
ಬೆಂಗಳೂರು (ಜ.29): ಕ್ರಿಕೆಟ್ ಅಂದರೆ ನನಗೆ ಬಹಳ ಇಷ್ಟ, ನನ್ನ ಕಾಲೇಜಿನ ದಿನಗಳಲ್ಲಿ, ವಕೀಲನಾಗಿದ್ದಾಗ ಟೆಸ್ಟ್ ಕ್ರಿಕೆಟ್ ನೋಡಲು ಬಾಂಬೆ (ಮುಂಬೈ), ಮದ್ರಾಸ್ (ಚೆನ್ನೈ)ಗೆ ಹೋಗುತ್ತಿದೆ. ಹೀಗೆ ಹೇಳುವ ಮೂಲಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಿಕೆಟ್ ಮೇಲಿನ ತಮ್ಮ ಪ್ರೀತಿ ವ್ಯಕ್ತಪಡಿಸಿದರು. ವಿಶ್ವವಾಣಿ ದಿನ ಪತ್ರಿಕೆ ಇಲ್ಲಿನ ಪಿಇಎಸ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಅಂತರ್-ಮುದ್ರಣ ಮಾಧ್ಯಮ ಕ್ರಿಕೆಟ್ ಟೂರ್ನಿಯನ್ನು ಶನಿವಾರ ಉದ್ಘಾಟಿಸಿದ ಬಳಿಕ ನೆರೆದಿದ್ದ ಪತ್ರಕರ್ತರು, ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಕ್ರಿಕೆಟ್ ಜೊತೆಗಿನ ತಮ್ಮ ನಂಟಿನ ಬಗ್ಗೆ ಮುಕ್ತವಾಗಿ ಹೇಳಿಕೊಂಡರು.
‘ನಾನು ಕ್ರಿಕೆಟ್ ಆಟಗಾರನಲ್ಲ, ನಾನೊಬ್ಬ ಕ್ರಿಕೆಟ್ ಫಾಲೋವರ್. ಕ್ರಿಕೆಟ್ ಪಂದ್ಯಗಳ ವಿವರಗಳ ಮೇಲೆ ಕಣ್ಣಿಟ್ಟಿರುತ್ತೇನೆ. ರಾಜಕೀಯಕ್ಕೆ ಬಂದ ಮೇಲೆ ಕ್ರೀಡಾಂಗಣಕ್ಕೆ ಹೆಚ್ಚಾಗಿ ಹೋಗಲು ಸಾಧ್ಯವಾಗದೆ ಇದ್ದರೂ, ಬೆಂಗಳೂರಲ್ಲಿ ಪಂದ್ಯಗಳು ನಡೆದಾಗ ಸಮಯ ಸಿಕ್ಕರೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಿ ಕೆಲ ಹೊತ್ತು ಕೂತು ಪಂದ್ಯ ವೀಕ್ಷಿಸುತ್ತೇನೆ’ ಎಂದರು.
‘ಕ್ರಿಕೆಟ್ ಇಂದು ಶ್ರೀಮಂತ ಕ್ರೀಡೆಯಾಗಿ ಬೆಳೆದಿದೆ. ಮೊದಲೆಲ್ಲಾ ಕ್ರಿಕೆಟ್ ಆಡುವವರಿಗೆ ಹೆಚ್ಚು ದುಡ್ಡು ಸಿಗುತ್ತಿರಲಿಲ್ಲ. ಈಗ ರಣಜಿ ಪಂದ್ಯವಾಡುವವರಿಗೂ ಉತ್ತಮ ಸಂಭಾವನೆ ಸಿಗುತ್ತಿದೆ. ಟಿ20, ಟಿ10 ಕ್ರಿಕೆಟ್ ಮಾದರಿಗಳು ಮತ್ತಷ್ಟು ಹೊಸ ಅಭಿಮಾನಿಗಳನ್ನು ತನ್ನತ್ತ ಸೆಳೆಯುತ್ತಿವೆ’ ಎಂದರು.
ರಾಜಕಾರಣದ ಮೇಲೆ ಧರ್ಮದ ಪ್ರಭಾವ ಹೆಚ್ಚುತ್ತಿದೆ, ಇದು ಪ್ರಜಾಪ್ರಭುತ್ವಕ್ಕೆ ಮಾರಕ: ವೀರಪ್ಪ ಮೊಯ್ಲಿ
ಸೆಮೀಸ್ಗೆ ಕನ್ನಡಪ್ರಭ: ಟೂರ್ನಿಯಲ್ಲಿ ರಾಜ್ಯದ 6 ದಿನಪತ್ರಿಕೆಗಳ ತಂಡಗಳು ಪಾಲ್ಗೊಂಡಿದ್ದು, ಮೊದಲ ದಿನವಾದ ಶನಿವಾರ ಆರಂಭಿಕ ಸುತ್ತಿನ ಪಂದ್ಯಗಳು ನಡೆದವು. ಕನ್ನಡಪ್ರಭ ತನ್ನ ಮೊದಲ ಪಂದ್ಯದಲ್ಲಿ ಪ್ರಜಾವಾಣಿ ವಿರುದ್ಧ 6 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು. ಭಾನುವಾರ ಸೆಮಿಫೈನಲ್ನಲ್ಲಿ ಕನ್ನಡಪ್ರಭ-ವಿಜಯವಾಣಿ ಎದುರಾಗಲಿವೆ. ಮತ್ತೊಂದು ಸೆಮೀಸ್ನಲ್ಲಿ ವಿಜಯ ಕರ್ನಾಟಕ-ಪ್ರಜಾವಾಣಿ ಸೆಣಸಲಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ