Latest Videos

ಜಡ್ಜ್‌ಗಳೂ ರಜೆ ನಗದೀಕರಣಕ್ಕೆ ಅರ್ಹರು: ಹೈಕೋರ್ಟ್‌

By Kannadaprabha NewsFirst Published Jul 3, 2024, 6:00 AM IST
Highlights

ರಜೆ ನಗದೀಕರಣಕ್ಕೆ ಸಲ್ಲಿಸಿದ್ದ ಮನವಿ ಪರಿಗಣಿಸದ ಕೇಂದ್ರೀಯ ರೈಲ್ವೇ ಮಂಡಳಿಯ ಕ್ರಮ ಪ್ರಶ್ನಿಸಿ ನ್ಯಾ.ಬಿ. ಪದ್ಮರಾಜ್‌ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರ ಪೀಠ ಈ ಆದೇಶ ಮಾಡಿದೆ.

ಬೆಂಗಳೂರು(ಜು.03):  ನ್ಯಾಯಮೂರ್ತಿಗಳು ಸಹ ರಜೆ‌ ನಗದೀಕರಣಕ್ಕೆ ಅರ್ಹರು ಎಂದು ಆದೇಶಿಸಿರುವ ಹೈಕೋರ್ಟ್‌, ರೈಲ್ವೇ ಕ್ಲೇಮು ನ್ಯಾಯಾಧಿಕರಣ ಅಧ್ಯಕ್ಷ ಹುದ್ದೆಯಿಂದ ನಿವೃತ್ತರಾಗಿರುವ ನ್ಯಾ.ಬಿ.ಪದ್ಮರಾಜ್ ಅವರು ಕರ್ತವ್ಯ ನಿರ್ವಹಿಸಿರುವ ರಜಾ ದಿನಗಳಿಗೆ ನಗದು ಪಾವತಿಸುವಂತೆ ಕೇಂದ್ರೀಯ ರೈಲ್ವೇ ಮಂಡಳಿಗೆ ನಿರ್ದೇಶಿಸಿದೆ.

ರಜೆ ನಗದೀಕರಣಕ್ಕೆ ಸಲ್ಲಿಸಿದ್ದ ಮನವಿ ಪರಿಗಣಿಸದ ಕೇಂದ್ರೀಯ ರೈಲ್ವೇ ಮಂಡಳಿಯ ಕ್ರಮ ಪ್ರಶ್ನಿಸಿ ನ್ಯಾ.ಬಿ. ಪದ್ಮರಾಜ್‌ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರ ಪೀಠ ಈ ಆದೇಶ ಮಾಡಿದೆ.

ಲೈಂಗಿಕ ಸಂಪರ್ಕಕ್ಕೆ ನಿರಾಸಕ್ತಿ ಎಂದು ಗಂಡನ ವಿರುದ್ಧ ಸುಳ್ಳು ಮಾಹಿತಿ: ಪತ್ನಿ ಮೇಲೆ ಕ್ರಮಕ್ಕೆ ಹೈಕೋರ್ಟ್‌ ಅಸ್ತು..!

ನ್ಯಾ.ಪದ್ಮರಾಜ್‌ ಅವರು ರೈಲ್ವೇ ನ್ಯಾಯಾಧಿಕರಣದ ಮುಖ್ಯಸ್ಥರಾಗಿ ಗಳಿಕೆ ರಜೆ ಪಡೆಯುವ ಅವಕಾಶವಿದೆ. ಆ ದಿನಗಳಲ್ಲಿ ಅವರು ಕರ್ತವ್ಯ ನಿರ್ವಹಿಸಿರುವುದರಿಂದ ರಜೆ ನಗದೀಕರಣಕ್ಕೆ ಅವರು ಇಟ್ಟಿರುವ ಬೇಡಿಕೆ ನ್ಯಾಯಬದ್ಧವಾಗಿದೆ.
ಹಾಗಾಗಿ ಅರ್ಜಿದಾರರ ರಜೆ ನಗದೀಕರಣ ಮನವಿ ಪರಿಗಣಿಸಿ ಹಣ ಪಾವತಿಸಬೇಕು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಇದೇ ವೇಳೆ ನ್ಯಾಯಾಧೀಕರಣ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಪಿಂಚಣಿ ನೀಡಲು ಕೇಂದ್ರೀಯ ರೈಲ್ವೇ ಮಂಡಳಿಗೆ ನಿರ್ದೇಶಿಸಬೇಕು ಎಂಬ ಅರ್ಜಿದಾರರ ಮನವಿ ಪುರಸ್ಕರಿಸಲು ಇದೇ ವೇಳೆ ನ್ಯಾಯಪೀಠ ನಿರಾಕರಿಸಿದೆ.

ಹೆಸರು ತಿರುಚಿ ವೈದ್ಯಕೀಯ ವೀಸಾದಿಂದ ಭಾರತದಲ್ಲಿ ನೆಲೆಸುವ ಇರಾಕ್‌ ಪ್ರಜೆಯ ಯತ್ನಕ್ಕೆ ಕರ್ನಾಟಕ ಕೋರ್ಟ್‌ ಕೊಕ್ಕೆ!

ಹೈಕೋರ್ಟ್‌ ನ್ಯಾಯಮೂರ್ತಿಯಾಗಿದ್ದ ಕಾರಣಕ್ಕೆ ಅರ್ಜಿದಾರರು ಮಾಸಿಕ 40 ಸಾವಿರ ರು. ಪಿಂಚಣಿ ಪಡೆಯುತ್ತಿದ್ದಾರೆ. ವಾರ್ಷಿಕ ಪಿಂಚಣಿ ಮಿತಿ 4,80,000 ರು. ಮಿತಿ ಮೀರಿದರೆ, ಆ ಬಳಿಕ ಹೆಚ್ಚುವರಿ ಪಿಂಚಣಿ ಪಡೆಯಲು ನಿಯಮಗಳಲ್ಲಿ ಅವಕಾಶವಿಲ್ಲ. ಆದ್ದರಿಂದ ರೈಲ್ವೇ ನ್ಯಾಯಾಧಿಕರಣದ ಅಧ್ಯಕ್ಷರಾಗಿ ಪಿಂಚಣಿ ನೀಡಬೇಕು ಎಂಬ ಅರ್ಜಿದಾರರ ವಾದ ಒಪ್ಪಲಾಗದು. ಪಿಂಚಣಿಯ ನಿಯಮಗಳ ಪಾಲನೆ ಆಗಬೇಕು ಎಂದು ಆದೇಶದಲ್ಲಿ ಪೀಠ ಹೇಳಿದೆ.

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ. ಪದ್ಮರಾಜ್ ಅವರು 2006ರ ಅಕ್ಟೋಬರ್‌ನಲ್ಲಿ ಸೇವೆಯಿಂದ ನಿವೃತ್ತಿಗೊಳ್ಳುತ್ತಿದ್ದಂತೆಯೇ ಕೇಂದ್ರೀಯ ರೈಲ್ವೇ ಕ್ಲೇಮು ನ್ಯಾಯಾಧೀಕರಣ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. 2009ರ ಅ.5ರಂದು ನಿವೃತ್ತರಾಗಿದ್ದರು. ಈ ಸಂದರ್ಭದಲ್ಲಿ ಗಳಿಕೆ ರಜೆಯ ನಗದೀಕರಣ ಮಾಡಲು ಸಲ್ಲಿಸಿದ್ದ ಮನವಿ ರೈಲ್ವೇ ಮಂಡಳಿ ತಿರಸ್ಕರಿಸಿತ್ತು. ಇದರಿಂದ ಅವರು 2012ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ರಜೆ ನಗದೀಕರಣಕ್ಕೆ ಮತ್ತು ಹೆಚ್ಚುವರಿ ಪಿಂಚಣಿ ನೀಡಲು ಆದೇಶಿಸುವಂತೆ ಕೋರಿದ್ದರು.

click me!