
ಬೆಂಗಳೂರು (ಮಾ.6): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2026-27ನೇ ಸಾಲಿನ ಬಜೆಟ್ ರಾಜ್ಯದ ಪಾಲಿಗೆ ಐತಿಹಾಸಿಕವಾಗಿದ್ದರೂ, ಆರ್ಥಿಕವಾಗಿ ದೊಡ್ಡ ಮಟ್ಟದ ಸಾಲದ ಹೊರೆಯನ್ನು ಹೊರಿಸುತ್ತಿದೆ. 4,48,004 ಕೋಟಿ ರೂಪಾಯಿಗಳ ಬೃಹತ್ ಗಾತ್ರದ ಈ ಬಜೆಟ್ ಮಂಡಿಸಿರುವ ಸಿಎಂ, ಈ ಆರ್ಥಿಕ ವರ್ಷದಲ್ಲಿ ದಾಖಲೆಯ 1,32,190 ಕೋಟಿ ರೂಪಾಯಿಗಳ ಸಾಲ ಪಡೆಯಲು ತೀರ್ಮಾನಿಸಿದ್ದಾರೆ.
ಈ ಬಾರಿಯ ಆಯವ್ಯಯವು 22,957 ಕೋಟಿ ರೂಪಾಯಿಗಳ ಕೊರತೆಯನ್ನು ಹೊಂದಿದ್ದು, ಇದನ್ನು ಸರಿದೂಗಿಸಲು ಮತ್ತು ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರ್ಕಾರ ವಿವಿಧ ಮೂಲಗಳಿಂದ ಸಾಲ ಪಡೆಯುತ್ತಿದೆ. ಬಹಿರಂಗ ಮಾರುಕಟ್ಟೆಯಿಂದ 1,22,340 ಕೋಟಿ ರೂಪಾಯಿ ಸಾಲ ಪಡೆಯಲು ತೀರ್ಮಾನಿಸಲಾಗಿದೆ. ಕೇಂದ್ರ ಸರ್ಕಾರದಿಂದ 6,810 ಕೋಟಿ ರೂಪಾಯಿ ಸಾಲ ಪಡೆಯಲು ಯೋಜನೆ ಮಾಡಲಾಗಿದೆ. ಅದರೊಂದಿಗೆ LIC/NSSF/NCDC ಮತ್ತು RIDF ಸಂಸ್ಥೆಗಳಿಂದ 2,850 ಕೋಟಿ ರೂ, ಇತರೆ ಜಮೆ ಹಾಗೂ ವಸೂಲಿ: 190 ಕೋಟಿ ರೂಪಾಯಿ ಪಡೆಯಲು ತೀರ್ಮಾನಿಸಿದೆ.
ಬಜೆಟ್ನ ಅಂಕಿಅಂಶಗಳ ಪ್ರಕಾರ, ಈ ಆರ್ಥಿಕ ವರ್ಷದ ಅಂತ್ಯಕ್ಕೆ ಕರ್ನಾಟಕದ ಒಟ್ಟು ಸಾಲವು 8,27,389 ಕೋಟಿ ರೂಪಾಯಿಗಳಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಇದು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (GSDP) ಶೇ. 24.94 ರಷ್ಟಾಗಲಿದ್ದು, ಆರ್ಥಿಕ ಶಿಸ್ತಿನ ಮಿತಿಯಲ್ಲೇ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದ ಆರ್ಥಿಕತೆಯನ್ನು ಬಲಪಡಿಸಲು ಸಿಎಂ ಸಿದ್ದರಾಮಯ್ಯ ಅವರು ಈ ಬಾರಿ 2.20 ಲಕ್ಷ ಕೋಟಿ ರೂಪಾಯಿಗಳ ಸ್ವಂತ ತೆರಿಗೆ ಸಂಗ್ರಹದ ಗುರಿ ಹಾಕಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಸುಮಾರು 65,000 ಕೋಟಿ ರೂಪಾಯಿಗಳಿಗೂ ಅಧಿಕ ಹಣ ವ್ಯಯಿಸುತ್ತಿದ್ದರೂ, ಬಂಡವಾಳ ವೆಚ್ಚಗಳಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಲು ಈ ಬೃಹತ್ ಸಾಲದ ಮೊರೆ ಹೋಗಲಾಗಿದೆ.
ಒಟ್ಟಾರೆಯಾಗಿ, ಜನಪ್ರಿಯ ಯೋಜನೆಗಳ ಅನುಷ್ಠಾನದ ನಡುವೆ ರಾಜ್ಯದ ಸಾಲದ ಹೊರೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೂ, ಜಿಎಸ್ಡಿಪಿ ಬೆಳವಣಿಗೆಯ ದರವು ಆಶಾದಾಯಕವಾಗಿರುವುದರಿಂದ ಸಾಲದ ಪ್ರಮಾಣವು ನಿರ್ವಹಿಸಬಲ್ಲ ಮಟ್ಟದಲ್ಲಿದೆ ಎಂಬುದು ಸರ್ಕಾರದ ವಿಶ್ವಾಸ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ