
ವಿಜಯಪುರ (ನ.8): ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹಿಂದೂ ಪದದ ಬಗ್ಗೆ ನೀಡಿರುವ ಹೇಳಿಕೆ ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಸ್ವತಃ ಸ್ವಪಕ್ಷದವರೇ ಇದನ್ನು ಖಂಡಿಸಿದ್ದಾರೆ. ಇದೀಗ ವಿಜಯಪುರದ ಇಂಡಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣಸಿಂಗ್ ಅವರು ಕೂಡ ವಿರೋದಿಸಿದ್ದು, ಹಿಂದುತ್ವ ತಿಳಿಯಲು ಗೂಗಲ್ ನೋಡಬೇಡಿ. ಧ್ಯಾನದಿಂದ ಅಧ್ಯಯನ ಮಾಡಿ. ಹಿಂದುತ್ವ ಅರಿವಾಗುತ್ತದೆ. ದೇಶದಲ್ಲಿ ಕಾಂಗ್ರೆಸ್ ಸರ್ವನಾಶವಾಗುತ್ತಿದ್ದು, ಇದೀಗ ಸತೀಶ ಜಾರಕಿಹೊಳಿ ಹೇಳಿಕೆ ವಿನಾಶ ಕಾಲೇ ವಿಪರೀತ ಬುದ್ದಿ ಎನ್ನುವಂತಾಗಿದೆ.ಹಿಂದೂ ಎಂಬುವುದು ನಮ್ಮ ಸಂಸ್ಕೃತಿ. ಅದರ ಬಗ್ಗೆ ನಮಗೆ ಹೆಮ್ಮೆ ಇದೆ ಎಂದಿದ್ದಾರೆ.
ಬಿಜೆಪಿಯಿಂದ ನಾಳೆ ಪ್ರತಿಭಟನೆ: ಸತೀಶ್ ಜಾರಕಿಹೊಳಿ ಹಿಂದೂ ವಿರೋಧಿ ಹೇಳಿಕೆ ಖಂಡಿಸಿ ನವೆಂಬರ್ 9 ರಂದು ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಲಿದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ನಡೆಸಲು ಸೂಚನೆ ನೀಡಲಾಗಿದೆ. ಬೆಳಗ್ಗೆ ಹನ್ನೊಂದು ಗಂಟೆಗೆ ಪ್ರತಿಭಟನೆ ನಡೆಯಲಿದ್ದು, ಆಯಾ ವಿಧಾನಸಭೆ ಕ್ಷೇತ್ರದಲ್ಲಿ ಶಾಸಕರು ಸಂಸದರು ಭಾಗಿಯಾಗಲು ಪಕ್ಷ ಸೂಚನೆ ನೀಡಿದೆ.
ಏನಿದು ವಿವಾದ: ನಿಪ್ಪಾಣಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ವಿವಾದಾತ್ಮಕ ಹೇಳಿಕೆ ನೀಡಿದ್ದು, ಹಿಂದೂ ಅನ್ನೋದು ಪರ್ಷಿಯನ್ ಭಾಷೆಯ ಪದ. ಅದರ ಅರ್ಥ ಅಶ್ಲೀಲವಾಗಿದೆ ಎಂದಿದ್ದರು. ಇದಕ್ಕೆ ಟೀಕೆಗಳು ವ್ಯಕ್ತವಾಗುತ್ತಿದ್ದಂತೆಯೇ ನಿಪ್ಪಾಣಿಯಲ್ಲಿ ನಾನು ಹಿಂದೂ (Hindu) ಶಬ್ದ ಪರ್ಶಿಯನ್ ಭಾಷೆಯಿಂದ ಬಂದಿದೆ ಎಂದು ಉಲ್ಲೇಖಿಸಿದ್ದು ನಿಜ. ಇದರ ಬಗ್ಗೆ ಚರ್ಚೆಯಾಗಲಿ ಎಂದು ಹೇಳಿದ್ದೇನೆ.ಹಿಂದೂ ಶಬ್ದದ ಬಗ್ಗೆ ಕೆಲ ನಿಂದನೆ ಮಾಡುವ ಶಬ್ದಗಳು ದಾಖಲೆಯಲ್ಲಿ ಸಿಗುತ್ತವೆ. ಅದನ್ನು ಉಲ್ಲೇಖಿಸಿ ನಾನು ಹೇಳಿದ್ದೇನೆ. ಇದು ನನ್ನ ವೈಯಕ್ತಿಕ ಹೇಳಿಕೆಯಲ್ಲ ಎಂದಿದ್ದಾರೆ.
ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು,ಹಿಂದೂ ಧರ್ಮ ಇರಲಿ, ಪಾರ್ಷಿ, ಜೈನ ಇರಲಿ ಅದನ್ನು ಮೀರಿ ಬೆಳೆಯುವ ಕೆಲಸ ಮಾಡುತ್ತಿದ್ದೇವೆ. ಹೀಗಾಗಿ, ನಾನು ಹೇಳಿದ್ದರಲ್ಲಿ ಏನೂ ತಪ್ಪಿಲ್ಲ. ಹಿಂದೂ ಪರ್ಷಿಯನ್ ಶಬ್ದದಿಂದ ಬಂದಿದೆ. ಆರ್ಯ ಸಮಾಜ ಸಂಸ್ಥಾಪಕ ಸ್ವಾಮಿ ದಯಾನಂದ ಸರಸ್ವತಿ ಸ್ವಾಮೀಜಿಯರ ಸತ್ಯಾರ್ಥಿ ಪುಸ್ತಕದಲ್ಲಿ ಉಲ್ಲೇಖವಿದೆ. ಜಿ.ಎಸ್.ಪಾಟೀಲ ಬರೆದ ಬಸವ ಭಾರತದಲ್ಲಿ ಉಲ್ಲೇಖವಿದೆ. ಬಾಲಗಂಗಾಧರ ತಿಲಕರ ಕೇಸರಿ ಪತ್ರಿಕೆಯಲ್ಲೂ ಉಲ್ಲೇಖವಿದೆ. ಮೂರ್ನಾಲ್ಕು ಮಾತ್ರ ಉಲ್ಲೇಖಿಸಿದ್ದೇನೆ.
ಜಾರಕಿಹೊಳಿ 'ಹಿಂದು ಅಶ್ಲೀಲ' ಹೇಳಿಕೆ ನೀಡಿದ ಬೆನ್ನಲ್ಲೇ ಇಂದಿನಿಂದ 'ಸ್ವಾಭಿಮಾನಿ ಹಿಂದು ಅಭಿಯಾನ' !
ಸಾವಿರಾರು ಲೇಖನಗಳು ವಿಕಿಪೀಡಿಯಾದಲ್ಲಿವೆ. ಅವುಗಳನ್ನು ತೆರೆದು ನೋಡಬೇಕು. ನೈಜವಾದ ಸುದ್ದಿಯನ್ನು ತೋರಿಸಲು ಮಾಧ್ಯಮಗಳು ಪ್ರಯತ್ನಿಸಬೇಕು.ಹಿಂದೂ ಗಳ ಕೊಲೆಯಾದರೆ ವಿಶೇಷ ಸ್ಥಾನಮಾನ, ದಲಿತರ ಕೊಲೆಯಾದರೆ ಕಡೆಗಣಿಸಲಾಗುತ್ತದೆ. ಎಲ್ಲ ಧರ್ಮಗಳು ನನಗೆ ಅಷ್ಟೇ. ನಿಮ್ಮ ಧರ್ಮ- ಜಾತಿಯಿಂದ ದೂರ ಇದ್ದೇನೆ. ದೊಡ್ಡ ಅಪರಾಧ ಮಾಡಿದಂತೆ ಬಿಂಬಿಸಲು ಹೋಗಬೇಡಿ. ನಿಮ್ಮ ಚರ್ಚೆಯಿಂದ ಯಾರಿಗೂ ಲಾಭ ಆಗುವುದಿಲ್ಲ. ನನ್ನ ತಪ್ಪಿದ್ದರೆ ನಿಮ್ಮ ಚರ್ಚೆ ಮುಂದುವರೆಸಿ, ಇಲ್ಲದಿದ್ದರೆ ನಿಲ್ಲಿಸಿ. ನಾನು ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
'ಹಿಂದೂ ಪದದ ಅರ್ಥವೇ ಅಶ್ಲೀಲ': ಜಾರಕಿಹೊಳಿ ಪರ ಬ್ಯಾಟ್ ಬೀಸಿದ್ದ ದಿನೇಶ್ ಗುಂಡೂರಾವ್ ಯೂಟರ್ನ್
ಧರ್ಮ, ಭಾಷೆಗೆ ಅವಮಾನ ಮಾಡಿದ ಪ್ರಶ್ನೆಯೇ ಇಲ್ಲ. 30 ವರ್ಷಗಳಿಂದ ಇದೇ ಕೆಲಸವನ್ನು ನಾನು ಮಾಡುತ್ತ ಬಂದಿದ್ದೇನೆ. ರಾಷ್ಟ್ರದ ವಿಕಿಪೀಡಿಯಾದಲ್ಲಿದೆ. ಚರ್ಚೆಯಾಗಬೇಕು ಎಂದಷ್ಟೇ ಹೇಳಿದ್ದೆ. ಅದಕ್ಕೆ ಕೆಟ್ಟಶಬ್ದ ಇದೆ. ನಾನು ಹೇಳಿಲ್ಲ. ಅಭ್ಯಂತರ ಇಲ್ಲ. ದೊಡ್ಡದಾಗಿ ಮಾಡಲು ಹೋಗಬೇಡಿ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ