
ಬಳ್ಳಾರಿ (ಡಿ.8): ಪ್ರಜಾಪ್ರಭುತ್ವ ಉಳಿಸಲು ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ಬಿಜೆಪಿ ಸಂವಿಧಾನ ಪರ ಇರುವ ಪಕ್ಷವಲ್ಲ, ಸಾಮಾಜಿಕ ನ್ಯಾಯದ ಪರ ಇರುವ ಪಕ್ಷವಲ್ಲ. ನಾನು ಚುನಾವಣೆಗೆ ಮುಂಚೆ ಈ ಮಾತು ಹೇಳಿದ್ದೆ, ನಮ್ಮ ಮಾತು ಜನರು ಪುರಸ್ಕಾರ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಸಂಡೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲವು ಸಾದಿಸಿದ್ದ ಹಿನ್ನೆಲೆ ಸಂಡೂರಿನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನಾವು ಪಕ್ಷದ ಮತ್ತು ಸರ್ಕಾರದ ಕಾರ್ಯಕ್ರಮ ಜನರ ಮುಂದಿಟ್ಟಿದ್ದೇವೆ. ಜನರು ನಮಗೆ ಬೆಂಬಲ ನೀಡಿದ್ದಾರೆ. ಚುನಾವಣೆ ಪೂರ್ವ ಕೊಟ್ಟ ಭರವಸೆಯಂತೆ ನಡೆದುಕೊಂಡಿದ್ದೇವೆ. ಇಂದು ಐದು ಗ್ಯಾರಂಟಿ ಯೋಜನೆಗಳು ಜನರನ್ನು ತಲುಪಿವೆ. ಜಾತಿ, ಧರ್ಮ, ರಾಜಕೀಯ ಪಕ್ಷ, ಕಾರ್ಯಕರ್ತ ಎಂದು ಭೇದಭಾವ ಮಾಡದೇ ಗ್ಯಾರಂಟಿ ಯೋಜನೆ ನೀಡಿದ್ದೇವೆ. ಗ್ಯಾರಂಟಿ ಯೋಜನೆ ಹಿನ್ನಲೆ ಸರ್ಕಾರಕ್ಕೆ ಶಕ್ತಿ ತುಂಬಬೇಕು ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.
ಗಂಡಸರಿಗೂ ಫ್ರೀ ಟಿಕೆಟ್ ಕೊಟ್ರೆ ಕೆಎಸ್ಆರ್ಟಿಸಿ ಮುಚ್ಚಬೇಕಾಗುತ್ತೆ: ಸಿಎಂ ಸಿದ್ದರಾಮಯ್ಯ
ದೇಶದ ಇತಿಹಾಸದಲ್ಲಿ ಯಾವ ಸರ್ಕಾರ ಕೂಡ ಬಡವರಿಗೆ, ಮಹಿಳೆಯರಿಗೆ, ದಲಿತರಿಗೆ, ಅಲ್ಪ ಸಂಖ್ಯಾತರಿಗೆ ಶಕ್ತಿ ತುಂಬಿರಲಿಲ್ಲ ಅದನ್ನು ನಮ್ಮ ಪಕ್ಷ ಮಾಡಿದೆ. ಅಧಿಕಾರ ಕೊಟ್ರೇ ಐದು ಗ್ಯಾರಂಟಿ ಕೊಡ್ತೇವೆ ಎಂದಿದ್ದೇವು ಅದನ್ನು ಮಾಡಿದ್ದೇವೆ ಹೊರತು ನಾವು ಯಾವತ್ತೂ ಜನದ್ರೋಹ ಮಾಡಿಲ್ಲ. ಬಿಜೆಪಿ ಕೊಟ್ಟ ಮಾತು ನಡೆದು ಕೊಳ್ಳಲ್ಲ. ಜನದ್ರೋಹ ಮಾಡೋ ಕೆಲಸ ಬಿಜೆಪಿಯವರು ಮಾಡ್ತಾರೆ. ಮೋದಿ ಯಾವೆಲ್ಲ ಭರವಸೆ ನೀಡಿದ್ರು ಒಮ್ಮೆ ನೆನಪು ಮಾಡಿಕೊಳ್ಳಿ. ಕಪ್ಪು ಹಣ ತಂದು ಹದಿನೈದು ಲಕ್ಷ ಕೊಡ್ತೇನೆ ಎಂದ್ರು ಕೊಡಲಿಲ್ಲ, ಎರಡು ಲಕ್ಷ ಹುದ್ದೆ ಸೃಷ್ಟಿ ಮಾಡ್ತಿನಿ ಅಂದ್ರು ಮಾಡಲಿಲ್ಲ. ಅಚ್ಚೇದಿನ್ ಎಂದ್ರು ಅ ದಿನ ಬರಲೇ ಇಲ್ಲ, ಬೆಲೆ ಇಳಿಕೆ ಮಾಡ್ತೇವೆ ಎಂದು ಹೇಳಿದ್ರು ಬೆಲೆ ಇಳಿಕೆ ಮಾಡಲಿಲ್ಲ. ಈ ಬಿಜೆಪಿಯವರು ಹಿಂದೆ ಅಪರೇಷನ ಕಮಲ ಮಾಡಿ ಅಧಿಕಾರಕ್ಕೆ ಬಂದ್ರು. ಶಾಸಕರನ್ನು ಖರೀದಿ ಮಾಡಿ ಅಧಿಕಾರಕ್ಕೆ ಬಂದ್ರು. ನಕಾವುಂಗ ನಾ ಖಾನೆದುಂಗಾ ಎಂದ ಮೋದಿಯವರು, ಶಾಸಕರ ಖರೀದಿಗೆ ಹಣ ಎಲ್ಲಿಂದ ಬಂತು ಉತ್ತರಿಸಬೇಕು. ಪ್ರಾಮಾಣಿಕತೆ ಬಗ್ಗೆ ಮಾತನಾಡಲು ಬಿಜೆಪಿ ಮತ್ತು ಮೋದಿ ಗೆ ನೈತಿಕತೆ ಇಲ್ಲ. ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಜನಾರ್ದನ ರೆಡ್ಡಿ ವಿರುದ್ಧ ಕಿಡಿ:
ಈ ಚುನಾವಣೇಲಿ ಜನಾರ್ದನ ರೆಡ್ಡಿ ಇಲ್ಲಿಗೆ ಬಂದು ಬಿಜೆಪಿ ಗೆಲ್ಲಿಸುವೆ ಎಂದಿದ್ರು ಏನಾಯ್ತು? ಬಳ್ಳಾರಿಗೆ ಕಳಂಕ ತಂದವರು ಜನಾರ್ದನ ರೆಡ್ಡಿ. ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ್ದು ಜನಾರ್ದನ ರೆಡ್ಡಿ. ಅಕ್ರಮ ಗಣಿಗಾರಿಕೆ ಬಗ್ಗೆ ಸಂತೋಷ ಹೆಗಡೆ ವರದಿ ಕೊಟ್ಟರು, ಅಕ್ರಮ ಮಾಡಿರೋ ಬಗ್ಗೆ ಹೇಳಿದ್ದಾರೆ. ರಿಪಬ್ಲಿಕ್ ಆಫ್ ಬಳ್ಳಾರಿ ಬಗ್ಗೆ ಹೆಗಡೆ ಉಲ್ಲೇಖ ಮಾಡಿದ್ರು. ಸದನದಲ್ಲಿ ಮಾತನಾಡಿದ್ದಕ್ಕೆ ನನ್ನ ಮೇಲೆ ಎಗರಿ ಬಿದ್ರು. ಜನಾರ್ದನ ರೆಡ್ಡಿ, ಶ್ರೀರಾಮುಲು, ಸೋಮಶೇಖರ್ ರೆಡ್ಡಿ ಮೈಮೇಲೆ ಬಂದ್ರು. ಸುರೇಶ್ ಬಾಬು ಮೈಮೇಲೆ ಬಂದ ಅವನಿಗೆ ಕಾಲು ಮುರಿಯುವೆ ಎಂದು ಹೇಳಿದೆ. ಸದನದಲ್ಲಿ ನಡೆದುಕೊಂಡು ಬರುವೆ ಎಂದು ಹೇಳಿ ಪಾದಯಾತ್ರೆ ಮಾಡಿದೆ. ಬಳ್ಳಾರಿಗೆ ಪಾದಯಾತ್ರೆ ಮಾಡಿದೆ ಅವರಿಗೆ ಎನು ಮಾಡೋಕೆ ಅಗಲಿಲ್ಲ. ಜನಾರ್ದನ ರೆಡ್ಡಿ ಸುಳ್ಳಿಗೆ ಸಂಡೂರು ಜನರು ಮನ್ನಣೆ ಹಾಕಲಿಲ್ಲ. ಒಂದಲ್ಲ ಎರಡಲ್ಲ ಮೂರು ಚುನಾವಣೆ ಕಡೆ ಅಪಪ್ರಚಾರ ಮಾಡಿದ್ರು. ಅದರೆ ಜನರು ನಮಗೆ ಬೆಂಬಲ ನೀಡಿದ್ರು. ಜನರ ಋಣ ತೀರಿಸಲು ಸಾಧ್ಯವಿಲ್ಲ. ರಾಜಕುಮಾರ ಅಭಿಮಾನಿ ದೇವರು ಎಂದರು. ಆದರೆ ನಾನು ಮತದಾರರೇ ದೇವರುಗಳು ಎನ್ನುವೆ. ಮತದಾರ ದೇವರುಗಳಿಂದಲೇ ನಾವಿಂದು 136 ಸ್ಥಾನ ಗೆದ್ದಿರೋದು ಎಂದರು.
ರಾಹುಲ್ ಗಾಂಧಿಯನ್ನು ದೇಶದ್ರೋಹಿ ಎಂದವರೇ ನಿಜವಾದ ದೇಶದ್ರೋಹಿ: ಸಿದ್ದರಾಮಯ್ಯ
ಸಿದ್ದರಾಮಯ್ಯ ಸರ್ಕಾರ ಬಿದ್ದೋಗ್ತದೆ ಅಂತಾ ಅಶೋಕ್ ಕುಮಾರಸ್ವಾಮಿ ಕಾಯ್ತಾ ಇದ್ದಾರೆ. ಆದ್ರೆ ನಮ್ಮ ಸರ್ಕಾರ ಬಿಳೋಲ್ಲ. ಅವರು ಕನಸು ಕಾಣಲಿ. ಐದು ವರ್ಷ ನಾವೇ ಅಧಿಕಾರದಲ್ಲಿರುತ್ತೇವೆ. ಜನ ಬೆಂಬಲ ಇರೋವರೆಗೆ ನಮ್ಮನ್ನ ಯಾರೂ ಬಗ್ಗಿಸೋಕೆ ಆಗೊಲ್ಲ. 2028ರವರೆಗೂ ಅಧಿಕಾರದಲ್ಲಿ ಇರುತ್ತೇವೆ. ಯಾವುದೇ ಗ್ಯಾರಂಟಿ ಅಲ್ಲಿಯವರೆಗೂ ನಿಲ್ಲಿಸಲ್ಲ. 2028ರಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದು ಯೋಜನೆ ಮುಂದುವರೆಸುತ್ತೇವೆ. ಅಭಿವೃದ್ಧಿ ಕೆಲಸಕ್ಕೆ ದುಡ್ಡಿಲ್ಲ ಎನ್ನುವದು ಸುಳ್ಳು. ಅಭಿವೃದ್ಧಿ ಮಾಡುತ್ತೇವೆ ಎಂದರು.
ಪ್ರಧಾನಿಗಳಾಗಿ ಸುಳ್ಳು ಹೇಳಬಾರದು
ಶಿಗ್ಗಾವಿ ಚನ್ನಪಟ್ಟಣದಲ್ಲಿ ತಮ್ಮ ಮಕ್ಕಳನ್ನು ಅಭ್ಯರ್ಥಿ ಮಾಡಿ ನೂರಾರು ಕೋಟಿ ಖರ್ಚು ಮಾಡಿದ್ರು. ಆದರೆ ಜನರು ಅವರು ಗೆದ್ದ ಕ್ಷೇತ್ರದಲ್ಲೇ ನಮ್ಮನ್ನು ಗೆಲ್ಲಿಸಿದ್ರು. ಶಿಗ್ಗಾವಿ, ಚನ್ನಪಟ್ಟಣದಲ್ಲಿ 25 ವರ್ಷದಿಂದ ಗೆಲ್ಲೋಕೆ ಅಗಿರಲಿಲ್ಲ. ಜನರ ಮನಸ್ಸು ಗೆಲ್ಲಿರಿ, ಅಪಪ್ರಚಾರ ಮಾಡೋದು ಬಿಡಿ ಮಾನ ಮಾರ್ಯದೆ ಇದ್ರೇ ಸರ್ಕಾರದ ಜೊತೆಗೆ ಸಹಕರಿಸಿ.ಟೀಕೆ ಮಾಡಲು ಬೇಡ ಎನ್ನಲ್ಲ, ಆದ್ರೇ ಸುಳ್ಳು ಅರೋಪ ಅಪಪ್ರಚಾರ ಮಾಡಬಾರದು. ವಕ್ಫ್ ಪ್ರಾಪರ್ಟಿ ಮುಡಾ ಬಗ್ಗೆ ಅನಗತ್ಯ ಅಪ್ರಚಾರ ಮಾಡಿದ್ರು. ವಾಲ್ಮೀಕಿ ಹಗರಣದಲ್ಲಿ ಮಂತ್ರಿ ಮುಖ್ಯಮಂತ್ರಿ ಪಾತ್ರ ಇದೆ ಎಂದು ಅಪ್ರಚಾರ ಮಾಡಿದ್ರು. ಅಲ್ಲರಯ್ಯ ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಇನ್ನೊಬ್ಬರ ತಟ್ಟೇಲಿ ನೋಣ ಹೊಡೆಯೋಕೆ ಬರ್ತಿರಲ್ಲ. ಮಹಾರಾಷ್ಟ್ರ ಚುನಾವಣೆಯಲ್ಲಿ ಕರ್ನಾಟಕದ ಹಣ ಬಳಸಿದೆ ಎಂದು ಸುಳ್ಳು ಹೇಳಿದ್ರು. ಇದನ್ನು ಸಾಬೀತು ಮಾಡಿದ್ರೆ ರಾಜಕೀಯ ನಿವೃತ್ತಿ ಪಡೆಯುವೆ, ಸಾಬೀತು ಮಾಡಲಿಲ್ಲ ಎಂದರೆ ನೀವು ರಾಜಕೀಯ ಬಿಡ್ತೀರಾ? ಪ್ರಧಾನಿಗಳಾಗಿ ಸುಳ್ಳು ಹೇಳಬಾರದು ಎಂದು ಸವಾಲು ಹಾಕಿದರು.
ಇನ್ನು ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ ಅವರು, ಈ ಬಗ್ಗೆ ಸಭೆ ಮಾಡಿದ್ದೇವೆ. ಕಳಪೆ ಔಷಧದಿಂದ ಸಾವನ್ನಪ್ಪಿದ್ದಾರೆ ಎಂದು ಗೊತ್ತಾಗಿದೆ. ಮೃತಪಟ್ಟವರಿಗೆ ಎರಡು ಲಕ್ಷ ಪರಿಹಾರ ಘೋಷಣೆ ಮಾಡಿದ್ದೆ. ಆದ್ರೇ ಕುಟುಂಬದ ಸಂಕಷ್ಟ ಆಲಿಸಿ ಐದು ಲಕ್ಷ ಪರಿಹಾರ ಕೊಡ್ತೇವೆ ಎಂದು ಘೋಷಣೆ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ