
ಬೆಂಗಳೂರು(ಫೆ.26): ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ 2022’ ವಿಧಾನಮಂಡಲದಲ್ಲಿ ಅನುಮೋದನೆ ಪಡೆದಿರುವುದು ಒಂದು ಐತಿಹಾಸಿಕವಾದ ಸಂಗತಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಎಸ್.ನಾಗಾಭರಣ ಸಂತಸ ವ್ಯಕ್ತಪಡಿಸಿದ್ದಾರೆ.
ಶನಿವಾರ ಈ ಕುರಿತು ಹೇಳಿಕೆ ನೀಡಿರುವ ಅವರು, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಅನುಮೋದನೆ ಕನ್ನಡಿಗರ ಪಾಲಿಗೆ ಇದು ಒಂದು ಚಾರಿತ್ರಿಕ ನಿರ್ಣಯವಾಗಿದೆ. ಇದಕ್ಕೆ ಕಾರಣರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್, ಕಾನೂನು ಸಚಿವ ಮಾಧುಸ್ವಾಮಿ ಅವರನ್ನು ಅಭಿನಂದಿಸುವುದಾಗಿ ತಿಳಿಸಿದ್ದಾರೆ.
ಕನ್ನಡಿಗರಿಗೆ 8 ಲಕ್ಷ ಉದ್ಯೋಗ ಕೈತಪ್ಪುತ್ತಿವೆ: ಟಿ.ಎಸ್. ನಾಗಾಭರಣ
ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಎಂಬ ಅಸ್ಮಿತೆಯನ್ನು ಕಾಪಾಡಲು ಈ ವಿಧೇಯಕ ಮಂಡನೆ ಅತ್ಯಂತ ಅವಶ್ಯವಾಗಿತ್ತು. ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕ ತನ್ನ ಮಾತೃಭಾಷೆಯಾದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿಗೆ ಒಂದು ಕಾಯಿದೆಯ ಸ್ವರೂಪ ತಂದು ಅನುಷ್ಠಾನಗೊಳಿಸಲು ಹೊರಟಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಇದರಿಂದ ಕನ್ನಡಿಗರ ಭಾಷಾ ಚಳವಳಿ ಮತ್ತು ಹೋರಾಟಕ್ಕೆ ಕಾಯ್ದೆಯ ಬಲ ಬಂದಂತಾಗಿದೆ. ಈ ಮೂಲಕ ಕರ್ನಾಟಕ ರಾಜ್ಯ ರಚನೆ ಆದಾಗಿನಿಂದ ಬಾಕಿ ಇದ್ದಂತಹ ಒಂದು ಮಹತ್ವಪೂರ್ಣ ಬೇಡಿಕೆ ಈಡೇರಿದಂತಾಗಿದೆ ಎಂದಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ನಿರಂತರವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಡೆಸಿದ ಸಭೆಗಳು ಈಗ ಫಲಪ್ರದವಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ನಾನು ಕೆಲಸ ಮಾಡಿದ ಸಮಯದಲ್ಲಿ ಇದರ ಅವಶ್ಯಕತೆ ಎಷ್ಟಿತ್ತು ಎಂಬುದು ಮನವರಿಕೆ ಆಗಿತ್ತು. ಇದುವರೆಗೂ ನಾವು ಕನ್ನಡ ಭಾಷೆ ಅನುಷ್ಠಾನಗೊಳಿಸಲು ನಿರ್ದಿಷ್ಟವಾದ ಕಾನೂನು ಇಲ್ಲದೆ ಹೋದ ಕಾರಣ ಅದರಲ್ಲಿ ಸಫಲವಾಗುತ್ತಿರಲಿಲ್ಲ. ಯಾವುದೇ ಕೋರ್ಟು, ಕಚೇರಿಗಳಿಗೆ ಹೋದಾಗ ಇಂತಹ ಒಂದು ವಿಧೇಯಕದ ಬೆಂಬಲ ಇಲ್ಲದೆ ಹೋದ ಕಾರಣಕ್ಕಾಗಿ ಹಲವಾರು ಸಂಗತಿಗಳಲ್ಲಿ ವೈಫಲ್ಯ ಕಾಣುತ್ತಿದ್ದವು. ಈಗ ವಿಧೇಯಕದ ಬಲ ಬಂದಿರುವುದರಿಂದ ಕನ್ನಡ ಭಾಷಾ ಅಭಿವೃದ್ಧಿಗೆ ನಿಜವಾದ ಅರ್ಥ ಬಂದಿದೆ. ಇದನ್ನು ಬಳಸಿಕೊಂಡು ಕನ್ನಡದ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡುವುದು ಸಾಧ್ಯವಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ