
ವಿಜಯಪುರ (ಜ.29): ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ನಡೆದ ಎತ್ತಿನ ಬಂಡಿಗಳ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕನ್ನೇರಿ ಶ್ರೀಗಳು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಕೃಷಿಯ ಬೆನ್ನೆಲುಬಾದ ಎತ್ತು ಮತ್ತು ಆಕಳುಗಳ ಸಂರಕ್ಷಣೆಗಾಗಿ ಸರ್ಕಾರ ತಕ್ಷಣವೇ ವಿಶೇಷ ಅನುದಾನ ಘೋಷಿಸಬೇಕು ಎಂದು ಆಗ್ರಹಿಸಿದ ಶ್ರೀಗಳು, ರೈತರ ಹಿತದೃಷ್ಟಿಯಿಂದ 'ನಂದಿ ಅಭಿಯಾನ'ಕ್ಕೆ ವೇಗ ನೀಡುವಂತೆ ಒತ್ತಾಯಿಸಿದರು.
ಗೋವುಗಳ ರಕ್ಷಣೆಯ ವಿಷಯದಲ್ಲಿ ಕರ್ನಾಟಕ ಸರ್ಕಾರ ನೆರೆಯ ರಾಜ್ಯಗಳನ್ನು ನೋಡಿ ಕಲಿಯಬೇಕಿದೆ ಎಂದು ಶ್ರೀಗಳು ಕಿವಿಮಾತು ಹೇಳಿದರು. ಗೋವಾದಲ್ಲಿ ಆಕಳು ಮತ್ತು ಎತ್ತಿಗೆ ದಿನಕ್ಕೆ 650 ರೂಪಾಯಿ ಅನುದಾನ ನೀಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ 50 ರೂಪಾಯಿ ಹಾಗೂ ಇತರ ರಾಜ್ಯಗಳಲ್ಲಿ 80 ರಿಂದ 90 ರೂಪಾಯಿ ನೀಡಲಾಗುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ಒಂದು ರೂಪಾಯಿಯೂ ನೀಡುತ್ತಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಪರೋಕ್ಷವಾಗಿ ಟೀಕಿಸಿದ ಶ್ರೀಗಳು, ಯಾರು ಕೇಳದಿದ್ದರೂ ಅವರಿಗೆ ಬಿಟ್ಟಿ ಭಾಗ್ಯಗಳನ್ನು ನೀಡುತ್ತಿದ್ದೀರಿ. ಆದರೆ ಅನ್ನ ನೀಡುವ ರೈತನ ಎತ್ತುಗಳಿಗೆ ಮೇವಿಗಾಗಿ ಅನುದಾನ ನೀಡಲು ಸರ್ಕಾರಕ್ಕೆ ಮನಸ್ಸಿಲ್ಲವೇ? ಸರ್ಕಾರ ಯಾವುದೇ ಇರಲಿ, ಎತ್ತುಗಳಿಗೆ ಅನುದಾನ ನೀಡಿದರೆ ಮಾತ್ರ ಅವು ಬದುಕಲು ಸಾಧ್ಯ ಎಂದು ನೇರವಾಗಿ ಚಾಟಿ ಬೀಸಿದರು. ಇದು ಕೇವಲ ರೈತರ ಮನವಿಯಲ್ಲ, ಸ್ವಾಮೀಜಿಗಳ ಆಗ್ರಹವೂ ಹೌದು ಎಂದು ಎಚ್ಚರಿಸಿದರು.
ಅಜಿತ್ ಪವಾರ್ ನಿಧನಕ್ಕೆ ಕನ್ನೇರಿ ಶ್ರೀ ಸಂತಾಪ
ಇದೇ ವೇಳೆ ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಅವರ ದುರಂತ ನಿಧನದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಗಳು ತೀವ್ರ ಸಂತಾಪ ಸೂಚಿಸಿದರು. "ಅಜಿತ್ ಪವಾರ್ ಒಬ್ಬ ಧೀಮಂತ ನಾಯಕ ಮತ್ತು ಹಠವಾದಿ ರಾಜಕಾರಣಿಯಾಗಿದ್ದರು. ಕೆಲಸ ಆಗುತ್ತದೆ ಎಂದರೆ ಆಗುತ್ತದೆ, ಇಲ್ಲವಾದರೆ ಇಲ್ಲ ಎಂದು ನೇರವಾಗಿ ಹೇಳುವ ಗುಣ ಅವರದ್ದಾಗಿತ್ತು. ಅವರ ನಿಧನ ನಾಡಿಗೆ ತುಂಬಲಾರದ ನಷ್ಟ ಎಂದು ಹೇಳುತ್ತಾ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ