
ಯಾದಗಿರಿ (ಜೂ.28): ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್ -ತ್ಯಾಜ್ಯ ಕಂಪನಿಗಳಿಂದ ಹೊರಹೊಮ್ಮುತ್ತರುವ ವಿಷಗಾಳಿ ದುರ್ನಾತದಿಂದಾಗಿ ಸುತ್ತಮುತ್ತಲಿನ ಜನರ ಆರೋಗ್ಯದ ಮೇಲಾಗುತ್ತಿರುವ ಪರಿಣಾಮಗಳ ಕುರಿತು ಗ್ರಾಮಸ್ಥರ ದೂರಿನ ಬಗ್ಗೆ ಮುಂಬರುವ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ಟಿ.ನಾರಾಯಣಸ್ವಾಮಿ ಹೇಳಿದರು.
ಕೆಮಿಕಲ್ ಕಂಪನಿಗಳ ದುಷ್ಪರಿಣಾಮಗಳ ಕುರಿತ ವರದಿಗಳು ಹಾಗೂ ಗ್ರಾಮಸ್ಥರ ದೂರಿನ ಮೇರೆಗೆ ಗುರುವಾರ ಈ ಪ್ರದೇಶಕ್ಕೆ ಭೇಟಿ ನೀಡಿದ್ದ ಅವರು, ಕೆಮಿಕಲ್ ತ್ಯಾಜ್ಯ ಘಟಕಗಳ ಪರಿಶೀಲನೆ ನಡೆಸಿ, ಜಿಲ್ಲಾ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರು. ಈ ವೇಳೆ, ಅವರನ್ನು ಭೇಟಿಯಾಗಿದ್ದ ಅಲ್ಲಿನ ಅನೇಕ ಗ್ರಾಮಸ್ಥರು ತಮಗಾಗುತ್ತಿರುವ ತೊಂದರೆಗಳ ಬಗ್ಗೆ ಹೇಳಿದರು.
ಸಂಜೆ ಯಾದಗಿರಿಯಲ್ಲಿ ತಮ್ಮನ್ನು ಭೇಟಿಯಾದ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಛಲವಾದಿ, ಅಲ್ಲಿನ ಸ್ಥಿತಿಗತಿ ಅಧ್ಯಯನಕ್ಕೆ ಪರಿಸರ ಮಂಡಳಿ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದರು. ಈ ವೇಳೆ ಕನ್ನಡಪ್ರಭದಲ್ಲಿ ಪ್ರಕಟಗೊಂಡ ಸರಣಿ ವರದಿಗಳು ಬಗ್ಗೆ ಗಮನ ಹರಿಸಿದ ಅವರು, ಸರಣಿ ವರದಿಗಳ ಬಗ್ಗೆ ತಮ್ಮ ಗಮನಕ್ಕೆ ತರಲಾಗಿತ್ತು, ಅವನ್ನು ಗಂಭೀರವಾಗಿ ಪರಿಗಣಿಸಿದ್ದೆ. ಕಳೆದ ಕೆಲವು ದಿನಗಳ ಹಿಂದೆ ಬರಬೇಕೆಂದಿದ್ದರೂ ಕಾರಣಾಂತರಗಳಿಂದ ಆಗಿರಲಿಲ್ಲ. ಮುಂಬರುವ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸುವುದಾಗಿ ಹೇಳಿದರು.
ಟೆಕ್ಸ್ಟೈಲ್ ಪಾರ್ಕ್ ಎಂದು ಡೇಂಜರ್ ಝೋನ್ ಯಾಕೆ ಮಾಡಿದ್ರು?
ಕೆಮಿಕಲ್ ಕಂಪನಿಗಳಿಂದ ಜನರಿಗೆ ಆತಂಕ ಮೂಡಿಸಿದೆ. ಈ ಬಗ್ಗೆ ಕೈಗಾರಿಕಾ ಇಲಾಖೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಿದ್ದೆ. ಅದಕ್ಕೂ ಮುನ್ನ ಡಿಸಿಯವರ ಜತೆ ಮಾತನಾಡಿದ್ದೆ. ಷರತ್ತುಗಳ ಮೀರಿದ್ದರಿಂದ ಒಂದನ್ನು ಸೀಝ್ ಮಾಡಿರುವುದಾಗಿ ಹೇಳಿದ್ದಾರೆ. ಈಗಾಗಲೇ 27 ಫಾರ್ಮಾ ಕಂಪನಿಗಳು ಕೆಲಸ ಮಾಡುತ್ತಿವೆ, ಈಗ ಮತ್ತೆ 34 ಕಂಪನಿಗಳು ನೋಂದಣಿ ಮಾಡಿಸಿವೆಯಂತೆ. 27 ಕಂಪನಿಗಳು ಇದ್ದಾಗಲೇ ಹೀಗಿದೆ, ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ 34 ಕಂಪನಿಗಳು ಬಂದರೆ ಇಡೀ ಪ್ರದೇಶವೇ ಹದಗೆಡುತ್ತದೆ. ಕೈಗಾರಿಕೆಗಳಿಗಾಗಿ ಜನರ ಜಮೀನುಗಳನ್ನು ನೀಡಿದ್ದಾರೆ. ಡೆವೆಲಪ್ಮೆಂಟ್ ಆಗಬೇಕು ನಿಜ. ಆದರೆ, ಜಮೀನು ಕೊಟ್ಟವರಿಗೆ ವಿಷ ಹೊರಹಾಕುವ ಫ್ಯಾಕ್ಟರಿಗಳ ಕೊಟ್ಟರೆ ಹೇಗೆ? ಇದನ್ನು ಮೊದಲೇ ನೋಟಿಫೈಯ್ಡ್ ಮಾಡಿದ್ದರೆ? ಟೆಕ್ಸಟೈಲ್ ಪಾರ್ಕ್ ಬದಲಾಯಿಸಿದ್ದು ಯಾಕೆ ? ನಾನು ಈಗ ಭೇಟಿ ಕೊಟ್ಟಿದ್ದೇನೆ, ಜನರಿಗೆ ತೊಂದರೆ ಆಗದಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಮತ್ತೇ ದಿಢೀರ್ ಭೇಟಿ ನೀಡುವೆ. ಆಗಲೂ ಜನರು ದೂರಿದರೆ, ಉಗ್ರ ಹೋರಾಟ ಮಾಡುವೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.
ವಿಷಕಾರಿ ಕಾರ್ಖಾನೆಗಳಿದ್ದರೆ ನಿಲ್ಲಿಸಿ ಎನ್ನುವೆ. ಯಾವ ರಾಜ್ಯಗಳಲ್ಲಿ ವಿಷಕಾರಿ ಕಂಪನಿಗಳನ್ನು ವಿರೋಧಿಸಲಾಗಿರುತ್ತದೆಯೋ ಅವುಗಳನ್ನು ಇಲ್ಲಿ ತಂದು ಹಾಕಿ, ಇಲ್ಲಿನ ವಾತಾವರಣ ಕಲುಷಿತಗೊಳಿಸುವುದು ಯಾಕೆ? ಜನರ ಸಮಸ್ಯೆ, ನಮ್ಮ ಸಮಸ್ಯೆ ಇದ್ದಂತೆ. ವಿಪಕ್ಷದಲ್ಲಿ ನಾವು ಅವರ ಪರವಾಗಿ ನಿಲ್ಲತ್ತೇವೆ. ಇವುಗಳ ಹಿಂದೆ ರಾಜಕೀಯ ಇದ್ದರೆ, ಜನರಿಗೆ ತಿಳಿಸಿ ಹೋರಾಟ ರೂಪಿಸುತ್ತೇನೆ.
ಛಲವಾದಿ ಟಿ.ನಾರಾಯಣಸ್ವಾಮಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ