
ಪರಶಿವಮೂರ್ತಿ ದೋಟಿಹಾಳ
ಕುಷ್ಟಗಿ (ಜೂ.6): ಎಂಟು ವರ್ಷಗಳ ಕನಸಾಗಿದ್ದ ಇಂದಿರಾ ಕ್ಯಾಂಟಿನ್ ಉದ್ಘಾಟನೆ ಜೂ. 6ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಕನಸು ಸಾಕಾರಗೊಂಡು ಕಡಿಮೆ ದರದಲ್ಲಿ ಊಟ, ಉಪಾಹಾರ ಲಭ್ಯವಾಗಲಿದೆ.
ಪಟ್ಟಣದಲ್ಲಿ 2017ರಲ್ಲಿಯೇ ಸ್ಥಾಪನೆಯಾಗಬೇಕಿದ್ದ ಇಂದಿರಾ ಕ್ಯಾಂಟಿನ್ ಅನೇಕ ವಿಘ್ನಗಳನ್ನು ದಾಟಿಕೊಂಡು ಇಂದು ಮಲ್ಲಯ್ಯ ವೃತ್ತದಲ್ಲಿನ ಬಸ್ ಡಿಪೋದ ಮೂಲೆಯೊಂದರಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ನೇತೃತ್ವದಲ್ಲಿ ಉದ್ಘಾಟನೆಗೊಳ್ಳಲಿದೆ.
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿ ಪೂರ್ಣಗೊಂಡಿದ್ದು, ಕ್ಯಾಂಟೀನಗೆ ಸುಣ್ಣ, ಬಣ್ಣ ಬಳಿಯುವ ಮೂಲಕ ವಿಶೇಷವಾಗಿ ಅಲಂಕೃತಗೊಳಿಸಲಾಗಿದೆ. ಅಡುಗೆ ಕೊಠಡಿ, ಊಟದ ಹಾಲ್, ಕುಡಿಯುವ ನೀರಿನ ಘಟಕ, ಕೈ ತೊಳೆಯಲು ವ್ಯವಸ್ಥೆ, ಕೂಪನ್ ಪಡೆಯಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಕಡಿಮೆ ದರದಲ್ಲಿ ಊಟ ಮತ್ತು ಉಪಾಹಾರ:
ಇಂದಿರಾ ಕ್ಯಾಂಟಿನ್ ಉದ್ಘಾನೆಯ ನಂತರದಲ್ಲಿ ಪಟ್ಟಣ ಹಾಗೂ ತಾಲೂಕಿನ ಸಾರ್ವಜನಿಕರು ಕಡಿಮೆ ಹಣದಲ್ಲಿಯೇ ಊಟ ಮತ್ತು ಉಪಾಹಾರ ಮಾಡುವ ಮೂಲಕ ಹೊಟ್ಟೆ ತುಂಬಿಸಿಕೊಳ್ಳಬಹುದಾಗಿದೆ. ಬೆಳಗ್ಗೆ ₹5ಕ್ಕೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ₹ 10ಕ್ಕೆ ಊಟ ವಿತರಿಸುವ ವ್ಯವಸ್ಥೆ ಮಾಡಲಾಗಿದೆ.
ಅನುಕೂಲ:
ಈ ಇಂದಿರಾ ಕ್ಯಾಂಟೀನ್ ಇರುವ ಪ್ರದೇಶದಲ್ಲಿಯೇ ಸರ್ಕಾರಿ ಶಾಲಾ-ಕಾಲೇಜುಗಳಿದ್ದು ಸಾವಿರಾರು ವಿದ್ಯಾರ್ಥಿಗಳು ವ್ಯಾಸಾಂಗಕ್ಕೆ ಬರುತ್ತಾರೆ. ಹತ್ತಾರು ಹಳ್ಳಿಗಳಿಂದ ವಿದ್ಯಾರ್ಥಿಗಳಿಗೆ ಹಾಗೂ 50ಕ್ಕೂ ಹೆಚ್ಚು ಹಳ್ಳಿಗಳ ಜನರು ಇಲ್ಲಿನ ಮಾರುಕಟ್ಟೆ ಅವಲಂಭಿಸಿದ್ದಾರೆ ಹಾಗೂ ಸರ್ಕಾರಿ ಕಾರ್ಯಾಲಯಕ್ಕೆ ಕೆಲಸಕ್ಕೆ ಬರುವ ಜನರಿಗೆ ಈ ಕ್ಯಾಂಟೀನ್ ಬಸ್ ನಿಲ್ದಾಣಕ್ಕೆ ಸಮೀಪವಿರುವ ಕಾರಣದಿಂದ ಕಡಿಮೆ ಹಣದಲ್ಲಿ ಸಾರ್ವಜನಿಕರ ಹೊಟ್ಟೆ ತುಂಬಿಸಲು ಅನುಕೂಲವಾಗಲಿದೆ.ಇಂದಿರಾ ಕ್ಯಾಂಟಿನ್ ಕಾಮಗಾರಿ ಪೂರ್ಣಗೊಂಡಿದ್ದು ಶುಕ್ರವಾರ ಉದ್ಘಾಟನೆಯಾಗಲಿದೆ. ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಊಟ ಮತ್ತು ಉಪಾಹಾರ ಲಭ್ಯವಾಗಲಿದ್ದು ಜನರ ಇದರ ಸದುಪಯೋಗ ಪಡೆದುಕೊಳ್ಳಬೇಕು.
ಸುರೇಶ ಶೆಟ್ಟರ ಮುಖ್ಯಾಧಿಕಾರಿ ಪುರಸಭೆ ಕುಷ್ಟಗಿ
ಇಂದಿರಾ ಕ್ಯಾಂಟಿನ್ ಆರಂಭದಿಂದ ಹೆಚ್ಚು ಹಣ ಕೊಟ್ಟು ಹೊಟೇಲ್ನಲ್ಲಿ ಊಟ ಮತ್ತು ಉಪಾಹಾರ ಮಾಡುವುದು ತಪ್ಪಿದ್ದಂತೆ ಆಗುತ್ತದೆ. ಇದು ಕಾರ್ಮಿಕರು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಮಲ್ಲಿಕಾರ್ಜುನ ಹೊಸವಕ್ಕಲ ಕುಷ್ಟಗಿ ನಿವಾಸಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ