3ನೇ ಅಲೆ ಆತಂಕ: ಗಣೇಶ ಚತುರ್ಥಿ, ಮೊಹರಂ ಹಬ್ಬಕ್ಕೆ ಕಠಿಣ ನಿರ್ಬಂಧ!

By Kannadaprabha NewsFirst Published Aug 13, 2021, 7:14 AM IST
Highlights

* 3ನೇ ಅಲೆ ಆತಂಕ: ಸರ್ಕಾರದಿಂದ ಆದೇಶ-

* ಗಣೇಶ ಚತುರ್ಥಿ, ಮೊಹರಂ ಹಬ್ಬಕ್ಕೆ ಕಠಿಣ ನಿರ್ಬಂಧ

* ಸಾರ್ವಜನಿಕ ಸ್ಥಳದಲ್ಲಿ ಗಣೇಶನ ಕೂರಿಸುವಂತಿಲ್ಲ

* ಮೊಹರಂಗೆ ಪ್ರಾರ್ಥನಾ ಸಭೆ, ಮೆರವಣಿಗೆ ನಿಷಿದ್ಧ

ಬೆಂಗಳೂರು(ಆ.13): ಕೊರೋನಾ ಮೂರನೇ ಅಲೆ ಆತಂಕದ ಹಿನ್ನೆಲೆಯಲ್ಲಿ ಮುಂಬರುವ ಸಾಲು-ಸಾಲು ಹಬ್ಬಗಳಿಗೆ ಕಠಿಣ ನಿರ್ಬಂಧ ವಿಧಿಸಿರುವ ಸರ್ಕಾರ, ಸಾರ್ವಜನಿಕ ಸ್ಥಳಗಳಲ್ಲಿ ಗೌರಿ-ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ನಿಷೇಧಿಸಿ ಆದೇಶ ಹೊರಡಿಸಿದೆ.

ಅಲ್ಲದೆ, ಮೊಹರಂ ಹಬ್ಬದ ಪ್ರಯುಕ್ತ ಪ್ರಾರ್ಥನಾ ಸಭೆ ಹಾಗೂ ಮೆರವಣಿಗೆ ನಡೆಸುವುದನ್ನೂ ನಿಷೇಧ ಮಾಡಲಾಗಿದೆ. ನಿರ್ಬಂಧಗಳನ್ನು ಮೀರಿ ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆಗೆ ಮುಂದಾದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಆಗಸ್ಟ್‌ನಿಂದ ಅಕ್ಟೋಬರ್‌ ತಿಂಗಳವರೆಗೆ ಮೊಹರಂ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದುರ್ಗಾಪೂಜೆ ಸೇರಿ ಸಾಲು-ಸಾಲು ಹಬ್ಬಗಳು ಬರುತ್ತಿವೆ. ಹಬ್ಬಗಳ ಆಚರಣೆ ಹೆಸರಿನಲ್ಲಿ ಜನ ಸೇರುವುದರಿಂದ ಸೋಂಕು ವ್ಯಾಪಕವಾಗಿ ಹರಡಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೊಹರಂ ಮತ್ತು ಗೌರಿ- ಗಣೇಶ ಹಬ್ಬಗಳ ಆಚರಣೆಗೆ ಹಲವು ನಿರ್ಬಂಧಗಳನ್ನು ವಿಧಿಸಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಆದೇಶ ಹೊರಡಿಸಿದ್ದಾರೆ.

ಗೌರಿ-ಗಣೇಶದ ಮಾರ್ಗಸೂಚಿ:

ಗಣೇಶ ಚತುರ್ಥಿಯನ್ನು ಸರಳವಾಗಿ ದೇವಸ್ಥಾನದೊಳಗೆ ಮತ್ತು ಮನೆಯೊಳಗೆ ಮಾತ್ರ ಆಚರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಚಪ್ಪರ, ಪೆಂಡಾಲ್‌, ಶಾಮಿಯಾನ ಹಾಕಿ ವೇದಿಕೆ ನಿರ್ಮಿಸಿ ಗೌರಿ-ಗಣೇಶ ಮೂರ್ತಿ ಪ್ರತಿಷ್ಠಾಪಿಸುವಂತಿಲ್ಲ.

ಗಣೇಶನ ಮೂರ್ತಿ ತರುವಾಗ, ವಿಸರ್ಜಿಸುವಾಗ ಮೆರವಣಿಗೆ ಅಥವಾ ಮನರಂಜನಾ ಕಾರ್ಯಕ್ರಮ ಆಯೋಜಿಸುವಂತಿಲ್ಲ. ಮನೆಯಲ್ಲಿಯೇ ಮೂರ್ತಿಗಳನ್ನು ವಿಸರ್ಜಿಸಬೇಕು ಅಥವಾ ಸ್ಥಳೀಯ ಸಂಸ್ಥೆಗಳು ನಿರ್ಮಿಸಿದ ಹೊಂಡ, ಕಲ್ಯಾಣಿ, ಮೊಬೈಲ್‌ ಟ್ಯಾಂಕ್‌ಗಳಲ್ಲಿ ಕೊರೋನಾ ಮಾರ್ಗಸೂಚಿ ಪಾಲಿಸಿ ವಿಸರ್ಜಿಸಬೇಕು. ಗಣೇಶ ಚತುರ್ಥಿ ಆಚರಿಸುವ ದೇವಸ್ಥಾನಗಳಲ್ಲಿ ನಿತ್ಯವೂ ಸ್ಯಾನಿಟೈಸೇಷನ್‌ ಮಾಡಬೇಕು. ಭಕ್ತರನ್ನು ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಆದೇಶ ಹೊರಡಿಸಲಾಗಿದೆ.

ಮಾರ್ಗಸೂಚಿಗಳು ಪಾಲನೆಯಾಗುವಂತೆ ಸಂಬಂಧಪಟ್ಟಅಧಿಕಾರಿಗಳು ನೋಡಿಕೊಳ್ಳಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಮೊಹರಂ ಇಲ್ಲ:

ಮೊಹರಂಗೆ ಸಂಬಂಧಿಸಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಆಲಂ ಅಥವಾ ಪಂಜಾ (ಮೊಹರಂ ಆಚರಣೆ) ಮಾಡುವುದು ನಿರ್ಬಂಧಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮೊಹರಂ ಪ್ರಾರ್ಥನಾ ಸಭೆ ಮತ್ತು ಮೆರವಣಿಗೆಯನ್ನು ನಿಷೇಧಿಸಲಾಗಿದೆ. ಮಸೀದಿ ಆವರಣದಲ್ಲಿ ಸಾಮಾಜಿಕ ಅಂತರದೊಂದಿಗೆ ಸಂಬಂಧಿತ ಆಚರಣೆ ಮಾಡಿಕೊಳ್ಳಬಹುದು. ಪಂಜಾ, ಆಲಂ ಮತ್ತು ತಾಜಿಯತ್‌ಗಳನ್ನು ಸಾರ್ವಜನಿಕರು ಮುಟ್ಟದೆ ದೂರದಿಂದ ನೋಡಬೇಕು ಎಂದು ತಿಳಿಸಲಾಗಿದೆ.

ಜನದಟ್ಟಣೆ ನಿಯಂತ್ರಿಸಲು ಪಾಳಿಯಲ್ಲಿ ಪ್ರಾರ್ಥನೆ:

ಖಬರಸ್ಥಾನದಲ್ಲಿ (ಸ್ಮಶಾನ) ದಫನ್‌ ಮಾಡಲು ಮಾತ್ರ ಅವಕಾಶವಿದೆ. ಯಾವುದೇ ಖಾಲಿ ಜಾಗದಲ್ಲಿ ಮೊಹರಂಗೆ ಸಂಬಂಧಿಸಿದ ಆಚರಣೆಗಳಿಗೆ ಅನುಮತಿಯಿಲ್ಲ. ಕೊರೋನಾ ನಿಯಮಾವಳಿ ಪಾಲಿಸಿ ಮಸೀದಿಯಲ್ಲಿ ಪ್ರಾರ್ಥನೆ ಮಾಡಬೇಕು. ಹೆಚ್ಚು ಜನ ಆಗಮಿಸಿದಲ್ಲಿ 2 ಅಥವಾ ಹೆಚ್ಚಿನ ಪಾಳಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಬೇಕು. 10 ವರ್ಷದೊಳಗಿನ ಮಕ್ಕಳು, 60 ವರ್ಷ ಮೇಲ್ಪಟ್ಟವರು ಮನೆಯಲ್ಲೇ ಪ್ರಾರ್ಥನೆ ಮಾಡಬೇಕು. ಮಸೀದಿಯಲ್ಲಿ ಕೊರೋನಾ ಮಾರ್ಗಸೂಚಿ ಸ್ಪಷ್ಟವಾಗಿ ಪಾಲಿಸಬೇಕು.

ಇನ್ನು ಹಸ್ತಲಾಘವ, ಆಲಿಂಗನ ಮಾಡುವಂತಿಲ್ಲ. ಮಸೀದಿ ಹೊರತುಪಡಿಸಿ ಸಮುದಾಯ ಭವನ, ಶಾದಿ ಮಹಲ್‌ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಮೊಹರಂ ಸಾಮೂಹಿಕ ಪ್ರಾರ್ಥನೆ ಆಯೋಜಿಸುವಂತಿಲ್ಲ. ಮೆರವಣಿಗೆ ಹಾಗೂ ಸಾರ್ವಜನಿಕ ಭಾಷಣ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

click me!