ಕೇರಳ ಮಾಜಿ ಸಿಎಂ ಉಮ್ಮನ್‌ ಚಾಂಡಿ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ

By BK AshwinFirst Published Jul 18, 2023, 8:59 AM IST
Highlights

ನನಗೆ ಅತ್ಯಂತ ಆತ್ಮೀಯರಾಗಿದ್ದ ಉಮ್ಮನ್‌ ಚಾಂಡಿಯವರ ನಿಧನದ ಸುದ್ದಿ ಆಘಾತಕಾರಿ. ಕೇರಳ‌ ರಾಜ್ಯವನ್ನು ಮಾನವ ಅಭಿವೃದ್ಧಿಯ ಸೂಚ್ಯಂಕಗಳಲ್ಲಿ ಉನ್ನತ ಸ್ಥಾನದಲ್ಲಿ ಇರಿಸಲು ಕಾರಣರಾದ ಮುಖ್ಯಮಂತ್ರಿಗಳಲ್ಲಿ ಉಮ್ಮನ್‌ ಚಾಂಡಿ ಕೂಡ ಒಬ್ಬರಾಗಿದ್ದರು ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಜುಲೈ 18, 2023): ಹಿರಿಯ ರಾಜಕೀಯ ಮುತ್ಸದ್ದಿ ಕೇರಳ ರಾಜ್ಯದ ಮಾಜಿ ಮುಖ್ಯಮಂತ್ರಿ‌ ಉಮ್ಮನ್ ಚಾಂಡಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನನಗೆ ಅತ್ಯಂತ ಆತ್ಮೀಯರಾಗಿದ್ದ ಉಮ್ಮನ್‌ ಚಾಂಡಿಯವರ ನಿಧನದ ಸುದ್ದಿ ಆಘಾತಕಾರಿ. ಕೇರಳ‌ ರಾಜ್ಯವನ್ನು ಮಾನವ ಅಭಿವೃದ್ಧಿಯ ಸೂಚ್ಯಂಕಗಳಲ್ಲಿ ಉನ್ನತ ಸ್ಥಾನದಲ್ಲಿ ಇರಿಸಲು ಕಾರಣರಾದ ಮುಖ್ಯಮಂತ್ರಿಗಳಲ್ಲಿ ಉಮ್ಮನ್‌ ಚಾಂಡಿ ಕೂಡ ಒಬ್ಬರಾಗಿದ್ದರು. ಎರಡು ಬಾರಿ ಕೇರಳ ರಾಜ್ಯದ ಮುಖ್ಯಮಂತ್ರಿಗಳಾಗಿ ಅಪಾರ ಸಾಧನೆ ಮಾಡಿದವರಾಗಿದ್ದರು. 

2004 ರಿಂದ 2006 ಮತ್ತು 2011 ರಿಂದ 2016 ರವರೆಗೆ ಕೇರಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯಪಾಲರಾಗಿ, ಕೇರಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ನಿರಂತರವಾಗಿ ಸಂವಿಧಾನದ ಆಶಯಗಳ, ಮೌಲ್ಯಗಳ‌ ರಕ್ಷಣೆಗೆ ಶ್ರಮಿಸಿ ಹೋರಾಟ ರಾಜಕಾರಣದ ಪರಂಪರೆಯನ್ನು ಪರಿಣಾಮಕಾರಿಯಾಗಿ ಮುನ್ನಡೆಸುತ್ತಿದ್ದರು. 

Latest Videos

ಇದನ್ನು ಓದಿ: Oommen Chandy: ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ನಿಧನ!

1970 ರಿಂದ ಕೇರಳ ರಾಜ್ಯ ವಿಧಾನಸಭೆಗೆ ನಿರಂತರವಾಗಿ ಆಯ್ಕೆಯಾಗುತ್ತಾ ಅತ್ಯಂತ ದೀರ್ಘಾವಧಿ ಶಾಸಕರಾಗಿ ಪುತ್ತುಪ್ಪಲ್ಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬಂದಿದ್ದರು. ವಿಶ್ವಸಂಸ್ಥೆಯಿಂದ ಸಾರ್ವಜನಿಕ ಸೇವೆಗಾಗಿ ಪ್ರಶಸ್ತಿಯನ್ನು ಗಳಿಸಿದ ಏಕೈಕ ಭಾರತೀಯ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆಯನ್ನೂ ಗಳಿಸಿದ್ದರು. 

ಅವರು ಮುಖ್ಯಮಂತ್ರಿ ಆಗಿದ್ದ ಮತ್ತು ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಲವು ಬಾರಿ‌ ಭೇಟಿಯಾಗಿದ್ದೆವು. ಅಭಿವೃದ್ಧಿ ವಿಚಾರದಲ್ಲಿ ಅವರದೇ ಆದ ಸ್ಪಷ್ಟ ತಿಳುವಳಿಕೆ ಮತ್ತು ಮಾದರಿಗಳನ್ನು ಹೊಂದಿದ್ದರು. ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜಾರಿ ಮಾಡಿದ್ದ ಅನ್ನಭಾಗ್ಯ ಸೇರಿದಂತೆ ಹಲವು ಯೋಜನೆಗಳನ್ನು ಅಪಾರವಾಗಿ ಶ್ಲಾಘಿಸಿದ್ದರು.‌ ಬಡವರ ಮತ್ತು ಮಧ್ಯಮ ವರ್ಗದವರ ಬದುಕನ್ನು ಉನ್ನತೀಕರಿಸುವ ಸ್ಪಷ್ಟ ಗುರಿ‌ ಮತ್ತು ಮಾರ್ಗ ನಾವು ಜಾರಿ ಮಾಡಿರುವ ಕಾರ್ಯಕ್ರಮಗಳಲ್ಲಿ, ನಾನು ಮಂಡಿಸಿದ ಆಯವ್ಯಯಗಳಲ್ಲಿ ಇದೆ ಎಂದು ಪತ್ರ ಬರೆದು ಮೆಚ್ಚುಗೆ ಸೂಚಿಸಿದ್ದರು. 

ಇದನ್ನೂ ಓದಿ: ಲೈಂಗಿಕ ಕಿರುಕುಳ ಕೇಸಲ್ಲಿ ಕೇರಳ ಮಾಜಿ ಸಿಎಂ, ಬಿಜೆಪಿಯ ಎ.ಪಿ. ಅಬ್ದುಲ್ಲಕುಟ್ಟಿಗೆ ಸಿಬಿಐ ಕ್ಲೀನ್ ಚಿಟ್

ಇವರ ನಿಧನ ಅಭಿವೃದ್ಧಿ ಮತ್ತು ಜನಪರ ರಾಜಕಾರಣಕ್ಕೆ, ಕೇರಳ ರಾಜ್ಯಕ್ಕೆ, ಭಾರತೀಯ ರಾಜಕಾರಣಕ್ಕೆ ಹಾಗೂ ನನಗೆ ವೈಯುಕ್ತಿಕವಾಗಿ ತುಂಬಲಾರದ ನಷ್ಟ. ಮೌಲ್ಯಯುತ ರಾಜಕಾರಣದ ಹೆಜ್ಜೆಗುರುತನ್ನು ಉಳಿಸಿ ಹೋಗಿರುವ ಉಮ್ಮನ್‌ ಚಾಂಡಿಯವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕುಟುಂಬಕ್ಕೆ ಮತ್ತು ಅಪಾರ ಬಂಧು ಮಿತ್ರರಿಗೆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಉಮ್ಮನ್ ಚಾಂಡಿಯವರ ಸ್ನೇಹಿತ ಮಾಜಿ ಸಚಿವ ಟಿ ಜಾನ್ ಮನೆಗೆ ಪಾರ್ಥಿವ ಶರೀರ ರವಾನೆ

ಕೇರಳ ಮಾಜಿ ಸಿಎಂ ಉಮ್ಮನ್‌ ಚಾಂಡಿಯವರ ಪಾರ್ಥಿವ ಶರೀರವನ್ನು ಅವರ ಸ್ನೇಹಿತ ಮಾಜಿ ಸಚಿವ ಟಿ ಜಾನ್ ಮನೆಗೆ ರವಾನೆ ಮಾಡಲಾಗಿದೆ. 8.30 ಕ್ಕೆ ಆಸ್ಪತ್ರೆಯಿಂದ ಪಾರ್ಥಿವ ಶರೀರ ರವಾನೆ ಮಡಲಾಗಿದ್ದು, ಬೆಳಿಗ್ಗೆ 11 ಗಂಟೆಯವರೆಗೆ ಜಾನ್‌ ಅವರ ಮನೆಯಲ್ಲಿ ಪಾರ್ಥಿವ ಶರೀರ ದರ್ಶನಕ್ಕೆ ಅವಕಾಶವಿರುತ್ತದೆ. 

ಜಾನ್‌ ಮನೆಗೆ ಆಗಮಿಸಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಪಾರ್ಥಿವ ಶರೀರದ ದರ್ಶನ ಪಡೆಯಲಿದ್ದು, ನಂತರ 11.30 ಕ್ಕೆ ಹೆಚ್ಎಎಲ್ ಗೆ ಪಾರ್ಥಿವ ಶರೀರ ರವಾನೆ ಮಾಡಲಾಗುತ್ತದೆ. 11.30 ಕ್ಕೆ ಹೆಚ್ಎಎಲ್ ಮೂಲಕ ಪಾರ್ಥಿವ ಶರೀರವನ್ನ ಏರ್ ಲಿಫ್ಟ್ ಮಾಡಲು ತಯಾರಿ ನಡೆಸುತ್ತಿದ್ದು, ಎಚ್‌ಎಎಲ್‌ನಿಂದ ತಿರುವನಂತಪುರಂಗೆ ಏರ್ ಲಿಫ್ಟ್ ಮೂಲಕ ಪಾರ್ಥಿವ ಶರೀರ ರವಾನೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. 
 

click me!