
ಬೆಂಗಳೂರು (ಮಾ.7) ದಾಖಲೆಯ 17ನೇ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿವೃದ್ಧಿ ಸವಾಲಿನ ನಡುವೆಯೇ ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿ ನಾಲ್ಕು ಗ್ಯಾರಂಟಿ ಯೋಜನೆಗಳಿಗೆ ಸಮರ್ಪಕ ಅನುದಾನ ಮೀಸಲಿಟ್ಟಿದ್ದಾರೆ. ಆದರೆ, ಯುವನಿಧಿಗೆ ಯಾವುದೇ ಅನುದಾನ ಒದಗಿಸದಿರುವುದು ಕುತೂಹಲ ಹುಟ್ಟು ಹಾಕಿದೆ.
ಪ್ರಸಕ್ತ ಸಾಲಿನ ಆರ್ಥಿಕ ವರ್ಷದ ಬಜೆಟ್ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಸಿಂಹಪಾಲು ಅನುದಾನ ಘೋಷಿಸಲಾಗಿದ್ದು, 50,686 ಕೋಟಿ ರು. ಒದಗಿಸಲಾಗಿದೆ. ಈ ಪೈಕಿ ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ರು, ಅನ್ನಭಾಗ್ಯ ಯೋಜನೆಗೆ 6,200 ಕೋಟಿ ರು, ಗೃಹಜ್ಯೋತಿ ಯೋಜನೆಗೆ 10,578 ಕೋಟಿ ರು. ಹಾಗೂ ಶಕ್ತಿ ಯೋಜನೆಗೆ 5,300 ಕೋಟಿ ರು. ಮೀಸಲಿಡಲಾಗಿದೆ. ಯುವನಿಧಿಗೆ ಪ್ರತ್ಯೇಕವಾಗಿ ಯಾವುದೇ ಅನುದಾನ ನೀಡಿಲ್ಲ.
ರಾಜ್ಯ ಸರ್ಕಾರ 2023-24ನೇ ಸಾಲಿನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಒಟ್ಟು 52 ಸಾವಿರ ಕೋಟಿ ರು. ಮೀಸಲಿಟ್ಟಿತ್ತು. ನಂತರ 2025-26ನೇ ಸಾಲಿನಲ್ಲಿ 1000 ಕೋಟಿ ರು.ನಷ್ಟು ಅನುದಾನ ಕಡಿತ ಮಾಡಿ 51,034 ಕೋಟಿ ರು. ಒದಗಿಸಲಾಗಿತ್ತು. ಶಕ್ತಿಯೋಜನೆಗೆ 5,300 ಕೋಟಿ ರು., ಗೃಹಲಕ್ಷ್ಮಿಗೆ 28608 ಕೋಟಿ ರು. ಮತ್ತು ಗೃಹಜ್ಯೋತಿಗೆ 10,100 ಕೋಟಿ ರು.ಅನುದಾನ ಕೊಡಲಾಗಿತ್ತು. ಈ ಬಾರಿ ಗೃಹಜ್ಯೋತಿ ಯೋಜನೆಗೆ 478 ಕೋಟಿ ರು.ಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಅನ್ನಭಾಗ್ಯ ಯೋಜನೆಯಲ್ಲಿ ಹೆಚ್ಚುವರಿ 5 ಕೆಜಿ ಅಕ್ಕಿಯೊಂದಿಗೆ ಕೇಂದ್ರ ಸರ್ಕಾರ ಕೊಡುತ್ತಿರುವ ಉಚಿತ 5 ಕೆಜಿ ಸೇರಿ ಪ್ರತಿ ಫಲಾನುಭವಿಗೆ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತಿತ್ತು. ಇದರಿಂದ ಅಕ್ಕಿ ದುರ್ಬಳಕೆ ಪ್ರಕರಣಗಳು ಹೆಚ್ಚಾಗಿದ್ದರಿಂದ ನಿಯಂತ್ರಣ ತರಲು ಪ್ರಸಕ್ತ ಸಾಲಿನಿಂದ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ಇಂದಿರಾ ಕಿಟ್ ಕೊಡಲು ಸರ್ಕಾರ ನಿರ್ಧರಿಸಿರುವುದರಿಂದ ವರ್ಷಕ್ಕೆ 300 ಕೋಟಿ ರು.ನಷ್ಟು ಉಳಿತಾಯದ ಗುರಿ ಹೊಂದಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ