
ವರದಿ- ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾಸನ
ಹಾಸನ ಡಿ.05: ಕಾಂಗ್ರೆಸ್ ಪಕ್ಷ ರಾಜ್ಯ-ದೇಶದಲ್ಲಿ ಅಧಿಕಾರ ನಡೆಸಿದಾಗ ಅನೇಕ ಶಾಶ್ವತ ಯೋಜನೆ ಜಾರಿಗೆ ತಂದು ಗ್ಯಾರಂಟಿಗಳನ್ನು ಉಳಿಸಿದೆ. ಆದರೆ ನಿಮ್ಮ ಗ್ಯಾರಂಟಿ ಏನು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.
ಹಾಸನದಲ್ಲಿ ನಡೆದ ಜನಕಲ್ಯಾಣ ಸಮಾವೇಶದಲ್ಲಿ ಮಾತನಾಡಿದ ಅವರು, ಕನಕಪುರ ಬಂಡೆ ಸಿದ್ದರಾಮಯ್ಯ ಜೊತೆ ನಿಲ್ಲಲಿದೆ ಎಂದು ಮೈಸೂರಲ್ಲಿ ಹೇಳಿದ್ದೆ. ಇಲ್ಲೂ ಹೇಳುವೆ, ಸಾಯೋವರೆಗೂ ಅವರ ಜೊತೆ ಇರುವೆ ಎಂದರು.
ಅಧಿಕಾರ ಹಂಚಿಕೆ ಸೂತ್ರ: ಡಿಕೆಶಿ ಹೇಳಿಕೆ ಸಿಎಂ ಸಿದ್ದರಾಮಯ್ಯ ತಿರುಗೇಟು!
ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಅಧಿಕಾರ ಸಿಕ್ಕಂತೆ ಎಂದ ಅವರು, ಜಿಲ್ಲೆಯಲ್ಲಾಗಿರುವ ಅನ್ಯಾಯದ ವಿರುದ್ಧ ೨೫ ವರ್ಷದ ನಂತರ ಇಲ್ಲಿ ಶ್ರೇಯಸ್ ಪಟೇಲ್ ಗೆಲ್ಲಿಸಿದ್ದೀರಿ. ಮುಂದೆಯೂ ಎಂಪಿ ಜೊತೆಗೆ ಏಳೂ ಸ್ಥಾನಗಳಲ್ಲೂ ಕಾಂಗ್ರೆಸ್ ಗೆಲ್ಲಬೇಕು, ಗೆಲ್ಲಲಿದೆ ಎಂದು ಭವಿಷ್ಯ ನುಡಿದರು. ನಮ್ಮ ಐದು ಗ್ಯಾರಂಟಿ ಪರ್ಮನೆಂಟು, ಹಾಗೆಯೇ ೨೦೨೮ ರಲ್ಲೂ ನಾವೇ ಅಧಿಕಾರಕ್ಕೆ ಬರೋದು ಗ್ಯಾರಂಟಿ. ಯಾರೂ ಬದಲಿಸಲು ಆಗಲ್ಲ ಎಂದರು. ಬರೀ ಸುಳ್ಳು ಹೇಳುವ ಬಿಜೆಪಿ-ಜೆಡಿಎಸ್ಗೆ ಉಪ ಚುನಾವಣೆಯಲ್ಲಿ ಜನ ಉತ್ತರ ಕೊಟ್ಟಿದ್ದಾರೆ. ರಾಮನಗರದಲ್ಲಿ ೪ ಕ್ಕೆ ೪ ಕಾಂಗ್ರೆಸ್ ಗೆದ್ದಿದೆ. ಮಂಡ್ಯದಲ್ಲಿ ೬, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಕೊಡಗಿನಲ್ಲೂ ಗೆದ್ದಿದ್ದೇವೆ. ಮುಂದೆ ಹಾಸನದಲ್ಲಿ ಗೆಲ್ಲುತ್ತೇವೆ. ಅದಕ್ಕೆ ಸಹಕಾರ ಕೊಡಿ ಎಂದು ಮನವಿ ಮಾಡಿದರು.
ಕೇಂದ್ರದಲ್ಲಿ ನಮ್ಮ ಸರ್ಕಾರ ಅನೇಕ ಗ್ಯಾರಂಟಿ ತಂದಿದೆ. ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಯಾರೂ ಸಾಧ್ಯವಿಲ್ಲ.ಜೊತೆಗೆ ಐದು ಗ್ಯಾರಂಟಿ ತಂದಿದ್ದೇವೆ. ನಿಮ್ಮ ಕೊಡುಗೆ ಏನು ಎಂದು ಕುಮಾರಸ್ವಾಮಿ, ದೇವೇಗೌಡರನ್ನು ಪ್ರಶ್ನಿಸಿದರು. ಚುನಾವಣೆ ವೇಳೆ ಕಣ್ಣೀರು ಹಾಕುತ್ತೀರಿ, ಆದರೆ ನಿಮ್ಮ ಸಾಕ್ಷಿ ಗುಡ್ಡೆ ಏನು ರಾಜ್ಯದಲ್ಲಿ ಎಂಬುದಕ್ಕೆ ಉತ್ತರ ಕೊಡಿ ಎಂದರು.
ಹಾಗೆಯೇ ಅಶೋಕ್,ವಿಜಯೇಂದ್ರ ತಂತ್ರ-ತಂತ್ರ ಕುತಂತ್ರ ನಡೆಯಲಿಲ್ಲ.ಕಾಂಗ್ರೆಸ್ಗೆ ಜನಶಸ್ತಿ ಇತ್ತೀಚೆಗೆ ೩ ಕಡೆ ಉತ್ತರ ಕೊಟ್ಟಿದೆ. ಮುಂದೆಯೂ ರಾಜ್ಯದ ಜನ ನಿಮ್ಮ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾಂಗ್ರೆಸ್ನಲ್ಲಿ 2.5 ವರ್ಷಕ್ಕೆ ಸಿಎಂ ಹುದ್ದೆ ಹಂಚಿಕೆ ಒಪ್ಪಂದದ ಗುಟ್ಟು ಬಿಚ್ಚಿಟ್ಟ ಡಿ.ಕೆ, ಶಿವಕುಮಾರ್
ದೇವೇಗೌಡರೇ ಆರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಕಿತ್ತು ಹಾಕುವೆ ಅಂದ್ರಿ, ಇದೇನು ಹಾಸನದಲ್ಲಿ ಬೆಳೆದಿರುವ ಆಲೂಗೆಡ್ಡೆನಾ ಅಥವಾ ಕಡ್ಲೇಕಾಯಿ ಗಿಡನಾ ಎಂದು ಲೇವಡಿ ಮಾಡಿದರು. ೧೩೮ ಶಾಸಕರ, ಜನ ಬೆಂಬಲದ ಸರ್ಕಾರ ಕಿತ್ತು ಹಾಕುವುದು ನಿಮ್ಮ ಹಣೆಯಲ್ಲಿ ಬರೆದಿಲ್ಲ ಎಂದು ತಿರುಗೇಟು ನೀಡಿದರು. ಸಮಾವೇಶದಲ್ಲಿ ಸಚಿವರಾದ ಭೋಸರಾಜು, ಕೆ.ಜೆ.ಜಾರ್ಜ್, ಶಿವರಾಜ್ ಎಸ್.ತಂಗಡಗಿ, ಎನ್.ಚಲುವರಾಯಸ್ವಾಮಿ, ಸತೀಶ್ ಜಾರಕಿಹೊಳಿ, ಆರ್.ಬಿ.ತಿಮ್ಮಾಪುರ, ಬೈರತಿ ಸುರೇಶ್, ಹೆಚ್.ಕೆ.ಪಾಟೀಲ್, ಶರಣಪ್ರಕಾಶ್ ಪಾಟೀಲ್, ರಹೀಂಖಾನ್, ಡಿ.ಸುಧಾಕರ್, ರಾಜ್ಯಸಭಾ ಸದಸ್ಯ ಚಂದ್ರಶೇಖರ್ ಇದ್ದರು. ಸಂಸದ ಶ್ರೇಯಸ್ ಎಲ್ಲರನ್ನೂ ಸ್ವಾಗತಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ