
ಚಿತ್ರದುರ್ಗ (ಮಾ.20): ಹುಡುಗ ಸರ್ಕಾರಿ ನೌಕರಿಯಲ್ಲಿದ್ದಾನೆ. ಆದಾಯಕ್ಕೇನೂ ಕಡಿಮೆಯಿಲ್ಲವೆಂದು ತಿಳಿದು ಚೆನ್ನಾಗಿ ಓದಿಕೊಂಡಿದ್ದ ಸ್ಪುರದ್ರೂಪಿ ಮಗಳನ್ನು ತಂದೆ-ತಾಯಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದಾರೆ. ಆದರೆ, ಅಳಿಯ ಸರ್ಕಾರಿ ನೌಕರನಾಗಿದ್ದರೂ, ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ಜೂಜಾಟವಾಡುತ್ತಾ ಮೈತುಂಬಾ ಸಾಲ ಮಾಡಿಕೊಂಡಿದ್ದನು. ಸಾಲಗಾರರು ಮನೆಯ ಬಳಿ ಬಂದು ಸಾಲಕ್ಕಾಗಿ ಪೀಡಿಸುತ್ತಾ ಗಂಡ-ಹೆಂಡತಿ ಇಬ್ಬರಿಗೂ ಕಿರುಕುಳ ನೀಡಿದ್ದಾರೆ. ಇದರಿಂದ ಬೇಸತ್ತ ಗೃಹಿಣಿ ರಂಜಿತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಹೌದು, ಬೆಟ್ಟಿಂಗ್ ದಂಧೆ, ಸಾಲಬಾಧೆಯಿಂದ ಬೇಸತ್ತು ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ನಡೆದಿದೆ. ಹೊಳಲ್ಕೆರೆಯ ಬಸವ ಲೇಔಟ್ ನ ಮನೆಯಲ್ಲಿ ರಂಜಿತಾ (23) ನೇಣಿಗೆ ಶರಣಾದ ಗೃಹಿಣಿಯಾಗಿದ್ದಾಳೆ. ಈಕೆಯ ಪತಿ ದರ್ಶನ್ ಹೊಸದುರ್ಗದಲ್ಲಿ ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ (ಎಇ) ಆಗಿ ಕೆಲಸ ಮಾಡುತ್ತಿದ್ದರು. ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ದರ್ಶನ್ಗೆ ಹುಡುಗಿ ಮನೆಯವರು ಅದ್ಧೂರಿಯಾಗಿ ಮಗಳನ್ನು ಕೊಟ್ಟು ಮದುವೆ ಮಾಡಿದ್ದಾರೆ. ಆದರೆ, ಅಳಿಯನ ದುಶ್ಚಟದಿಂದ ಕೆಲವೇ ವರ್ಷಗಳಲ್ಲಿ ಮಗಳು ಮಸಣ ಸೇರಿದ್ದಾಳೆ.
ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ದರ್ಶನ್ ತಾನು ಕೈಲಿದ್ದಷ್ಟು ಹಣದಲ್ಲಾದರೂ ಬೆಟ್ಟಿಂಗ್ ಆಡಿಬಂದಿದ್ದರೆ ಜೀವನಕ್ಕೇನೂ ಸಮಸ್ಯೆ ಇರುತ್ತಿರಲಿಲ್ಲ. ಆದರೆ, ಸರ್ಕಾರಿ ನೌಕರನಾಗಿದ್ದರಿಂದ ದರ್ಶನ್ ಖಾಲಿ ಚೆಕ್ ನೀಡಿ ಬೆಟ್ಟಿಂಗ್ ದಂಧೆ ನಡೆಸುವವರಿಂದ ದುಬಾರಿ ಬಡ್ಡಿದರಕ್ಕೆ ಸಾಲವನ್ನು ಪಡೆದು ಹಣವನ್ನು ಸೋತಿದ್ದಾರೆ. ಇದರಿಂದ ಲಕ್ಷಾಂತರ ರೂ. ಸಾಲ ಮೈಮೇಲೆ ಬಂದಿದೆ. ಇನ್ನು ಸಾಲ ಕೊಟ್ಟವರು ಮನೆಯ ಬಳಿ ಬಂದು ದರ್ಶನ್ ಮತ್ತು ಪತ್ನಿ ರಂಜಿತಾಗೆ ಕಿರುಕುಳ ನೀಡಿದ್ದಾರೆ.
ದರ್ಶನ್ ಕೆಲಸಕ್ಕೆ ಹೋದ ವೇಳೆ ಸಾಲಗಾರರು ಬಂದು ಮನೆಯ ಬಳಿ ಕಾಯುತ್ತಾ ಕುಳಿತಿರುತ್ತಿದ್ದರು. ಮನೆಯಲ್ಲಿ ಒಬ್ಬಳೇ ಯೌವನಾವಸ್ಥೆಯ ಗೃಹಿಣಿ ಮನೆಯಲ್ಲಿದ್ದರೂ, ಸಾಲಗಾರರನ್ನು ಹೆಚ್ಚಾಗಿ ಪ್ರಶ್ನೆ ಮಾಡುವಂತ ಪರಿಸ್ಥಿತಿ ದರ್ಶನ್ಗೆ ಇರಲಿಲ್ಲ. ಸಾಲಗಾರರ ಕಿರುಕುಳಕ್ಕೆ ಹಾಗೂ ಗಂಡನ ನಡೆಗೆ ಬೇಸತ್ತಿದ್ದ ರಂಜಿತಾ ಮನನೊಂದು ನೇಣಿಗೆ ಶರಣಾಗಿದ್ದಾಳೆ ಎಂದು ಕೇಳಿಬಂದಿದೆ. ಇನ್ನು ಗೃಹಿಣಿಯ ತಂದೆ ವೆಂಕಟೇಶ್ ಅವರು ಬೆಟ್ಟಿಂಗ್ ದಂಧೆಕೋರರು ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ಹೊಳಲ್ಕೆರೆ ಠಾಣೆಗೆ ದೂರು ನೀಡಿದ್ದಾರೆ.
ಅಡುಗೆ ಮಾಡಲು ಸಾಮಾನು ತರುವಂತೆ ಹೇಳಿದ್ದಕ್ಕೇ ಪತ್ನಿಯ ಮೇಲೆ ಆಸಿಡ್ ಎರಚಿ ಪರಾರಿಯಾದ ಕಿರಾತಕ ಗಂಡ!
ಇನ್ನು ನನ್ನ ಅಳಿಯ ದರ್ಶನ್ ಸಹಾಯಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರೂ ಬೆಟ್ಟಿಂಗ್ ದಂಧೆಕೋರರು ಆತನಿಗೆ ಆಮಿಷವೊಡ್ಡಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗುವಂತೆ ಮಾಡಿದ್ದಾರೆ. ತಾನು ಹಣವಿಲ್ಲವೆಂದು ಹೇಳಿದರೂ ಖಾಲಿ ಚೆಕ್ ಪಡೆದು ಸಾಲವನ್ನು ಕೊಟ್ಟಿದ್ದಾರೆ. ನಂತರ, ಸಾಲದ ಹಣ ವಸೂಲಿ ನೆಪದಲ್ಲಿ ಮನೆಯ ಬಳಿ ಬಂದು ತನ್ನ ಮಗಳು ರಂಜಿತಾ ಹಾಗೂ ದರ್ಶನ್ಎ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ದೂರು ಕೊಟ್ಟಿದ್ದಾರೆ.
ಹೊಳಲ್ಕೆರೆಯಲ್ಲಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಶಿವು, ಗಿರೀಶ, ರಾಘು, ಚಿತ್ರದುರ್ಗದ ಸುದೀಪ್, ತಿಪ್ಪೇಸ್ವಾಮಿ, ವೆಂಕಟೇಶ, ಗುರು, ವಾಗೀಶ್, ರಾಕೇಶ್, ಪಾವಗಡದ ಪೋತರೆಡ್ಡಿ, ಅಜ್ಜಂಪುರದ ಹೊನ್ನಪ್ಪ, ಹಿರಿಯೂರಿನ ಮಹಾಂತೇಶ, ಜಗನ್ನಾಥ್ ಮತ್ತಿತರರ ವಿರುದ್ಧ ದೂರು ದಾಖಲಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ