ಲೋಕಸಭೆ ಚುನಾವಣೆ ಮುಗಿತ್ತಿದ್ದಂತೆ, ರಾಜ್ಯಕ್ಕೆ 3 ಡಿಸಿಎಂ ಕ್ಯಾತೆ ತೆಗೆದ ಸಚಿವ ಕೆ.ಎನ್. ರಾಜಣ್ಣ

By Sathish Kumar KHFirst Published Jun 11, 2024, 7:47 PM IST
Highlights

ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆ ಬರುತ್ತಿದೆ. ಈಗ ರಾಜ್ಯಕ್ಕೆ ಮೂವರು ಉಪ ಮುಖ್ಯಮಂತ್ರಿಗಳು ಬೇಕೇ ಬೇಕು ಎಂದು ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಪುನಃ ಡಿಸಿಎಂ ಖಾತೆಯ ಕ್ಯಾತೆ ಆರಂಭಿಸಿದ್ದಾರೆ.

ತುಮಕೂರು (ಜೂ.11): ಈಗ ದೇಶದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆ ಬರುತ್ತಿದೆ. ಈಗ ರಾಜ್ಯಕ್ಕೆ ಮೂವರು ಉಪ ಮುಖ್ಯಮಂತ್ರಿಗಳು ಬೇಕೇ ಬೇಕು ಎಂದು ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಪುನಃ ಡಿಸಿಎಂ ಖಾತೆಯ ಕ್ಯಾತೆ ಆರಂಭಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೂವರು ಡಿಸಿಎಂ ಆಗಬೇಕು (Karnataka State government 3 Deputy Chief Minister Post) ಎನ್ನುವದು ನನ್ನ  ನಿರಂತರ ವಾದವಾಗಿದ್ದು, ಅದನ್ನು ಮುಂದುವರೆಸುತ್ತೇನೆ. ಲೋಕಸಭೆ ಚುನಾವಣೆ ಮುಗಿದು ಈಗ ಲೋಕಲ್ ಬಾಡಿ ಚುನಾವಣೆ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೂವರು ಡಿಸಿಎಂ ಬೇಕು. ಲೋಕಸಭಾ ಚುನಾವಣೆ ಇರೋದ್ರಿಂದ ಖರ್ಗೆ ಅವರು ಸುಮ್ಮನಿರಲು ಹೇಳಿದ್ದರು. ಹಾಗಾಗಿ, ಇಷ್ಟು ದಿನ ಸುಮ್ಮನಿದ್ದೆ ಅದರ ಬಗ್ಗೆ ಮಾತಾಡಿರಲಿಲ್ಲ. ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರೇ ಲೋಕಸಭಾ ಚುನಾವಣೆ ವೇಳೆ ಸುಮ್ಮನಿರುವಂತೆ ಸೂಚಿಸಿದ್ದರು. ಆದರೆ, ಈಗ ಚುನಾವಣೆ ಮುಗಿದ ಹಿನ್ನೆಲೆಯಲ್ಲಿ ನಾನೇ ಖರ್ಗೆ ಅವರನ್ನು ಮತ್ತೊಮ್ಮೆ  ಖುದ್ದಾಗಿ ಭೇಟಿ ಮಾಡಿ 3 ಡಿಸಿಎಂ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.

Latest Videos

ಒಂದು ಏಟು ಕಪಾಳಕ್ಕೆ ಹೊಡೆದು ವಾರ್ನಿಂಗ್ ಮಾಡಿದ್ದೆ, ಆತನಿಗೆ ಊಟ ಕೊಟ್ಟು ಕಳಿಸಿಬಿಡಿ ಎಂದಿದ್ದೆ; ನಟ ದರ್ಶನ್ ಹೇಳಿಕೆ

 ತುಮಕೂರು ಜಿಲ್ಲೆಯಲ್ಲಿ ಈ‌ ಚುನಾವಣೆಯಲ್ಲಿ ಶತ್ರುಗಳ ಶತ್ರು ಮಿತ್ರರಾಗಿದ್ದಾರೆ. ಜೆಡಿಎಸ್- ಬಿಜೆಪಿ ನಮ್ಮ ಶತ್ರುಗಳು. ಇಬ್ಬರೂ ಮಿತ್ರರಾಗಿ ಗೆಲುವು ಸಾಧಿಸಿದ್ದಾರೆ. ಅವರ ಮಿತ್ರತ್ವ ಎಷ್ಟು ದಿನ ಇರತ್ತೋ ನೋಡೋಣ. ನರೇಂದ್ರ ಮೋದಿ ಪ್ರಧಾನಿ ಆದರೆ ದೇವೇಗೌಡರು ದೇಶ ಬಿಟ್ಟು ಹೋಗ್ತಿನಿ ಅಂದಿದ್ದರು. ಈಗ ನೀನೇ ಕಣಪ್ಪ ದೇಶ ಕಾಪಾಡೋನು ಅಂತಾ‌ ಸ್ವಾರ್ಥಕ್ಕಾಗಿ ಊಸರವಳ್ಳಿ ಥರ ಬಣ್ಣ ಬದಲಾಯಿಸುತ್ತಾರೆ. ಇನ್ನು ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ರಾಜಕಾರಣಕ್ಕೆ ಬರುತ್ತಾರೆ, ‌ಸಿಎಂ ಆಗುತ್ತಾರೆ ಎಂಬ ವಿಚಾರದ ಬಗ್ಗೆ ಮಾತನಾಡಿ, ಖರ್ಗೆ ಅವರು ಮುಖ್ಯಮಂತ್ರಿ ಆಗಬೇಕು ಅನ್ನೋದನ್ನು ಅಪೇಕ್ಷೆ ಪಡೋದನ್ನು ಯಾರೂ ಅಡ್ಡಿ ಪಡಿಸೋಕೆ ಆಗಲ್ಲ. ಇದನ್ನು ಯಾರೂ ತಪ್ಪಿಸೋಕೂ ಆಗಲ್ಲ. ಆದರೆ, ಖರ್ಗೆ ಅವರು ಮುಖ್ಯಮಂತ್ರಿ ಆಗುವ ಸಾಧ್ಯತೆಯಿದ್ದರೆ ಆಗಲೇ ಆಗುತ್ತಿದ್ದರು ಎಂದು ಹೇಳಿದರು.

ಮುಖ್ಯಮಂತ್ರಿ ಬದಲಾವಣೆ ವಿಚಾರ ಯಾಕೆ ಬರುತ್ತದೆ? ಒಂದು ವರ್ಷ ಸಿದ್ದರಾಮಯ್ಯ ಕೆಲಸ ಮಾಡೋದ್ರಲ್ಲಿ ಹಿಂದೆ ಬಿದ್ದಿದ್ದಾರಾ? ಅಥವಾ ಯಾವುದಾದರೂ ಹಗರಣ ಇದಾವಾ? ಇಲ್ಲ ಅಂದಮೇಲೆ ಯಾವ ಆಧಾರದ ಮೇಲೆ ಅವರನ್ನು ಬದಲಾಯಿಸಲು ಹೋಗುತ್ತಾರೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಮುಂದುವರಿಯಲಿದೆ ಎಂದು ಸಿದ್ದರಾಮಯ್ಯನವರೇ ಹೇಳಿದ್ದಾರೆ. ಯಾವ ಸಚಿವರ ಖಾತೆಗಳೂ ಬದಲಾವಣೆ ಆಗೋದಿಲ್ಲ. ಇನ್ನು ಜಿಲ್ಲಾ ಉಸ್ತುವಾರಿಗಳ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿ, ಹಾಸನ ಜಿಲ್ಲೆ ಉಸ್ತುವಾರಿ ಬದಲಾವಣೆ ಮಾಡ್ತಾರಾ? ಮಾಡಿದ್ರೆ ಮಾಡಲಿ, ನಾನು ಯಾವಾಗಲೂ ಕೇಳಿರಲಿಲ್ಲ. ವಾಪಸ್ ತಗೊಂಡ್ರೆ ವಾಪಸ್ ತಗೊಳಲಿ ಎಂದು ಹೇಳಿದರು.

ದರ್ಶನ್‌ನಿಂದ ಕೊಲೆಯಾದ ಬಜರಂಗದಳ ಕಾರ್ಯಕರ್ತ ರೇಣುಕಾಸ್ವಾಮಿ ಹೆಂಡ್ತಿ 5 ತಿಂಗಳ ಗರ್ಭಿಣಿ

ತುಮಕೂರಿನಿಂದ ವಿ.ಸೋಮಣ್ಣ ಗೆದ್ದು ಮಂತ್ರಿಯಾಗಿದ್ದಾರೆ. ಅವರು ಮಂತ್ರಿ ಆಗಿರೋದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಜಿಲ್ಲೆಯ ಇತಿಹಾಸದಲ್ಲಿ ಯಾರೂ ಕೇಂದ್ರದ ಮಂತ್ರಿ ಆಗಿರಲಿಲ್ಲ. ಇವರು ಆಗಿದ್ದಾರೆ, ಸೋಮಣ್ಣ ಜನಪರ ಕೆಲಸ ಮಾಡೋರು ಅಂತಾ ಹೇಳುತ್ತಾರೆ ಅದು ಸಾಧಿಸಿ ತೋರಿಸಲಿ. ತುಮಕೂರು ರಾಯದುರ್ಗ ರೈಲ್ವೇ ಮಾರ್ಗ ಪೂರ್ಣಗೊಳಿಸಲಿ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಹಣ ತರಲಿ. ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್ ಗೆ  ನನ್ನ ಹಾಗೂ ಜಿ.ಪರಮೇಶ್ವರ್ ಇಬ್ಬರ ವಿರೋಧ ಇದೆ. ಎಲ್ಲಿ ಗಟ್ಟಿ ಧ್ವನಿಯಲ್ಲಿ ಮಾತಾಡಬೇಕೋ ಅಲ್ಲಿ ಮಾತಾಡಿದ್ದೇವೆ. ಏನೇ ಕಾಮಗಾರಿ ಆದರೂ ನೀರು ಕೊಡದಂತೆ ನಾವು ತಡೆಯುತ್ತೇವೆ ಎಂದು ಹೇಳಿದರು.

ಬೆಳಗಾವಿ ಕಾಂಗ್ರೆಸ್ ನಲ್ಲಿ ಆತಂಕರಿಕ ಕಚ್ಚಾಟ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಅದು ಸೋಲಿನ ಬಳಿಕ ಸಹಜವಾಗಿ ಏಳುವ ಅಸಮಾಧಾನವಾಗಿದೆ. ಅದು ಸೋತವರಿಗೆ ಆಗುವ ಸಹಜ ಅಸಮಾಧಾನ, ಮುಂದೆ ಅದು ಸರಿಯಾಗಲಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗೋದಕ್ಕೆ ಸಿಎಂ ಕುರ್ಚಿ ಖಾಲಿ ಇದೆಯಾ? ಆ ಜಾಗದಲ್ಲಿ ಸಿದ್ದರಾಮಯ್ಯನವರು ಇಲ್ಲವಾ? ಖಾಲಿ ಆದನಂತರ ಯಾರನ್ನು ಮಾಡುತ್ತಾರೆ ಎಂಬ ಪ್ರಶ್ನೆಗೆ, ಸಿದ್ದರಾಮಯ್ಯನವರು ಖಾಲಿ ಆಗಲ್ಲ. ಐದು ವರ್ಷನೂ ಅವರೇ ಇರೋದು ಎಂದು ಹೇಳಿದರು.

click me!