
ಬೆಂಗಳೂರು(ನ.28): 'ಸ್ವಾಮೀಜಿಗಳು ರಾಜಕಾರಣದಿಂದ ದೂರ ಇರಬೇಕು. ವಿವಾದಾತ್ಮಕ ಹೇಳಿಕೆ ಕೊಟ್ಟು ದೇಶದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ಮಾಡಬಾರದು' ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ಮುಸ್ಲಿಮರಿಗೆ ನೀಡಿರುವ ಮತದಾನದ ಹಕ್ಕು ಹಿಂಪಡೆಯಬೇಕು ಎಂಬ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರ ಶೇಖರ ಸ್ವಾಮೀಜಿ ಹೇಳಿಕೆಗೆ ಬುಧವಾರ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, 'ಸ್ವಾಮೀಜಿಗಳು ಇಂಥ ವಿವಾದಾತ್ಮಕ ಹೇಳಿಕೆ ನೀಡಬಾರದು. ಸಮಾಜದ ಶಾಂತಿ ಕೆಡಿಸುವ ಕೆಲಸ ಮಾಡಬಾರದು. ಅವರು ರಾಜಕಾರಣದಿಂದ ದೂರ ಇರುವುದು ಒಳಿತು. ಮತದಾನ ಎಂಬುದು ಸಂವಿಧಾನದ ಮೂಲಕ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಬಂದಿರುವ ಹಕ್ಕು. ಒಬ್ಬ ವ್ಯಕ್ತಿ ಜನಿಸಿದರೆ ಸಂವಿಧಾನದಿಂದ ಸಿಗುವ ಹಕ್ಕುಗಳಲ್ಲಿ ಇದು ಕೂಡ ಒಂದು' ಎಂದರು.
ಡಿ.ಕೆ.ಶಿವಕುಮಾರ್ ಬೆನ್ನಲ್ಲೇ ಇಂದು ಸಿದ್ದರಾಮಯ್ಯ ಕೂಡ ದೆಹಲಿಗೆ
ಮುಸ್ಲಿಂರಿಗೆ ಮತ ಹಕ್ಕು ಬೇಡವೆಂದ ಚಂದ್ರಶೇಖರ ಶ್ರೀ ಬಗ್ಗೆ ಲಕ್ಷ್ಮೀ ಆಕ್ಷೇಪ
ವಿಜಯಪುರ: ನಾಡಿನ ಮಠಾಧೀಶರು ಸಮಾಜದ ಸ್ವಾಸ್ಥ್ಯ ಕಾಪಾಡುವ ಕೆಲಸ ಮಾಡಬೇಕು. ಅನಗತ್ಯವಾಗಿಮಾತನಾಡಿ ಸಮಾಜದ ಸ್ವಾಸ್ಥ್ಯ ಹಾಳುಮಾಡಬಾರದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಹೇಳಿದರು.
ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಎಂಬ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಹೇಳಿಕೆ ಬಗ್ಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವರು, ಈ ದೇಶದ ಸಂವಿಧಾನದ ಪ್ರಕಾರ ರಾಷ್ಟ್ರಪತಿಗೂ ಒಂದೇ ಕಾನೂನು, ಜನಸಾಮಾನ್ಯರಿಗೂ ಒಂದೇ ಕಾನೂನು. ಸ್ವಾಮೀಜಿಯವರು ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು. ಇಂಥ ಹೇಳಿಕೆಗಳಿಂದ ಸಮಾಜದ ಸ್ವಾಸ್ಥ್ಯ ಹಾಳು ಮಾಡಬಾರದು. ನಾನು ಸ್ವಾಮೀಜಿಗಳ ಬಗ್ಗೆ ಮಾತನಾಡುವಷ್ಟು ದೊಡ್ಡವಳಲ್ಲ. ಅದು ನಮ್ಮ ಸಂಸ್ಕೃತಿಯೂ ಅಲ್ಲ ಎಂದರು.
ಮುಸ್ಲಿಮರ ಬಗ್ಗೆ ವಿವಾದಿತ ಹೇಳಿಕೆ: ಚಂದ್ರಶೇಖರ ಸ್ವಾಮೀಜಿ ವಿಷಾದ
ಬೆಂಗಳೂರು: 'ಮುಸಲ್ಮಾನರಿಗೆ ಮತದಾನದ ಹಕ್ಕು ರದ್ದುಪಡಿಸಬೇಕು' ಎಂದು ತಾವು ಬಾಯಿ ತಪ್ಪಿ ಹೇಳಿಕೆ ನೀಡಿದ್ದೆವು. ಇದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, 'ಭಾರತೀಯ ಕಿಸಾನ್ ಸಂಘ ಮಂಗಳವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಆಯೋಜಿಸಿದ್ದ ಸಮಾವೇಶ ದಲ್ಲಿ ನಾವು ಮಾತನಾಡುವಾಗ ಬಾಯಿ ತಪ್ಪಿ ಮುಸಲ್ಮಾನರಿಗೆ ಮತದಾನದ ಹಕ್ಕು ರದ್ದುಪಡಿಸಬೇಕು ಎಂದು ಹೇಳಿಕೆ ನೀಡಿದ್ದೆವು. ಇದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮೂಲತಃ ಒಕ್ಕಲಿಗರು ಧರ್ಮ ಸಹಿಷ್ಣುಗಳು. ನಾವು ಎಲ್ಲ ಧರ್ಮದವರನ್ನೂ ಸಮಾನವಾಗಿ ಕಾಣುತ್ತೇವೆ. ಈ ವಿಷಯವನ್ನು ಬೆಳೆಸದಂತೆ ಮುಕ್ತಾಯ ಮಾಡಿ' ಎಂದು ಕೋರಿದ್ದಾರೆ.
ಕಳಸಾ-ಬಂಡೂರಿ ನಾಲೆಗೆ ಒಪ್ಪಿಗೆಗಾಗಿ ಡಿ.ಕೆ.ಶಿವಕುಮಾರ್ ಕಸರತ್ತು
ಮುಸ್ಲಿಮರಿಗೆ ಮತದ ಹಕ್ಕು ಬೇಡ: ಚಂದ್ರಶೇಖರ ಶ್ರೀ ವಿವಾದಾತ್ಮಕ ಹೇಳಿಕೆ
ಬೆಂಗಳೂರು: ರೈತರ ಭೂಮಿಯನ್ನು ವಕ್ಫ್ ಕಬಳಿಸುತ್ತಿದೆ ಎಂದು ದೂರಿ ಭಾರತೀಯ ಕಿಸಾನ್ ಸಂಘದಿಂದ ಮಂಗಳವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ 'ರೈತ ಘರ್ಜನಾ ರ್ಯಾಲಿ' ನಡೆಯಿತು.
ವಿವಿಧೆಡೆಯಿಂದ ಪಾಲ್ಗೊಂಡಿದ್ದ ಮಠಾಧೀಶರು ವಕ್ಫ್ ತೊಲಗಿಸುವಂತೆ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಅವರು ಮುಸ್ಲಿಮರ ಬಗ್ಗೆ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಪ್ರತಿಭಟನೆ ವೇಳೆ ಚಂದ್ರಶೇಖರನಾಥರು ಮಾತನಾಡಿ, 'ರಾಜಕಾರಣಿಗಳು ಎಲ್ಲವನ್ನೂ ವೋಟಿಗಾಗಿ ಮಾಡುತ್ತಾರೆ, ಮುಸಲ್ಮಾನರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಿದರೆ ಎಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯ. ಹೀಗಾಗಿ ಮುಸ್ಲಿಮರಿಗೆ ಮತದಾನದ ಶಕ್ತಿ ಇಲ್ಲದಂತೆ ಕಾನೂನು ಮಾಡಬೇಕು. ಪಾಕಿಸ್ತಾನದಲ್ಲಿ ಬೇರೆಯವರಿಗೆ (ಅನ್ಯ ಧರ್ಮೀಯರು) ಮತದಾನ ಮಾಡುವ ಅಧಿಕಾರವಿಲ್ಲ. ಅದೇ ರೀತಿ ಭಾರತದಲ್ಲೂ ಅವರಿಗೆ ಮತದಾನದ ಹ ಅವರಿಗೆ ಮತದಾನದ ಹಕ್ಕು ಇಲ್ಲದೇ ಇರುವ ರೀತಿ ಮಾಡಿದರೆ ಆಗೆ ಅವರ ಪಾಡಿಗೆ ಅವರು ಇರುತ್ತಾರೆ. ಆಗ ಎಲ್ಲರೂ ನೆಮ್ಮದಿಯಾಗಿ ಇರಲು ಸಾಧ್ಯ' ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ