
ಮೊಟ್ಟ ಮೊದಲ ಬಾರಿಗೆ ವಿಧಾನಸೌಧದಲ್ಲಿ ನಡೆಯುತ್ತಿರೋ ಪುಸ್ತಕ ಮೇಳದಲ್ಲಿ ತಮಿಳು ಮಳಿಗೆ ಇಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. ಪುಸ್ತಕ ಮೇಳದಲ್ಲಿ ತಮಿಳು ಪುಸ್ತಕಗಳ ಮಾರಾಟಕ್ಕೆ ಅವಕಾಶ ಕೊಟ್ಟಿರುವುದು ಕನ್ನಡ ಹೋರಾಟಗಾರರ ಕಣ್ಣು ಕೆಂಪಾಗಿಸಿದೆ.
ಒಟ್ಟು 191 ಮಳಿಗೆಗಳ ಪೈಕಿ ತಮಿಳು ಪುಸ್ತಕಗಳ ಮಾರಾಟಕ್ಕೆ ಕೊಟ್ಟಿರುವುದು ಒಂದೇ ಒಂದು ಮಳಿಗೆ. ಅಷ್ಟಕ್ಕೂ ತಮಿಳು ಬುಕ್ ಸ್ಟಾಲ್ನಲ್ಲಿ ಕೇವಲ ತಮಿಳು ಭಾಷೆ ಕಥೆ, ಕಾದಂಬರಿಗಳನ್ನಷ್ಟೇ ಮಾರಾಟ ಮಾಡುತ್ತಿಲ್ಲ. ತಮಿಳು ಕಾದಂಬರಿ, ಕಥೆ ಪುಸ್ತಕಗಳ ಜತೆ ನಮ್ಮ ಕನ್ನಡ ಲೇಖಕರ ಪುಸ್ತಕಗಳ ತಮಿಳು ಅನುವಾದದ ಪುಸ್ತಕಗಳು ಮಾರಾಟಕ್ಕಿವೆ.
ಹಿರಿಯ ಸಾಹಿತಿಗಳಾದ ಡಾ.ಯು.ಆರ್. ಅನಂತಮೂರ್ತಿ ಅವರ ಅವಸ್ಥೆ, ಡಾ. ಸಿದ್ದಲಿಂಗಯ್ಯನವರ ಊರು ಕೇರಿ, ಗಿರೀಶ್ ಕಾರ್ನಾಡರ ನಾಟಕ, ವಸುದೇಂದ್ರ ಅವರ ಮೋಹನಸ್ವಾಮಿ, ದೇವನೂರು ಮಹಾದೇವರ ಪುಸ್ತಕಗಳ ತಮಿಳು ಭಾಷೆಗೆ ಅನುವಾದಗೊಂಡಿದ್ದು, ಆ ಪುಸ್ತಕಗಳನ್ನೂ ಮಳಿಗೆಯಲ್ಲಿಡಲಾಗಿದೆ. ಕನ್ಯಾಕುಮಾರಿಯಿಂದ ಬಂದಿರುವ ಪ್ರಕಾಶಕರು ಸ್ಟಾಲ್ ತೆರೆದಿದ್ದಾರೆ. ಮಳಿಗೆಯಲ್ಲಿ ಕನ್ನಡ ಮಾತಾಡಲು ಬೆಂಗಳೂರಿನ ಕನ್ನಡ ಬಲ್ಲ ಯುವತಿ ಇದ್ದಾರೆ.
ಇದನ್ನೂ ಓದಿ: ಪ್ರತಿ ವರ್ಷ ವಿಧಾನಸೌಧ ಆವರಣದಲ್ಲಿ ಪುಸ್ತಕ ಮೇಳ: ಸಿಎಂ ಸಿದ್ದರಾಮಯ್ಯ ಭರವಸೆ
ನಿನ್ನೆಯಿಂದ ಕೇವಲ 3-4 ಪುಸ್ತಕವಷ್ಟೇ ಮಾರಾಟವಾಗಿದ್ದು ಅಂತ ಮಾಲೀಕ ಪೆಚ್ಚುನಗೆ ನಕ್ಕರು. ಕನ್ನಡದ ಲೇಖಕರು ತಮಿಳಿನಲ್ಲೂ ಛಾಪು ಮೂಡಿಸಿದ್ದಾರಲ್ಲ ಅನ್ನೋದೇ ಸಮಾಧಾನದ ವಿಷಯ. ಅಷ್ಟಕ್ಕೂ ಪುಸ್ತಕ ಮೇಳದಲ್ಲಿ ಇಂಗ್ಲೀಷ್, ಹಿಂದಿ ಭಾಷೆ ಪುಸ್ತಕಗಳಿರುವಂತೆ ತಮಿಳು ಭಾಷೆ ಪುಸ್ತಕಗಳ ಮಾರಾಟಕ್ಕೆ ಅವಕಾಶ ಕೊಟ್ಟಿದ್ದು ತಪ್ಪೇ ? ಪುಸ್ತಕ ಮೇಳದಲ್ಲಿ ತಮಿಳು ಪುಸ್ತಕ ಮಾರಾಟ ಅಪರಾಧವೇ ? ಕನ್ನಡ ಲೇಖಕರು ಬರೆದದ್ದು ತಮಿಳಿನಲ್ಲಿ ಅನುವಾದಗೊಂಡಿರುವ ಪುಸ್ತಕ ಮಾರಾಟ ತಪ್ಪೇನು? ಅಂತಿದ್ದಾರೆ ಓದುಗರು.
ಬೆಂಗಳೂರಿನಲ್ಲಿ ತಮಿಳು, ತೆಲುಗು ಸೇರಿದಂತೆ ಪರಭಾಷೆ ಸಿನಿಮಾಗಳದ್ದೇ ಪ್ರಾಬಲ್ಯ. ಪರಭಾಷೆ ಚಿತ್ರಗಳ ಹಾವಳಿಯಿಂದ ಕನ್ನಡ ಚಿತ್ರಗಳು ಮೂಲೆ ಸೇರುತ್ತಿವೆ ಎಂಬ ಕನ್ನಡ ನಿರ್ಮಾಪಕರ, ನಿರ್ದೇಶಕರ ಅಳಲಿಗೆ ಕಿವಿಗೊಡದ ಕನ್ನಡ ಹೋರಾಟಗಾರರು, ತಮಿಳು ಪುಸ್ತಕ ಮಳಿಗೆ ತೆರೆಯಲು ಅವಕಾಶ ಕೊಟ್ಟಿದ್ದನ್ನೇ ವಿವಾದ ಮಾಡುವುದು ದ್ವಂದ್ವ ನಿಲುವಲ್ಲವೇ ? ಪುಸ್ತಕ ಮಳಿಗೆಯಲ್ಲಿ ಯಾವುದೇ ಭಾಷೆಯ ಪುಸ್ತಕವಿರಲಿ, ಅದರಲ್ಲಿ, ಸಾಹಿತ್ಯದ ಗಂಧ ಹರಡಬೇಕು, ಕನ್ನಡ ಲೇಖಕರ ಕೃತಿಗಳು, ಇತರೆ ಭಾಷೆಗಳಲ್ಲಿ ಅನುವಾದಗೊಂಡು, ಕನ್ನಡದ ಕಂಪು ಜಗತ್ತಿನಾದ್ಯಂತ ಪಸರಿಸಿದರೆ ತಪ್ಪೇನು? ಹತ್ತಾರು ವರ್ಷಗಳಿಂದ ಕನ್ನಡ ನೆಲದಲ್ಲಿ ಬದುಕು ಕಟ್ಟಿಕೊಂಡಿರುವ ಪರಭಾಷಿಗರಿಗೆ ಅವರದ್ದೇ ಭಾಷೆಯಲ್ಲಿ ಕನ್ನಡ ಪುಸ್ತಕ ಓದಲು ಸಿಕ್ಕರೆ, ಕನ್ನಡ ಸಾಹಿತ್ಯದ ವ್ಯಾಪ್ತಿ ವಿಸ್ತಾರವಾದಂತಾಗುತ್ತದೆ.
ಇದನ್ನೂ ಓದಿ: ಫೆ.27ರಿಂದ ಮಾ.3ರವರೆಗೆ ವಿಧಾನಸೌಧದಲ್ಲಿ ಪುಸ್ತಕ ಮೇಳ: ಸಾರ್ವಜನಿಕರಿಗೆ ಮುಕ್ತ ಅವಕಾಶ!
ವಿಧಾನಸೌಧದ ಅಂಗಳದಲ್ಲಿ ಸದಾ ಕಾಣುವ ರಾಜಕಾರಣಿಗಳು, ಪೊಲೀಸರು, ಅಧಿಕಾರಿಗಳ ಜತೆ ಪುಸ್ತಕ ಮೇಳಕ್ಕೆ ಬರುವವರ ಎದೆಯಲ್ಲಿ ಪುಟ್ಟದೊಂದು ಸಾಹಿತ್ಯದ ಹೂವು ಅರಳಿದರೆ ಅದೇ ಪುಸ್ತಕ ಮೇಳದ ಸಾರ್ಥಕತೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ