
ಹೊನ್ನಾವರ (ಉತ್ತರಕನ್ನಡ) (ಜ.28): ರಾಜ್ಯದ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಹೊನ್ನಾವರ ತಾಲೂಕಿನ ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದೆ. ದೇವರಿಗೆ ಭಕ್ತರು ಅರ್ಪಿಸಿದ 'ತಟ್ಟೆ ಹಣ'ದ ಹಂಚಿಕೆ ವಿಚಾರವಾಗಿ ಇಬ್ಬರು ಅರ್ಚಕರು ಭಕ್ತರ ಮುಂದೆಯೇ ನೂಕಾಟ-ತಳ್ಳಾಟ ನಡೆಸಿದ್ದಾರೆ. ದೈವ ಸನ್ನಿಧಿಯಲ್ಲಿ ನಡೆದ ಈ ಅಸಭ್ಯ ವರ್ತನೆಯನ್ನು ಕಂಡು ಬಂದಿದ್ದ ಭಕ್ತರು ಒಂದು ಕ್ಷಣ ದಂಗಾಗಿದ್ದಾರೆ.
ದೇವಸ್ಥಾನದ ಅರ್ಚಕರಾದ ನರಸಿಂಹ ಭಟ್ ಮತ್ತು ರಮಾನಂದ ಭಟ್ ಅವರ ನಡುವೆ ಈ ಘರ್ಷಣೆ ನಡೆದಿದೆ. ಹಣಕ್ಕಾಗಿ ಒಬ್ಬರಿಗೊಬ್ಬರು ಜಗಳವಾಡುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಕೆಲವು ದಿನಗಳ ಹಿಂದೆ ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಭಕ್ತ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇಡಗುಂಜಿ ದೇವಸ್ಥಾನದ ಪೂಜಾ ಹಕ್ಕು ಮತ್ತು ಆಡಳಿತಾತ್ಮಕ ಅಧಿಕಾರಕ್ಕಾಗಿ ಈ ಕುಟುಂಬದ ನಡುವೆ ದಶಕಗಳಿಂದ ಒಳಜಗಳ ನಡೆಯುತ್ತಿದೆ. ಈ ವಿವಾದ ಈಗಾಗಲೇ ಕೋರ್ಟ್ ಮೆಟ್ಟಿಲೇರಿದ್ದು, ಕಾನೂನು ಹೋರಾಟ ಮುಂದುವರಿದಿದೆ. ಆದರೆ, ಈಗ ಭಕ್ತಿಯ ದಾರಿಯಲ್ಲಿ ನಡೆಯಬೇಕಾದ ಅರ್ಚಕರು ಪೂಜೆ ಮತ್ತು ಹಣದ ವಿಚಾರವಾಗಿ ಬೀದಿ ರಂಪಾಟ ಮಾಡಿಕೊಂಡಿರುವುದು ದೇವಸ್ಥಾನದ ಘನತೆಗೆ ಧಕ್ಕೆ ತಂದಿದೆ.
ದೂರು-ಪ್ರತಿ ದೂರು
ಘಟನೆಗೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ. ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಅರ್ಚಕರ ವಿರುದ್ಧ ಟ್ರೋಲ್ಗಳ ಸುರಿಮಳೆಯಾಗುತ್ತಿದೆ. ಬ್ರಾಹ್ಮಣ ಸಮುದಾಯ ಮತ್ತು ಅರ್ಚಕ ವೃತ್ತಿಯ ಬಗ್ಗೆ ಟೀಕೆ ಮಾಡುವವರಿಗೆ ಈ ಘಟನೆ ಹೊಸ ಅಸ್ತ್ರ ಸಿಕ್ಕಂತಾಗಿದ್ದು, ಸಾರ್ವಜನಿಕವಾಗಿ ಇಡೀ ಸಮುದಾಯ ಮುಜುಗರ ಅನುಭವಿಸುವಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ