ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ಇನ್ನು ಈ ಬಗ್ಗೆ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು ಹೀಗೆ..
ಬೆಳಗಾವಿ, [ಡಿ.11]: ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿದ್ದ ಪಂಚ ರಾಜ್ಯಗಳ ರಿಸೆಲ್ಟ್ ಹೊರ ಬಿದ್ದಿದ್ದು, ಈ ಫಲಿತಾಂಶ ಎಲ್ಲರ ಊಹೆ ಉಲ್ಟಾ ಪಲ್ಟಾ ಮಾಡಿದೆ.
ಕಳೆದ ಕೆಲ ವರ್ಷಗಳಿಂದ ದೇಶಾದ್ಯಂತ ಗೆಲುವಿನ ನಾಗಲೋಟ ಮುಂದುವರಿಸಿದ್ದ ಪ್ರಧಾನಿ ಮೋದಿಗೆ ಇವತ್ತು ಬ್ರೇಕ್ ಬಿದ್ದಿದೆ. ಸ್ವತಃ ಮೋದಿಯೇ ನಿಂತು ಸಾಲು ಸಾಲು ರ್ಯಾಲಿ, ಸಮಾವೇಶಗಳನ್ನು ಮಾಡಿದರೂ 5 ರಾಜ್ಯಗಳ ಪೈಕಿ ಒಂದರಲ್ಲೂ ಅಧಿಕಾರಕ್ಕೇರುವಲ್ಲಿ ವಿಫಲವಾಗಿದೆ.
ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ
ಇನ್ನು ಈ ಫಲಿತಾಂಶವನ್ನ ರಾಜಕೀಯ ನಾಯಕರು ತಮ್ಮದೇ ರೀತಿಯಲ್ಲಿ ಬಣ್ಣಿಸಿದ್ದು, ಕೆಲವರು ಈ ರಿಸಲ್ಟ್ ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎನ್ನುತ್ತಿದ್ದರೆ, ಬಿಜೆಪಿ ನಾಯಕರು ಮಾತ್ರ ಇದನ್ನು ತಳ್ಳಿಹಾಕಿದ್ದಾರೆ.
ಈ ಬಗ್ಗೆ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಈ ಫಲಿತಾಂಶ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಅಲ್ಲ. ನರೇಂದ್ರ ಮೋದಿವರನ್ನ ಬಿಟ್ಟರೆ ಪ್ರಧಾನಿ ಆಗೋ ಅರ್ಹತೆ ಯಾರಿಗಿದೆ ಹೇಳಿ ಎಂದು ಪ್ರಶ್ನಿಸಿದರು.
ಈ ಚುನಾವಣೆಯಲ್ಲಿ ಹಿನ್ನೆಡೆ ಆಗಿರೋದು ನಿಜ. ಮಧ್ಯಪ್ರದೇಶದಲ್ಲಿ ಮತ್ತೆ ಅಧಿಕಾರ ಸಿಗುತ್ತೆ ಅಂದುಕೊಂಡಿದ್ದೇವು. ಆದ್ರೆ ಆಡಳಿತ ವಿರೋಧಿ ಅಲೆ ಕೆಲಸ ಮಾಡಿದ್ದು, ಎಲ್ಲಿ ತಪ್ಪಾಗಿದೆಯೋ ಅಲ್ಲಿ ಅದನ್ನು ಪಕ್ಷ ಕೂತು ಚರ್ಚೆ ಮಾಡುತ್ತೆ ಎಂದರು.