
ತುಮಕೂರು (ಆ.31): ಕರ್ನಾಟಕ ರಾಜಕೀಯದಲ್ಲಿ ಹಿಂದುಳಿದ ಮತ್ತು ದಲಿತ ನಾಯಕರಿಗೆ ಆಗುತ್ತಿರುವ ಅನ್ಯಾಯದ ಕುರಿತು ವಿವಿಧ ಮಠಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ಸಂಪುಟದಿಂದ ಕೆ.ಎನ್. ರಾಜಣ್ಣ ಅವರನ್ನು ಕೈಬಿಟ್ಟಿರುವ ಸರ್ಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಅವರನ್ನು ಪುನಃ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಹೈಕಮಾಂಡ್ ಭೇಟಿಗೆ ಸಿದ್ಧತೆ ನಡೆಸಿದ್ದಾರೆ.
ಮಠಾಧೀಶರ ನಡೆ:
ತುಮಕೂರಿನಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ನಿವಾಸಕ್ಕೆ ಭೇಟಿ ನೀಡಿದ 15ಕ್ಕೂ ಹೆಚ್ಚು ಮಠಾಧೀಶರ ನಿಯೋಗವು ಅವರಿಗೆ ನೈತಿಕ ಬೆಂಬಲ ನೀಡಿದೆ. ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಅವರು ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿ, 'ಒಬ್ಬ ಹಿಂದುಳಿದ ಹಾಗೂ ದಲಿತ ನಾಯಕನನ್ನು ಸಣ್ಣ ಕಾರಣಕ್ಕೆ ಸಂಪುಟದಿಂದ ಕೈಬಿಟ್ಟಿರುವುದು ಸಮಂಜಸವಲ್ಲ. ಸಮಾಜಕ್ಕಾಗಿ ಸಾಕಷ್ಟು ಕೆಲಸ ಮಾಡಿರುವ ರಾಜಣ್ಣ ಅವರಿಗೆ ಈ ರೀತಿ ಶಿಕ್ಷೆಯಾಗಬಾರದಿತ್ತು' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಪುಟದಿಂದ ಕೈಬಿಡುವಂತಹ ತಪ್ಪು ಅವರೇನೂ ಮಾಡಿಲ್ಲ:
ಸಚಿವ ಸಂಪುಟದಿಂದ ಅವರನ್ನು ಕೈಬಿಟ್ಟ ಬಗ್ಗೆ ರಾಜಣ್ಣರನ್ನು ಭೇಟಿಯಾಗಿ ಮಾತನಾಡಿದ್ದೇವೆ ಅವರು ಏನು ಹೇಳಿಲ್ಲ. ನಾವು ಮಾಧ್ಯಮದಲ್ಲಿ ನೋಡಿ ತಿಳಿದುಕೊಂಡಿದ್ದೇವೆ. ರಾಜಣ್ಣ ಅವರ ಅಭಿಪ್ರಾಯವು ಹಾಗೆ ಇದೆ, ರಾಜ್ಯದಲ್ಲಿ ಹಿಂದುಳಿದ, ದಲಿತ ನಾಯಕನನ್ನು ರಾಜಕೀಯ ವಾಗಿ ತುಳಿಯುವ ಪ್ರಯತ್ನ ಆಗುತ್ತಿದೆ. ಅವರು ಮಡಿರುವ ಸಣ್ಣ ತಪ್ಪಿಗೆ ಈ ರೀತಿ ಶಿಕ್ಷೆ ಆಗಬಾರದಾಗಿತ್ತು. ನಾವು ಕೂಡ ಯೋಚನೆ ಮಾಡ್ತಿದೀವಿ, ಒಬ್ಬ ಹಿಂದುಳಿದ ಹಾಗೂ ದಲಿತ ಸಮಾಜದ ಮುಖಂಡನನ್ನು ಒಂದು ಸಣ್ಣ ವಿಚಾರಕ್ಕೆ ಸಂಪುಟದಿಂದ ಕೈಬಿಡಲಾಗಿದೆ. ಸಚಿವ ಸಂಪುಟದಿಂದ ಕೈ ಬಿಡುವ ಕೃತ್ಯ ಏನು ಅವರು ಮಾಡಿಲ್ಲ. ಆ ದೃಷ್ಟಿಯಲ್ಲಿ ಪಕ್ಷದ ಗಮನಕ್ಕೆ ತರಬೇಕಾಗಿರುವಂಥದ್ದಾಗಿದೆ. ಇದು ಒಂದು ಸಾಮಾಜಿಕ ಕಳಕಳಿಯಾಗಿದೆ. ನಾವೆಲ್ಲಾ ಮಠಾಧೀಶರು ಕೂಡ ರಾಜಣ್ಣ ಅವರು ಬೇಕು, ರಾಜಣ್ಣ ರಾಜಕೀಯದಲ್ಲಿ ಇರಬೇಕು ಅಂತ ಹೈಕಮಾಂಡ್ ಮುಂದೆ ಹೇಳುತ್ತೇವೆ ಎಂದು ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
ಖರ್ಗೆ, ರಾಹುಲ್ ಗಾಂಧಿ ಭೇಟಿಗೆ ಸಿದ್ಧತೆ:
ನಾವು ಮಠಾಧೀಶರೆಲ್ಲರೂ ತೀರ್ಮಾನ ಮಾಡಿ, ರಾಜಣ್ಣ ಅವರನ್ನು ಪುನಃ ಸಚೊವ ಸಂಪುಟ್ಟಕ್ಕೆ ಸೇರಿಸಿಕೊಳ್ಳಬೇಕು ಎಂಬ ವಿಚಾರವನ್ನು ಕಾಂಗ್ರೆಸ್ ಹೈಕಮಾಂಡ್ನ ಗಮನಕ್ಕೆ ತರಲು ಸದ್ಯದಲ್ಲೇ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದೇವೆ. 'ರಾಜಣ್ಣ ಅವರನ್ನು ರಾಜಕೀಯವಾಗಿ ತುಳಿಯುವ ಪ್ರಯತ್ನ ನಡೆಯುತ್ತಿದೆ ಎಂದು ಮಾಧ್ಯಮಗಳ ಮೂಲಕ ನಮಗೆ ತಿಳಿದು ಬಂದಿದೆ. ಸಣ್ಣ ತಪ್ಪಿಗೆ ಅವರನ್ನು ಕೈಬಿಟ್ಟಿರುವ ಸರ್ಕಾರದ ನಡೆಯನ್ನು ಖಂಡಿಸುತ್ತೇವೆ' ಎಂದು ಸ್ವಾಮೀಜಿಗಳು ಹೇಳಿದ್ದಾರೆ.
ಒಟ್ಟಾರೆ ಹಲವು ಮಠಗಳ ಸ್ವಾಮೀಜಿಗಳು ರಾಜಣ್ಣಗೆ ಬೆಂಬಲ ಸೂಚಿಸಿದ್ದಾರೆ. 'ರಾಜಣ್ಣ ವಾಲ್ಮೀಕಿ ಸಮಾಜ ಮಾತ್ರವಲ್ಲದೆ ಎಲ್ಲಾ ಹಿಂದುಳಿದ ಸಮುದಾಯಗಳ ಪರವಾಗಿ ಕೆಲಸ ಮಾಡಿದ್ದಾರೆ. ಅವರ ಸಾಮಾಜಿಕ ಕಳಕಳಿಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಮತ್ತೊಂದು ಅವಕಾಶ ನೀಡಬೇಕು' ಎಂದು ಸ್ವಾಮೀಜಿಗಳ ನಿಯೋಗವು ಒತ್ತಾಯಿಸಲಿದೆ. ಈ ಬೆಳವಣಿಗೆಯಿಂದ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದ್ದು, ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ