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಅವರಿಗೆ ಅವರದ್ದೇ ಆದ ಕೆಲಸಗಳಿವೆ. ಹಾಗಾಗಿ ಸ್ವಲ್ಪ ವಿಳಂಬ ಅಗಿರಬಹುದು. ಆದರೆ ನಮಗೆ ಸಹಕಾರ ಕೊಡ್ತಿದ್ದಾರೆ. ಎಮರ್ಜೆನ್ಸಿ ಇರುವ ಕಡೆ ನಾವು ಮನವಿ ಇಡ್ತೇವೆ. ಟನಲ್ ರಸ್ತೆಗೆ ಹೆಬ್ಬಾಳದಲ್ಲಿ ಬೇಕಿದೆ. ಹಾಗಾಗಿ ಅಲ್ಲಿ ರಕ್ಷಣಾ ಇಲಾಖೆ ಜಾಗ ಬೇಕು ಹೀಗಾಗಿ ನಾವು ಮನವಿ ಮಾಡುತ್ತೇವೆ ಎಂದರು.

ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಇದೆ. ಮಹಾತ್ಮಗಾಂಧಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು. ಎಐಸಿಸಿ ನಾಯಕತ್ವ ವಹಿಸಿ ಇಂದಿಗೆ 100 ವರ್ಷ ಆಗ್ತಿದೆ. ಹೀಗಾಗಿ ಸರ್ಕಾರ ಈ ವರ್ಷ ಹಬ್ಬದ ರೀತಿ ಕಾರ್ಯಕ್ರಮ ಮಾಡಲು ತೀರ್ಮಾನ ಮಾಡಿದೆ. ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಅ.2 ರಂದು ಸ್ವಚ್ಛತಾ ಅಭಿಯಾನ ಪ್ರಾರಂಭ ಮಾಡುತ್ತೇವೆ. ಗಾಂಧಿ ಭವನದಿಂದ ಗಾಂಧಿ ಪ್ರತಿಮೆ ವರೆಗೆ ಒಂದು ಕಿ.ಮೀ ನಡಿಗೆ ಹಮ್ಮಿಕೊಂಡಿದ್ದೇವೆ. ಇದು ಜಿಲ್ಲಾ ಕೇಂದ್ರಗಳಲ್ಲೂ ನಡೆಯುತ್ತದೆ. ಅಂದು ಬಿಳಿಬಟ್ಟೆ ಗಾಂಧಿ ಟೋಪಿ ಹಾಕಿ ಹೆಜ್ಜೆ ಹಾಕಲಿದ್ದಾರೆ. ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸ್ತೇವೆ. ಬ್ಯಾಂಕ್ವೆಟ್ ಹಾಲ್‌ನಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋಧಿಸುತ್ತೇವೆ. ಗಾಂಧಿ ಆದರ್ಶಗಳನ್ನು ಯುವಪೀಳಿಗೆಗಳಿಗೆ ತಿಳಿಸುವುದು ಇಂದಿನ ಅಗತ್ಯವಾಗಿದೆ ಎಂದರು.

ಸಿಬಿಐ ತನಿಖೆಗೆ ಸರ್ಕಾರದ ಅನುಮತಿ ಪಡೆಯುವುದು ಹೊಸದೇನಲ್ಲ: ಗೃಹ ಸಚಿವ

ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್ಐಆರ್:

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್ಐಆರ್ ಆಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಏನಿದೆ ಎಂದು ತಿಳಿದುಕೊಂಡು ಅನಂತರ ಮಾತನಾಡುತ್ತೇನೆ ಎಂದರು. ಇನ್ನು ಸಿದ್ದರಾಮಯ್ಯ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಅದರ ಬಗ್ಗೆ ಎಐಸಿಸಿ ಅಧ್ಯಕ್ಷರೇ ಮಾತನಾಡಿದ್ದಾರೆ. ಹೀಗಾಗಿ ಹೆಚ್ಚಿಗೆ ಹೇಳುವುದೇನಿಲ್ಲ ಎಂದರು.

click me!