
ಮೋಹನ ಹಂಡ್ರಂಗಿ
ಕನ್ನಡಪ್ರಭ ವಾರ್ತೆ ಬೆಂಗಳೂರು (ಏ.13): ರಾಜ್ಯದಲ್ಲಿ ಜನಗಣತಿ ಆರಂಭಕ್ಕೂ ಮುನ್ನವೇ ಗೊಂದಲ ಶುರುವಾಗಿದೆ. ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಕೆಲ ಕಡೆ ‘ಬಿ’ ದರ್ಜೆಯ ಅಧಿಕಾರಿಗಳನ್ನು ಗಣತಿದಾರರಾಗಿ ಮತ್ತು ‘ಸಿ’ ದರ್ಜೆಯ ನೌಕರರನ್ನು ಮೇಲ್ವಿಚಾರಕರಾಗಿ ನಿಯೋಜಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಜನಗಣತಿ ಕಾರ್ಯಕ್ಕೆ ರಾಜ್ಯದಲ್ಲಿ ವಿವಿಧ ಇಲಾಖೆಗಳ ಸುಮಾರು 3 ಲಕ್ಷ ಸಿಬ್ಬಂದಿ ನಿಯೋಜಿಸಲಾಗಿದೆ. ಈಗಾಗಲೇ ಮೂರು ದಿನಗಳ ತರಬೇತಿ ಸಹ ನೀಡಲಾಗಿದೆ. ಈಗಾಗಲೇ ಏ.1ರಿಂದ 15 ರವರೆಗೆ ಆನ್ಲೈನ್ನಲ್ಲಿ ಸ್ವಯಂ ದತ್ತಾಂಶ ದಾಖಲಿಸಲು ಅವಕಾಶ ನೀಡಲಾಗಿದೆ. ಬಳಿಕ ಏ.16ರಿಂದ ಮೇ 15ರ ವರೆಗೆ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ದತ್ತಾಂಶ ಸಂಗ್ರಹಿಸಲಿದ್ದಾರೆ. ಈ ಕಾರ್ಯ ಆರಂಭಕ್ಕೂ ಮುನ್ನವೇ ಗೊಂದಲ ಸೃಷ್ಟಿಯಾಗಿದೆ.
ಜನಗಣತಿ ಕಾರ್ಯಕ್ಕೆ ಸರ್ಕಾರಿ ನೌಕರರನ್ನು ನಿಯೋಜನಾ ಕ್ರಮವೇ ಸರಿಯಿಲ್ಲ ಎಂದು ಕೆಲ ಅಧಿಕಾರಿಗಳು ಆಕ್ಷೇಪ ವ್ಯಕ್ತಡಿಸಿದ್ದಾರೆ. ‘ಬಿ’ ದರ್ಜೆಯ ಅಧಿಕಾರಿಗಳನ್ನು ಗಣತಿದಾರರಾಗಿ ಮತ್ತು ‘ಸಿ’ ದರ್ಜೆಯ ಅಧಿಕಾರಿ/ನೌಕರರನ್ನು ಮೇಲ್ವಿಚಾರಕರಾಗಿ ನಿಯೋಜಿಸಲಾಗಿದೆ. ಕಚೇರಿಯಲ್ಲಿ ತಮ್ಮ ಕೈ ಕೆಳಗೆ ಕೆಲಸ ಮಾಡುವ ನೌಕರರಿಗೆ ಮೇಲ್ವಿಚಾರಣೆ ಹೊಣೆ ನೀಡಲಾಗಿದೆ. ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ, ಮೇಲ್ವಿಚಾರಕರಿಗೆ ವರದಿ ಮಾಡಬೇಕು. ಇದು ಎಷ್ಟು ಸರಿ? ಇದರಿಂದ ಅಧಿಕಾರಿಗಳು ಮುಜುಗರ ಅನುಭವಿಸುವಂತಾಗಿದೆ ಎಂದು ಹೆಸರು ಹೇಳಲಿಚ್ಛಿಸದ ‘ಬಿ’ ದರ್ಜೆ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
ಜನಗಣತಿ ಕಾರ್ಯಕ್ಕೆ ಸರ್ಕಾರಿ ನೌಕರರನ್ನು ಬಳಸಿಕೊಂಡಿರುವುದಕ್ಕೆ ಆಕ್ಷೇಪವಿಲ್ಲ. ಆದರೆ ಹುದ್ದೆ, ಹಿರಿತನಕ್ಕೆ ಅನುಗುಣವಾಗಿ ಕೆಲಸ ಹಂಚಬೇಕು. ಉದಾಹರಣೆಗೆ ಸಹಾಯಕ ನಿರ್ದೇಶಕ ಹುದ್ದೆ ಅಧಿಕಾರಿಯನ್ನು ಗಣತಿದಾರರಾಗಿ ನೀಯೋಜಿಸಿ, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕರನ್ನು ಮೇಲ್ವಿಚಾರಕರಾಗಿ ನಿಯೋಜಿಸಲಾಗಿದೆ. ಕೆಳ ಹಂತದ ನೌಕರರ ಬಳಿ ಮೇಲಾಧಿಕಾರಿಗಳು ವರದಿ ಮಾಡಿಕೊಳ್ಳಿ ಎಂದರೆ ಹೇಗೆ? ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಈ ರೀತಿ ಅಧಿಕಾರಿಗಳನ್ನು ಜನಗಣತಿ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇದು ಆ ಅಧಿಕಾರಿಗಳು ಮತ್ತು ಕೆಳ ಹಂತದ ನೌಕರರು ಇಬ್ಬರಿಗೂ ಮುಜುಗರಕ್ಕೀಡು ಮಾಡುವಂತಿದೆ ಎಂದು ಗಣತಿದಾರ ಕೆಲಸಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಯೊಬ್ಬರು ಹೇಳಿದರು.
ಅನುಕಂಪದ ಅಧಾರದಡಿ ಕೆಲಸಕ್ಕೆ ಸೇರಿರುವ ನೌಕರರನ್ನೂ ಜನಗಣತಿ ಕಾರ್ಯಕ್ಕೆ ನಿಯೋಜಿಸಲಾಗಿದೆ. ಈ ಪೈಕಿ ಬಹುತೇಕರು ಎಸ್ಸೆಸ್ಸೆಎಲ್ಸಿ, ಪಿಯುಸಿ ವ್ಯಾಸಾಂಗ ಮಾಡಿದ್ದು, ಆ್ಯಂಡ್ರಾಯ್ಡ್ ಮೊಬೈಲ್, ತಂತ್ರಜ್ಞಾನ ಬಳಕೆಯೇ ಅವರಿಗೆ ಗೊತ್ತಿಲ್ಲ. ಮನೆ-ಮನೆ ಗಣತಿ ವೇಳೆ ಆ್ಯಂಡ್ರಾಯ್ಡ್ ಮೊಬೈಲ್ ಅಪ್ಲಿಕೇಶನ್ನಲ್ಲಿ ದತ್ತಾಂಶ ಭರ್ತಿ ಸವಾಲಾಗಿದೆ. ಜನಗಣತಿ ಕಾರ್ಯಕ್ಕೆ ನಿಯೋಜಿತ ಈ ರೀತಿಯ ಎಷ್ಟೋ ನೌಕರರ ಬಳಿ ಆ್ಯಂಡ್ರಾಯ್ಡ್ ಮೊಬೈಲ್ಗಳೇ ಇಲ್ಲ. ತರಬೇತಿ ವೇಳೆ ನಮ್ಮಿಂದ ಜನಗಣತಿ ಸಾಧ್ಯವಿಲ್ಲ ಎಂದು ಕೆಲ ನೌಕರರು ಪೇಚಾಡುವುದನ್ನು ಕಣ್ಣಾರೆ ನೋಡಿದ್ದೇನೆ ಎಂದು ಅಧಿಕಾರಿಯೊಬ್ಬರು ಹೇಳಿಕೊಂಡರು.
ಜನಗಣತಿ ಕಾರ್ಯಕ್ಕೆ ಸರ್ಕಾರಿ ನೌಕರರನ್ನು ಬಳಸಿಕೊಳ್ಳುತ್ತಿರುವುದರಿಂದ ಕಚೇರಿ ಕೆಲಸಗಳು ಬಾಕಿಯಾಗುತ್ತಿವೆ. ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಎಸ್ಕಾಂ ಸೇರಿ ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರ ಕೆಲಸಗಳಿಗೆ ತೊಂದರೆಯಾಗಲಿದೆ. ಕೆಲ ಇಲಾಖೆಗಳಲ್ಲಿ ಶೇ.80ರಷ್ಟು ನೌಕರರನ್ನು ಜನಗಣತಿ ಕಾರ್ಯಕ್ಕೆ ನಿಯೋಜಿಸಲಾಗಿದೆ. ಹೀಗಾಗಿ ದೈನಂದಿನ ಕೆಲಸಗಳಿಗೆ ಸಮಸ್ಯೆಯಾಗಿದೆ ಎನ್ನುತ್ತಾರೆ ಕೆಲ ಅಧಿಕಾರಿಗಳು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ