
ಬೆಂಗಳೂರು (ಸೆ.10): ಕರ್ನಾಟಕ ರಾಜ್ಯದಲ್ಲಿ 2025ರ ನೈಋತ್ಯ ಮುಂಗಾರು ಹಂಗಾಮಿನಲ್ಲಿ ಸಾಮಾನ್ಯ ಪ್ರಮಾಣದ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ವರದಿ ಮಾಡಿದೆ. ಜೂನ್ 1 ರಿಂದ ಸೆಪ್ಟೆಂಬರ್ 10 ರವರೆಗಿನ ಅವಧಿಯಲ್ಲಿ ರಾಜ್ಯಾದ್ಯಂತ ಮಳೆ ಕೊರತೆಯಿಲ್ಲದೆ, ನಿರೀಕ್ಷಿತ ಮಟ್ಟದಲ್ಲಿಯೇ ಮಳೆಯಾಗಿದೆ ಎಂದು ವರದಿ ತಿಳಿಸಿದೆ.
ತಿಂಗಳವಾರು ಮಳೆ ಪ್ರಮಾಣದ ವಿವರಗಳು:
ಜೂನ್ 2025: ಈ ತಿಂಗಳಲ್ಲಿ ರಾಜ್ಯದಲ್ಲಿ 199 ಮಿ.ಮೀ. ನಷ್ಟು ಸಾಮಾನ್ಯ ಮಳೆ ನಿರೀಕ್ಷಿಸಲಾಗಿತ್ತು. ಅದಕ್ಕೆ ಹೋಲಿಸಿದರೆ, 203 ಮಿ.ಮೀ. ನಷ್ಟು ವಾಸ್ತವಿಕ ಮಳೆ ದಾಖಲಾಗಿದ್ದು, ಶೇಕಡಾ 2ರಷ್ಟು ಹೆಚ್ಚು ಮಳೆಯಾಗಿದೆ. ಈ ಮಳೆಯ ಪ್ರಮಾಣವನ್ನು 'ಸಾಮಾನ್ಯ' ವರ್ಗಕ್ಕೆ ಸೇರಿಸಲಾಗಿದೆ.
ಜುಲೈ 2025: ಜುಲೈ ತಿಂಗಳಲ್ಲಿ ನಿರೀಕ್ಷಿತ 271 ಮಿ.ಮೀ. ನಷ್ಟು ಸಾಮಾನ್ಯ ಮಳೆಗೆ ಹೋಲಿಸಿದರೆ, 263 ಮಿ.ಮೀ. ನಷ್ಟು ವಾಸ್ತವಿಕ ಮಳೆ ದಾಖಲಾಗಿದೆ. ಇದು ನಿರೀಕ್ಷಿತ ಪ್ರಮಾಣಕ್ಕಿಂತ ಶೇಕಡಾ 3ರಷ್ಟು ಕಡಿಮೆ ಇದ್ದರೂ, ಇದನ್ನು 'ಸಾಮಾನ್ಯ' ಮಳೆಯೆಂದು ವರ್ಗೀಕರಿಸಲಾಗಿದೆ.
ಆಗಸ್ಟ್ 2025: ಆಗಸ್ಟ್ ತಿಂಗಳು ಈ ವರ್ಷ ಉತ್ತಮ ಮಳೆ ಕಂಡಿದೆ. ನಿರೀಕ್ಷಿತ 220 ಮಿ.ಮೀ. ಸಾಮಾನ್ಯ ಮಳೆಗೆ ಹೋಲಿಸಿದರೆ, ರಾಜ್ಯಾದ್ಯಂತ 260 ಮಿ.ಮೀ. ವಾಸ್ತವಿಕ ಮಳೆ ದಾಖಲಾಗಿದೆ. ಇದು ಶೇಕಡಾ 18ರಷ್ಟು ಹೆಚ್ಚುವರಿ ಮಳೆಯಾಗಿದ್ದು, ಇದನ್ನು ಕೂಡ 'ಸಾಮಾನ್ಯ' ವಿಭಾಗದಲ್ಲೇ ಪರಿಗಣಿಸಲಾಗಿದೆ.
ಟಿಬಿ ಡ್ಯಾಂ ಕ್ರಸ್ಟ್ಗೇಟ್ ದುರಸ್ತಿಗೆ ಆದ್ಯತೆ: ಸಿಎಂ ಸಿದ್ದರಾಮಯ್ಯ ಭರವಸೆ
ಸೆಪ್ಟೆಂಬರ್ 2025 (1 ರಿಂದ 10 ರವರೆಗೆ): ಈ ತಿಂಗಳ ಮೊದಲ ಹತ್ತು ದಿನಗಳಲ್ಲಿ ಮಳೆಯ ಪ್ರಮಾಣ ಕೊಂಚ ಕಡಿಮೆಯಾಗಿದೆ. ನಿರೀಕ್ಷಿತ 47 ಮಿ.ಮೀ. ಸಾಮಾನ್ಯ ಮಳೆಗೆ ಹೋಲಿಸಿದರೆ, 33 ಮಿ.ಮೀ. ವಾಸ್ತವಿಕ ಮಳೆ ಮಾತ್ರ ದಾಖಲಾಗಿದೆ. ಇದು ಶೇಕಡಾ 30ರಷ್ಟು ಕಡಿಮೆಯಾಗಿದ್ದರೂ, ಈ ಅವಧಿಯ ಮಳೆಯನ್ನೂ 'ಸಾಮಾನ್ಯ'ವೆಂದು ಪರಿಗಣಿಸಲಾಗಿದೆ.
ಜೂನ್ 1 ರಿಂದ ಸೆಪ್ಟೆಂಬರ್ 10 ರವರೆಗಿನ ನೈಋತ್ಯ ಮುಂಗಾರು ಹಂಗಾಮಿನಲ್ಲಿ ಕರ್ನಾಟಕದಲ್ಲಿ ಒಟ್ಟಾರೆ 737 ಮಿ.ಮೀ. ನಷ್ಟು ಸಾಮಾನ್ಯ ಮಳೆ ನಿರೀಕ್ಷಿಸಲಾಗಿತ್ತು. ಆದರೆ, ಈ ಅವಧಿಯಲ್ಲಿ ರಾಜ್ಯದಲ್ಲಿ 758 ಮಿ.ಮೀ. ನಷ್ಟು ವಾಸ್ತವಿಕ ಮಳೆ ದಾಖಲಾಗಿದೆ. ಇದು ಸಾಮಾನ್ಯ ಪ್ರಮಾಣಕ್ಕಿಂತ ಶೇಕಡಾ 3ರಷ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಈ ವರ್ಷದ ನೈಋತ್ಯ ಮುಂಗಾರು 'ಸಾಮಾನ್ಯ' ವರ್ಗದಲ್ಲಿ ಬಂದಿದೆ ಎಂದು KSNDMC ವರದಿ ತಿಳಿಸಿದೆ.
ಮುಂದಿನ 7 ದಿನ ಮಳೆ: ಪಾಕಿಸ್ತಾನದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಮಳೆ ಮಾರುತಗಳು ಅರಬ್ಬೀ ಸಮುದ್ರದೆಡೆಗೆ ಬೀಸುತ್ತಿದ್ದು, ಪೂರ್ವದತ್ತ ಸಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಪಶ್ಚಿಮ ಘಟ್ಟಗಳ ಮಾರ್ಗವಾಗಿ ಒಡಿಶಾದತ್ತ ಮಳೆ ಮಾರುತಗಳು ಸಾಗಲಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ನಾಳೆಯಿಂದಲೇ ಮಳೆ ಮುನ್ಸೂಚನೆ ನೀಡಲಾಗಿದೆ. 9 ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ