ದುಬೈನಿಂದ ನಾನು ಚಿನ್ನ ಕದ್ದು ತಂದಿಲ್ಲ: ಉಲ್ಟಾ ಹೊಡೆದ ನಟಿ ರನ್ಯಾ ರಾವ್‌

Published : Mar 15, 2025, 08:57 AM ISTUpdated : Mar 15, 2025, 08:58 AM IST
ದುಬೈನಿಂದ ನಾನು ಚಿನ್ನ ಕದ್ದು ತಂದಿಲ್ಲ: ಉಲ್ಟಾ ಹೊಡೆದ ನಟಿ ರನ್ಯಾ ರಾವ್‌

ಸಾರಾಂಶ

‘ನಾನು ಚಿನ್ನ ಕಳ್ಳ ಸಾಗಣೆ ಕೃತ್ಯದಲ್ಲಿ ಪಾಲ್ಗೊಂಡಿಲ್ಲ. ಯಾರನ್ನೋ ರಕ್ಷಿಸಲು ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಸಿಲುಕಿಸಲಾಗಿದೆ’ ಎಂದು ಆರೋಪಿಸಿ ಕಾರಾಗೃಹದ ಅಧಿಕಾರಿಗಳಿಗೆ ನಟಿ ರನ್ಯಾ ರಾವ್‌ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಬೆಂಗಳೂರು (ಮಾ.15): ‘ನಾನು ಚಿನ್ನ ಕಳ್ಳ ಸಾಗಣೆ ಕೃತ್ಯದಲ್ಲಿ ಪಾಲ್ಗೊಂಡಿಲ್ಲ. ಯಾರನ್ನೋ ರಕ್ಷಿಸಲು ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಸಿಲುಕಿಸಲಾಗಿದೆ’ ಎಂದು ಆರೋಪಿಸಿ ಕಾರಾಗೃಹದ ಅಧಿಕಾರಿಗಳಿಗೆ ನಟಿ ರನ್ಯಾ ರಾವ್‌ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಡಿಆರ್‌ಐ ಅಧಿಕಾರಿಗಳಿಂದ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರನ್ಯಾ ರಾವ್ ಇದ್ದಾರೆ. ಮೊದಲು ಡಿಆರ್‌ಐ ವಿಚಾರಣೆ ವೇಳೆ ಅಪರಿಚಿತರ ಸೂಚನೆ ಮೇರೆಗೆ ದುಬೈನಿಂದ ಚಿನ್ನ ತಂದಿದ್ದಾಗಿ ಹೇಳಿದ್ದ ಅವರು, ಈಗ ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಉಲ್ಟಾ ಹೊಡೆದಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಲದೆ, ರನ್ಯಾರಾವ್‌ ಅವರ ಪತ್ರವನ್ನು ಡಿಆರ್‌ಐಗೆ ಕಾರಾಗೃಹ ಇಲಾಖೆ ಅಧಿಕಾರಿಗಳು ಕಳುಹಿಸಿದ್ದಾರೆ. ಆದರೆ ಈ ಪತ್ರದ ಕುರಿತು ಕಾರಾಗೃಹ ಇಲಾಖೆ ಅಧಿಕಾರಿಗಳು ಖಚಿತಪಡಿಸಿಲ್ಲ. ನಾನು ದುಬೈಗೆ ರಿಯಲ್ ಎಸ್ಟೇಟ್ ಸಂಬಂಧ ಹೋಗಿದ್ದೆ. ಅಲ್ಲಿಂದ ಮಾ.3 ರಂದು ಮರಳುವಾಗ ನಾನು ಚಿನ್ನ ತಂದಿರಲಿಲ್ಲ. ಆದರೆ ಯಾರನ್ನೋ ರಕ್ಷಿಸುವ ಸಲುವಾಗಿ ನನ್ನನ್ನು ಚಿನ್ನ ಕಳ್ಳ ಸಾಗಣೆ ಕೃತ್ಯದಲ್ಲಿ ಸಂಚು ರೂಪಿಸಿ ಕೆಲವರು ಸಿಲುಕಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಕಾರಾಗೃಹ ಅಧಿಕಾರಿಗಳಿಗೆ ರನ್ಯಾ ಕೋರಿದ್ದಾಳೆ ಎನ್ನಲಾಗಿದೆ.

ಪೊಲೀಸ್‌ ಕಾರಲ್ಲೇ ರನ್ಯಾ ಸ್ಮಗ್ಲಿಂಗ್‌?: ತಂದೆಯ ಕಾರಿನಲ್ಲೇ ಹಲವು ಬಾರಿ ಪಿಕಪ್‌-ಡ್ರಾಪ್‌ ಪಡೆದಿದ್ದ ಗೋಲ್ಡ್‌ ಲೇಡಿ

ಜಾಮೀನು ಅರ್ಜಿ ತಿರಸ್ಕಾರ: ವಿದೇಶದಿಂದ ಚಿನ್ನ ಅಕ್ರಮ‌ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ‌ ಒಳಗಾಗಿರುವ ನಟಿ ರನ್ಯಾ ರಾವ್‌ಗೆ ಜಾಮೀನು ನಿರಾಕರಿಸಿ ನಗರದ ಆರ್ಥಿಕ ಅಪರಾಧಗಳ ತಡೆ ವಿಶೇಷ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ. ಪ್ರಕರಣದ ಸಂಬಂಧ ಜಾಮೀನು ಕೋರಿ ರನ್ಯಾರಾವ್‌ ಸಲ್ಲಿಸಿದ್ದ ಅರ್ಜಿಯನ್ನು ಸಾರಾಸಗಟಾಗಿ ತಿರಸ್ಕರಿಸಿ ನ್ಯಾಯಾಧೀಶ ವಿಶ್ವನಾಥ ಸಿ.ಗೌಡರ್‌ ಆದೇಶಿಸಿದ್ದಾರೆ. ಆರೋಪಿ ರನ್ಯಾ 2024ರಲ್ಲಿ 27 ಬಾರಿ ದುಬೈಗೆ ಹೋಗಿ ಬಂದಿದ್ದಾರೆ. ಆಕೆ ಬಳಿ ದುಬೈ ನಿವಾಸದ ಗುರುತಿನ ಚೀಟಿಯೂ ಇದೆ. ಈ ಕುರಿತು ದಾಖಲೆಗಳು ತನಿಖಾಧಿಕಾರಿಗಳ ಬಳಿ ಲಭ್ಯವಿದೆ. ಅರ್ಜಿದಾರೆ ಭಾಗಿಯಾಗಿದ್ದಾರೆನ್ನಲಾದ ಅಕ್ರಮ ಚಿನ್ನ ಸಾಗಣೆಯಿಂದ 4.83 ಕೋಟಿ ರು. ಸುಂಕ ವಂಚನೆಯಾಗಿದೆ ಎಂಬ ಆರೋಪವಿದೆ. 

ಆಕೆಗೆ ಅಂತಾರಾಷ್ಟ್ರೀಯ ಸಂಪರ್ಕಗಳಿರುವುದು ಕಂಡು ಬಂದಿವೆ. ಪ್ರಕರಣದಲ್ಲಿನ ಆರೋಪಗಳು ಗಂಭೀರವಾಗಿದ್ದು, ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಈ ಸಮಯದಲ್ಲಿ ಅರ್ಜಿದಾರೆ ಜಾಮೀನು ಪಡೆದು ಹೊರಬಂದರೆ, ಸಾಕ್ಷಿಗಳನ್ನು ನಾಪಡಿಸುವ ಮತ್ತು ಪ್ರಕರಣವನ್ನು ದಿಕ್ಕುತಪ್ಪಿಸುವ ಸಾಧ್ಯತೆಯಿದೆ. ಆದ್ದರಿಂದ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ. ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ರನ್ಯಾ ಪರ ವಕೀಲರು, ಅಪರಾಧ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದ ವೇಳೆ ಯಾವ ಕಾರಣಕ್ಕೆ ಬಂಧನ ಮಾಡಲಾಗಿದೆ ಎಂಬ ಬಗ್ಗೆ ಅರೆಸ್ಟ್‌ ಮೆಮೊದಲ್ಲಿ ತನಿಖಾಧಿಕಾರಿಗಳು ತಿಳಿಸಿಲ್ಲ. 

ವಿದೇಶದಿಂದ ಚಿನ್ನ ಅಕ್ರಮ‌ ಸಾಗಣೆ ಪ್ರಕರಣ: ನಟಿ ರನ್ಯಾ ರಾವ್‌ ಜಾಮೀನು ಅರ್ಜಿ ತಿರಸ್ಕಾರ

ಬಂಧಿಸಿದ ಕೂಡಲೇ ಕಸ್ಟಮ್ಸ್ ಇಲಾಖೆಯ ಗೆಜೆಟೆಡ್‌ ಅಧಿಕಾರಿ ಅಥವಾ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಿಲ್ಲ. ರನ್ಯಾ ಬಂಧನದ ವೇಳೆ ಕಸ್ಟಮ್ಸ್‌ ಕಾಯ್ದೆಯ ನಿಯಮಗಳನ್ನೂ ಅನುಸರಿಸಿಲ್ಲ. ಮೂವರು ಆರೋಪಿಗಳ ಪೈಕಿ ರನ್ಯಾರನ್ನು ಮಾತ್ರ ಬಂಧಿಸಲಾಗಿದೆ. ರನ್ಯಾ ದೇಹ, ಶೂ ಮತ್ತು ಪ್ಯಾಕೆಟ್‌ನಲ್ಲಿ ಚಿನ್ನ ಇರಿಸಿಕೊಂಡಿದ್ದರು ಎಂದು ತನಿಖಾಧಿಕಾರಿಗಳು ಹೇಳುತ್ತಾರೆ. ಆದರೆ, ಮೆಟಲ್‌ ಡಿಟೆಕ್ಟರ್‌ನಲ್ಲಿ ಚಿನ್ನ ಇರುವುದು ಪತ್ತೆಯಾಗಿಲ್ಲ. ಬಂಧನ ಪ್ರಕ್ರಿಯೆಯಲ್ಲಿ ಡಿಆರ್‌ಐ ಅಧಿಕಾರಿಗಳು ಸಾಕಷ್ಟು ಕಾನೂನು ಲೋಪ ಎಸಗಿದ್ದಾರೆ. ಮೇಲಾಗಿ ಅರ್ಜಿದಾರೆ ಮಹಿಳೆಯಾಗಿದ್ದು, ಜಾಮೀನು ನೀಡಬೇಕು ಎಂದು ಕೋರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾನುವಾರದ ಮಳೆಗೆ ನಲುಗಿದ ಕರುನಾಡು: ಸಿಡಿಲಿಗೆ ಇಬ್ಬರು ರೈತರು, ಮೂರು ಹಸು ಬಲಿ; ಜಿಲ್ಲಾವಾರು ಹಾನಿ ವಿವರ ನೋಡಿ!
ರಾಜ್ಯದ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಭಾರೀ ಉತ್ತೇಜನ, 1600ಕೋಟಿ ಗೂ ಮೀರಿ ವಿನಿಯೋಗ, ಈ ಜಿಲ್ಲೆಗಳಿಗೆ ಜಾಕ್‌ಪಾಟ್!