
ಬೆಂಗಳೂರು (ಮಾ.8): ಬೆಂಗಳೂರಿನಲ್ಲಿ ನಡೆದ ಕಿಮ್ಸ್ (KIMS) ಆಸ್ಪತ್ರೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಜೂನಿಯರ್ ಎನ್ಟಿಆರ್, ಕನ್ನಡದಲ್ಲೇ ಮಾತನಾಡುವ ಮೂಲಕ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. 'ಎಲ್ಲರಿಗೂ ನಮಸ್ಕಾರ'ಎನ್ನುತ್ತಲೇ ಮಾತು ಆರಂಭಿಸಿದರು. ಕರ್ನಾಟಕದೊಂದಿಗಿನ ತಮ್ಮ ಅವಿನಾಭಾವ ಸಂಬಂಧವನ್ನು ಮೆಲುಕು ಹಾಕಿದರು.
ತಮ್ಮ ತಾಯಿಯ ಹುಟ್ಟೂರು ಕುಂದಾಪುರ ಎನ್ನುವುದನ್ನು ಹೆಮ್ಮೆಯಿಂದ ಸ್ಮರಿಸಿದ ತಾರಕ್, ಕರ್ನಾಟಕಕ್ಕೆ ಬರುವುದು ನನಗೆ ಯಾವಾಗಲೂ ಬಹಳ ಖುಷಿ ಕೊಡುತ್ತದೆ. ಕರ್ನಾಟಕಕ್ಕೆ ಬರೋದಂದ್ರೆ ನನಗೆ ಅಪ್ಪನ ಮನೆಯಿಂದ ಅಮ್ಮನ ಮನೆಗೆ ಬಂದ ಹಾಗೆ ಫೀಲ್ ಆಗುತ್ತೆ ಎಂದು ಹೇಳುವ ಮೂಲಕ ಎನ್ಟಿಆರ್ ಮತ್ತೊಮ್ಮೆ ಕನ್ನಡಿಗರ ಮನಸು ಗೆದ್ದರು.
ಇವತ್ತು ನಾನು ಬಂದಿರುವುದು ಕೇವಲ ಕಾರ್ಯಕ್ರ ಅಲ್ಲ, ಇದರೊಂದಿಗೆ ನನಗೆ ಭಾವನಾತ್ಮಕ ನಂಟಿದೆ ಎಂದ ಎನ್ಟಿಆರ್, ನಮ್ಮ ತಾತನವರು (ಮೇರು ನಟ ಎನ್.ಟಿ. ರಾಮರಾವ್) 1983ರಲ್ಲಿ ಇದೇ ಕಾಲೇಜಿಗೆ ಶಂಕುಸ್ಥಾಪನೆ ಮಾಡಿದ್ದರು. ಅಷ್ಟು ವರ್ಷಗಳ ನಂತರ, ಅದೇ ಮಾರ್ಚ್ ತಿಂಗಳಿನಲ್ಲಿ ನನ್ನ ಕೈಯಿಂದ ಈ ಆಸ್ಪತ್ರೆ ಉದ್ಘಾಟನೆ ಆಗುತ್ತಿರುವುದು ನನ್ನ ಪೂರ್ವಜನ್ಮದ ಪುಣ್ಯ. ಆ ಮಹಾನುಭಾವನ ಮತ್ತು ಅಭಿಮಾನಿಗಳ ಆಶೀರ್ವಾದದಿಂದ ನಾನಿಲ್ಲಿ ನಿಂತಿದ್ದೇನೆ' ಎಂದು ಭಾವುಕರಾದರು.
ಜೀವ ಉಳಿಸಿದ ಕಿಮ್ಸ್ ಸಿಬ್ಬಂದಿಗೆ ಕೃತಜ್ಞತೆ
2009ರಲ್ಲಿ ಭೀಕರ ಅಪಘಾತದ ದಿನಗಳನ್ನು ಸ್ಮರಿಸಿದ ಎನ್ಟಿಆರ್, 'ಅಂದು ಅಪಘಾತವಾದಾಗ ನನ್ನನ್ನು ಕಾಪಾಡಿದ್ದು ಇದೇ ಭಾಸ್ಕರ್ ರಾವ್ ಮತ್ತು ಕಿಮ್ಸ್ ಆಸ್ಪತ್ರೆಯ ಸಿಬ್ಬಂದಿ ವರ್ಗ. ಅವರಿಗೆ ನಾನು ಜನ್ಮಜನ್ಮಾಂತರಕ್ಕೂ ಋಣಿಯಾಗಿರುತ್ತೇನೆ. ಅವರು ನನಗೆ ಕೇವಲ ವೈದ್ಯರಲ್ಲ, ನನ್ನ ಕುಟುಂಬದ ಸದಸ್ಯರಿದ್ದಂತೆ' ಎಂದು ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ಕಿಮ್ಸ್ ಆಸ್ಪತ್ರೆ ದೇಶದಲ್ಲೇ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಅವರು ಹಾರೈಸಿದರು.
ಜಾಗ್ರತೆಯಿಂದ ಮನೆಗೆ ಹೋಗಿ: ಅಭಿಮಾನಿಗಳಿಗೆ ಕಳಕಳಿಯ ವಿನಂತಿ
ಭಾಷಣದ ಕೊನೆಯಲ್ಲಿ ಅಭಿಮಾನಿಗಳ ಬಗ್ಗೆ ಕಾಳಜಿ ತೋರಿದ ಎನ್ಟಿಆರ್, 'ಜಾಗ್ರತೆಯಿಂದ ಮನೆಗೆ ಹೋಗಿ. ನಮ್ಮ ಮನೆಯಲ್ಲಿ ನಡೆದ ಘಟನೆ (ಅಪಘಾತದ ನೋವು) ನಿಮ್ಮ ಕುಟುಂಬದಲ್ಲಿ ಆಗಬಾರದು ಎಂದು ನಾನು ಆಶಿಸುತ್ತೇನೆ. ನೀವು ನೀಡುವ ಈ ಪ್ರೀತಿಗೆ ನಾನು ಸದಾ ತಲೆ ಬಾಗಿ ನಮಸ್ಕರಿಸುತ್ತೇನೆ' ಎಂದು ಕೈಬೀಸುತ್ತಾ ವೇದಿಕೆಯಿಂದ ನಿರ್ಗಮಿಸಿದರು. ಜ್ಯು. ಎನ್ಟಿಆರ್ ಕಾರ್ಯಕ್ರಮಕ್ಕೆ ಆಗಮಿಸುವ ಸುದ್ದಿ ಕೇಳಿ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು. ಕಾರಿನ ಸನ್ರೂಫ್ ನಲ್ಲಿ ಅಭಿಮಾನಿಗಳತ್ತ ನಮಸ್ಕರಿಸುತ್ತ ತೆರಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ