ಟ್ವೀಟ್ ಬಗ್ಗೆ ವಿವಾದವೇಕೆ: ಐಎಎಸ್ ಅಧಿಕಾರಿ ಮೊಹ್ಸಿನ್| ನಾನು ಟೀವಿ ಚಾನೆಲ್ನ ಸುದ್ದಿ ಶೇರ್ ಮಾಡಿದ್ದೆ ಅಷ್ಟೇ| ಶೋಕಾಸ್ ನೋಟಿಸ್ಗೆ ನಿಯಮಾನುಸಾರ ಉತ್ತರಿಸುವೆ| ಯಐಎಎಸ್ ಅಧಿಕಾರಿ ಮೊಹಮ್ಮದ್ ಮೊಹ್ಸಿನ್ ಹೇಳಿಕೆ
ಬೆಂಗಳೂರು(ಮೇ. 03): ದೇಶದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಲು ಕಾರಣ ಎಂದು ಆಪಾದಿಸಲಾಗಿರುವ ತಬ್ಲೀಘಿ ಜಮಾತ್ ಸಂಘಟನೆಯನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹ್ಸಿನ್, ‘ನನಗೆ ಸರ್ಕಾರ ಈ ಕುರಿತು ನೀಡಿರುವ ಶೋಕಾಸ್ ನೋಟಿಸ್ಗೆ ನಿಯಮಾನುಸಾರ ಉತ್ತರಿಸುವೆ’ ಎಂದಿದ್ದಾರೆ. ಪಿಟಿಐ ಸುದ್ದಿಸಂಸ್ಥೆ ಜತೆ ಶನಿವಾರ ಮಾತನಾಡಿದ ಅವರು, ‘ಹೌದು. ನನಗೆ ನೋಟಿಸ್ ಬಂದಿದೆ. ನಿಯಮದ ಪ್ರಕಾರ ಉತ್ತರಿಸುವೆ’ ಎಂದರು.
ತಬ್ಲೀಘಿಗಳ ಪರ ಟ್ವೀಟ್ ಮಾಡಿ ಧರ್ಮ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟ
ಕರ್ನಾಟಕ ಐಎಎಸ್ ಅಧಿಕಾರಿಗೆ ಲೀಗಲ್ ನೋಟಿಸ್... pic.twitter.com/BbIqTki3Wz
‘ನಾನು ಖಾಸಗಿ ಸುದ್ದಿವಾಹಿನಿಯ ಸುದ್ದಿಯ ತುಣುಕೊಂದನ್ನು ಷೇರ್ ಮಾಡಿದ್ದೆ ಅಷ್ಟೆ. ಆದರೆ ಈ ಬಗ್ಗೆ ಅಷ್ಟೇಕೆ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ತಿಳಿಯುತ್ತಿಲ್ಲ’ ಎಂದರು. ‘ನಿಮ್ಮ ವಿರುದ್ಧ ಸಂಚು ನಡೆದಿದೆಯೇ’ ಎಂದು ಕೇಳಿದಾಗ, ‘ಎಲ್ಲರನ್ನೂ ನಾನು ತೃಪ್ತಿಪಡಿಸಲು ಆಗದು’ ಎಂದು ಉತ್ತರಿಸಿದ್ದಾರೆ.
ತಬ್ಲಿಘಿಗಳನ್ನು ಹೀರೋಗಳು ಎಂದ ಕರ್ನಾಟಕ ಕೇಡರ್ IAS ಅಧಿಕಾರಿ!
‘300ಕ್ಕೂ ತಬ್ಲೀಘಿ ಜಮಾತ್ ಹೀರೋಗಳು ದೇಶ ಸೇವೆಗಾಗಿ ಪ್ಲಾಸ್ಮಾ ದಾನ ಮಾಡುತ್ತಿದ್ದಾರೆ. ಆದರೆ ‘ಗೋದಿ ಮೀಡಿಯಾ’ ಏನು ಮಾಡುತ್ತಿದೆ? ಈ ಹೀರೋಗಳು ಮಾಡಿದ ಸಮಾಜ ಸೇವೆಯನ್ನು ಇವರು ತೋರಿಸಲ್ಲ’ ಎಂದು ಏ.27ರಂದು ಮೊಹ್ಸಿನ್ ಟ್ವೀಟ್ ಮಾಡಿದ್ದರು. ಕಳೆದ ವರ್ಷ ಏಪ್ರಿಲ್ನಲ್ಲಿ ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರನ್ನು ತಪಾಸಿಸಿ ವಿವಾದಕ್ಕೀಡಾಗಿದ್ದರು. ಆಗ ಅವರನ್ನು ಚುನಾವಣಾ ಆಯೋಗ ಅಮಾನತು ಮಾಡಿತ್ತು. ಮೊಹ್ಸಿನ್ ಅವರು ಬಿಹಾರ ಮೂಲದ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ.