
ಬೆಂಗಳೂರು/ಬಳ್ಳಾರಿ/ದಾವಣಗೆರೆ (ಮಾ.01): ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಕವಿದ ಬೆನ್ನಲ್ಲೇ ಜಾಗತಿಕ ವಿಮಾನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಇದರ ಪರಿಣಾಮವಾಗಿ ಕರ್ನಾಟಕದ ಬಳ್ಳಾರಿ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಿಂದ ದುಬೈ ಪ್ರವಾಸಕ್ಕೆ ತೆರಳಿದ್ದ ಸುಮಾರು 51 ಮಂದಿ ಹಿರಿಯ ನಾಗರಿಕರು ಅತಂತ್ರರಾಗಿದ್ದಾರೆ. ಶಾರ್ಜಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಇವರೆಲ್ಲರೂ ವಾಪಸ್ ಬರಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ತೋರಣಗಟ್ಟೆ ಗ್ರಾಮದ 15 ಮಂದಿ ಹಾಗೂ ಬಳ್ಳಾರಿ, ಚಿತ್ರದುರ್ಗದ 36 ಜನರು ಸೇರಿದಂತೆ ಒಟ್ಟು 51 ಮಂದಿಯ ತಂಡ ಕಳೆದ ಫೆಬ್ರವರಿ 23ರಂದು ಬೆಂಗಳೂರಿನಿಂದ ದುಬೈ ಪ್ರವಾಸಕ್ಕೆ ತೆರಳಿತ್ತು. ಫೆಬ್ರವರಿ 28ರ ಶನಿವಾರ ರಾತ್ರಿ 9:30ಕ್ಕೆ ಇವರೆಲ್ಲರಿಗೂ ಮರಳಿ ಬರಲು ವಿಮಾನ ಬುಕ್ ಆಗಿತ್ತು. ಆದರೆ, ಇವರು ವಿಮಾನ ನಿಲ್ದಾಣಕ್ಕೆ ತಲುಪುವಷ್ಟರಲ್ಲಿ ಯುದ್ಧದ ತೀವ್ರತೆಯಿಂದಾಗಿ ಶಾರ್ಜಾ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿತ್ತು. ಮಧ್ಯಾಹ್ನ 3 ಗಂಟೆಯೊಳಗೆ ನಿಲ್ದಾಣ ತಲುಪಿದ್ದವರಿಗೆ ಮಾತ್ರ ಒಳಗೆ ಪ್ರವೇಶ ನೀಡಲಾಗಿತ್ತು. ಆದರೆ ಈ ತಂಡವು ಮಧ್ಯಾಹ್ನದ ನಂತರ ಬಂದ ಕಾರಣ ಏರ್ಪೋರ್ಟ್ ಸಿಬ್ಬಂದಿ ಇವರನ್ನು ಒಳಗೆ ಬಿಡಲು ನಿರಾಕರಿಸಿದ್ದಾರೆ. ಇದರಿಂದಾಗಿ ಸಾವಿರಾರು ಮೈಲಿ ದೂರದ ಪರದೇಶದಲ್ಲಿ ಇವರೆಲ್ಲರೂ ಬೀದಿಗೆ ಬೀಳುವಂತಾಗಿದೆ.
ಸಿಲುಕಿಕೊಂಡಿರುವವರಲ್ಲಿ 27 ವೃದ್ಧರು ಮತ್ತು 24 ವೃದ್ಧೆಯರಿದ್ದಾರೆ. ಇವರೆಲ್ಲರೂ 60 ವರ್ಷ ಮೇಲ್ಪಟ್ಟವರಾಗಿದ್ದು, ಬಹುತೇಕರು ಬಿಪಿ (ರಕ್ತದೊತ್ತಡ) ಮತ್ತು ಶುಗರ್ (ಮಧುಮೇಹ) ಕಾಯಿಲೆಗಳಿಂದ ಬಳಲುತ್ತಿದ್ದಾರೆ. ನಿರಂತರವಾಗಿ ಔಷಧಿ ಸೇವಿಸಬೇಕಾದ ಅನಿವಾರ್ಯತೆ ಇವರದ್ದಾಗಿದೆ. ಸದ್ಯ ಇವರು ಶಾರ್ಜಾ ವಿಮಾನ ನಿಲ್ದಾಣದಿಂದ ಸುಮಾರು 23 ಕಿ.ಮೀ ದೂರದಲ್ಲಿರುವ ಅಪಾರ್ಟ್ಮೆಂಟ್ ಒಂದರಲ್ಲಿ ಆಶ್ರಯ ಪಡೆದಿದ್ದಾರೆ. ದುಬೈನಲ್ಲಿ ಸದ್ಯ ಲಾಡ್ಜ್ಗಳ ಬಾಡಿಗೆ ಗಗನಕ್ಕೇರಿದೆ. ಕೇವಲ 12 ಗಂಟೆಗಳ ಕಾಲ ಉಳಿದುಕೊಳ್ಳಲು ಒಬ್ಬರಿಗೆ 10 ರಿಂದ 20 ಸಾವಿರ ರೂಪಾಯಿ ಕೇಳಲಾಗುತ್ತಿದೆ. ಪ್ರವಾಸಕ್ಕೆಂದು ಸೀಮಿತ ಹಣ ಒಯ್ದಿದ್ದ ಇವರ ಬಳಿ ಈಗ ಹಣವೂ ಖಾಲಿಯಾಗುತ್ತಿದ್ದು, ಮುಂದೆ ಏನು ಮಾಡಬೇಕೆಂದು ತಿಳಿಯದೆ ಕಂಗಾಲಾಗಿದ್ದಾರೆ.
ತಮ್ಮ ಅಸಹಾಯಕ ಸ್ಥಿತಿಯ ಬಗ್ಗೆ ಮೊಬೈಲ್ ವಿಡಿಯೋ ಮಾಡಿರುವ ವಯೋವೃದ್ಧರು, ಬಳ್ಳಾರಿ ಶಾಸಕರಾದ ಭರತ್ ರೆಡ್ಡಿ, ಬಿ. ನಾಗೇಂದ್ರ ಹಾಗೂ ದಾವಣಗೆರೆ ಜಿಲ್ಲಾಡಳಿತಕ್ಕೆ ರಕ್ಷಣೆಗಾಗಿ ಮೊರೆ ಇಟ್ಟಿದ್ದಾರೆ. "ನಾವು ಇಲ್ಲಿ ಅಕ್ಷರಶಃ ಲಾಕ್ ಆಗಿದ್ದೇವೆ. ವಿಮಾನ ನಿಲ್ದಾಣದೊಳಗೆ ನಮ್ಮನ್ನು ಬಿಡುತ್ತಿಲ್ಲ, ಹೊರಗೆ ಉಳಿಯಲು ಹಣವಿಲ್ಲ. ದಯವಿಟ್ಟು ನಮ್ಮನ್ನು ಭಾರತಕ್ಕೆ ಕರೆಸಿಕೊಳ್ಳಲು ವ್ಯವಸ್ಥೆ ಮಾಡಿ" ಎಂದು ನಿವೃತ್ತ ಪ್ರಾಧ್ಯಾಪಕ ಚಂದ್ರಶೇಖರ್ ಸೇರಿದಂತೆ ಹಲವರು ಕಣ್ಣೀರಿಟ್ಟಿದ್ದಾರೆ.
ವಿದೇಶಾಂಗ ಇಲಾಖೆಯು ಕೂಡಲೇ ಮಧ್ಯಪ್ರವೇಶಿಸಿ ಅತಂತ್ರರಾಗಿರುವ ಈ ಹಿರಿಯ ನಾಗರಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ