Night Curfew: ಸರ್ಕಾರದ ನಿಯಮದಿಂದ ಹೋಟೆಲ್‌, ಬಾರ್‌ಗೆ ಭಾರೀ ನಷ್ಟ?

By Kannadaprabha NewsFirst Published Dec 29, 2021, 4:15 AM IST
Highlights

*  3 ದಿನ ಶೇ.50 ಗ್ರಾಹಕ ಮಿತಿ, 10 ದಿನ ನೈಟ್‌ ಕರ್ಫ್ಯೂನಿಂದ ವ್ಯಾಪಾರಕ್ಕೆ ಹೊಡೆತ
*  ಸಾವಿರಾರು ಕೋಟಿ ನಷ್ಟ ಭಯದಲ್ಲಿ ರೆಸ್ಟೋರೆಂಟ್‌ ಮಾಲೀಕರು
*  ಮನವಿ ಬಳಿಕ ಹೋಟೆಲ್‌ಗಳಲ್ಲಿ ರೂಂ ಬುಕ್‌ ಮಾಡಲು ಅವಕಾಶ
 

ಬೆಂಗಳೂರು(ಡಿ.29):  ರಾಜ್ಯದಲ್ಲೂ(Karnataka) ಹೆಚ್ಚುತ್ತಿರುವ ಒಮಿಕ್ರೋನ್‌(Omicron) ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಹೊಸ ವರ್ಷಾಚರಣೆ ವೇಳೆ ಹೋಟೆಲ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳಿಗೆ ಮೂರು ದಿನ ವಿಧಿಸಿರುವ ಶೇ.50ರಷ್ಟು ಗ್ರಾಹಕರ ಪ್ರವೇಶ ಮಿತಿ ಹಾಗೂ 10 ದಿನಗಳ ನೈಟ್‌ ಕರ್ಫ್ಯೂಯಿಂದ ಅವುಗಳ ವ್ಯಾಪಾರ ವಹಿವಾಟಿನಲ್ಲಿ ಶೇಕಡ 30ರಷ್ಟು ಖೋತಾ ಆಗುವ ಆತಂಕ ಎದುರಾಗಿದೆ.

ಸರ್ಕಾರದ ಈ ನಿರ್ಧಾರದಿಂದ ಅತಿ ಹೆಚ್ಚು ಹಾಗೂ ನೇರ ಪರಿಣಾಮ ಬೀರುವುದೇ ಹೋಟೆಲ್‌ ಉದ್ಯಮ(Hotel Business), ಬಾರ್‌ ಮತ್ತು ರೆಸ್ಟೋರೆಂಟ್‌ಗಳ(Bar and Restaurant) ಮೇಲೆ. ಇಡೀ ವರ್ಷದಲ್ಲಿ ಅತಿ ಹೆಚ್ಚು ವ್ಯಾಪಾರ ವಹಿವಾಟು ನಡೆಯುವುದೇ ಹೊಸ ವರ್ಷಾಚರಣೆ ದಿನ ಹಾಗೂ ಅದರ ಮುನ್ನಾ ಹಾಗೂ ನಂತರದ ಒಂದೆರಡು ದಿನಗಳಲ್ಲಿ ಸರ್ಕಾರದ ಈ ಅವಧಿಯಲ್ಲೇ ಗ್ರಾಹಕರ(Curstomers) ಪ್ರವೇಶ ಸಾಮರ್ಥ್ಯದ ಶೇ.50ರಷ್ಟು ಮಿತಿ ಹೇರಿರುವುದರಿಂದ ಶೇ.30ರಷ್ಟು ವ್ಯಾಪಾರ ವಹಿವಾಟು ಖೋತಾ ಆಗಬಹುದೆಂದು ಅಂದಾಜಿಸಿದ್ದೇವೆ ಎಂದು ಹೋಟೆಲ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳ ಮಾಲೀಕರ ಸಂಘದ ಪ್ರತಿನಿಧಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

News Hour: ರೂಪಾಂತರಿ ತಡೆಗೆ ನೈಟ್ ಕರ್ಫ್ಯೂ, ಏನೆಲ್ಲ ಹೊಸ ನಿಯಮ?

ಕೋವಿಡ್‌(Covid-19) ಪೂರ್ವ ವರ್ಷಗಳಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮದ್ಯ(Alcohol) ಮಾರಾಟದಿಂದ 1200 ಕೋಟಿ, ಹೋಟೆಲ್‌ಗಳ ರೂಂ ಬುಕ್ಕಿಂಗ್‌, ಕಾರ್ಯಕ್ರಮ ಆಯೋಜನೆಯಿಂದ 500 ಕೋಟಿ, ಊಟ, ಉಪಹಾರ, ಡಿಜೆ, ಮತ್ತಿತರ ಮನೋರಂಜನೆ ಆಯೋಜನೆಯಿಂದ ಸಾವಿರಾರು ಕೋಟಿ ರುಪಾಯಿ ವ್ಯಾಪಾರ ವಹಿವಾಟು ನಡೆಯುತ್ತದೆ. ಇದರಲ್ಲಿ ಶೇ.30ರಷ್ಟು ಕುಸಿತವಾಗಲಿದೆ ಎನ್ನಲಾಗುತ್ತಿದೆ.

ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ(Kannada Prabha) ಮಾತನಾಡಿದ ರಾಜ್ಯ ಹೋಟೆಲ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳ ಮಾಲೀಕರ ಸಂಘದ ಕಾರ್ಯದರ್ಶಿ ಮಧುಕರ ಶೆಟ್ಟಿ ಅವರು, ಮೊದಲು ಸರ್ಕಾರ(Government of Karnataka0 ಹೋಟೆಲ್‌, ರೆಸಾರ್ಟ್‌ಗಳಲ್ಲಿ ರೂಂ ಬುಕ್‌ ಮಾಡುವುದಕ್ಕೂ ನಿರ್ಬಂಧ ವಿಧಿಸಿತ್ತು. ಮಂಗಳವಾರ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ ಬಳಿಕ ಇದಕ್ಕೆ ವಿನಾಯಿತಿ ನೀಡಿದೆ. ಇದರಿಂದ ಕನಿಷ್ಠ ಪಕ್ಷ ಡಿಜೆ, ಸಂಗೀತ, ಮನೋರಂಜನಾ ಕಾರ್ಯಕ್ರಮಗಳಿಲ್ಲದಿದ್ದರೂ ಸ್ನೇಹಿತರು, ಸಂಬಂಧಿಕರು, ಕುಟುಂಬದವರು ಹೊಸ ವರ್ಷದ ದಿನ ರೂಂಗಳನ್ನು ಬುಕ್‌ ಮಾಡಿಕೊಂಡು ಒಟ್ಟಾಗಿ ಊಟ ಸವಿದು ಹೊಸ ವರ್ಷ ಆಚರಿಸಿ ಖುಷಿ ಪಡಲು ಅವಕಾಶ ಸಿಕ್ಕಂತಾಗಿದೆ. ಇದಲ್ಲದಿದ್ದರೆ ನಮ್ಮ ವ್ಯಾಪಾರ, ವಹಿವಾಟಿಗೆ ಇನ್ನೂ ಹೆಚ್ಚಿನ ಹೊಡೆತ ಬೀಳುತ್ತಿತ್ತು ಎಂದು ಹೇಳಿದರು.

ಗ್ರಾಹಕರು ಬರುವುದೇ ರಾತ್ರಿ: 

ನೈಟ್‌ ಕರ್ಫ್ಯೂಯಿಂದಾಗಿ(Night Curfew) ಹೊಸ ವರ್ಷಾಚರಣೆಗೆ(New Year Celebration) ಯಾರೂ ಕೂಡ ಸಂಜೆ 4ಕ್ಕೇ ಬಂದು ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕೂರುವುದಿಲ್ಲ. ಗ್ರಾಹಕರು ಬರುವುದೇ ರಾತ್ರಿ ಒಂಬತ್ತು ಹತ್ತು ಗಂಟೆ ನಂತರ. ಈಗ ಸಾಕಷ್ಟುಜನ ಮುಂಗಡ ಬುಕ್ಕಿಂಗ್‌ ಅನ್ನೂ ರದ್ದುಪಡಿಸಿಕೊಂಡು ಮನೆಯಲ್ಲೇ ಪಾರ್ಸೆಲ್‌ ತರಿಸಿಕೊಂಡು ಹೊಸ ವರ್ಷ ಆಚರಿಸುತ್ತಾರೆ. ಹಾಗಾಗಿ ರೂಂ, ಪಾರ್ಟಿಹಾಲ್‌, ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಮುಂಗಡ ಬುಕ್ಕಿಂಗ್‌ ಮಾಡಿದ್ದವರಿಗೆ ಹಣವನ್ನು ಜಿಎಸ್‌ಟಿ ಸಹಿತ ವಾಪಸ್‌ ನೀಡಬೇಕಿದೆ. ಜತೆಗೆ ನಮ್ಮಿಂದ ಕಾರ್ಯಕ್ರಮ ಆಯೋಜಕರು, ಡೆಕೋರೇಷನ್‌ ಮತ್ತಿತರರಿಗೆ ನೀಡಿರುವ ಮುಂಗಡ ಹಣ ವಾಪಸ್‌ ಬರುವುದಿಲ್ಲ. ಇದರಿಂದ ನಮಗೆ ಸಾಕಷ್ಟುನಷ್ಟವಾಗಲಿದೆ. ರಾಜ್ಯಕ್ಕೆ ಒಮಿಕ್ರೋನ್‌ ಕಾಲಿಟ್ಟು ಸಾಕಷ್ಟುದಿನಗಳಾಗಿವೆ. ಸರ್ಕಾರ ಮೊದಲೇ ಡಿಜೆ, ಮತ್ತಿತರ ಸಂಗೀತ ಕಾರ್ಯಕ್ರಮ ರದ್ದಿನ ಸುಳಿವು ನೀಡಿದ್ದರೆ ನಾವು ಮುಂಗಡ ಬುಕ್‌ ಮಾಡಲು ಹೋಗುತ್ತಿರಲಿಲ್ಲ ಎಂದು ಮಧುಕರ ಶೆಟ್ಟಿಬೇಸರ ವ್ಯಕ್ತಪಡಿಸಿದರು.

ಸರ್ಕಾರದ ಕ್ರಮ ಅವೈಜ್ಞಾನಿಕ: ರಾವ್‌

ಬೆಂಗಳೂರು(Bengaluru) ಹೋಟೆಲ್‌ ಮಾಲೀಕರ ಸಂಘದ ಕಾರ್ಯದರ್ಶಿ ಪಿ.ಸಿ.ರಾವ್‌ ಅವರು ಹೇಳುವಂತೆ, ಬೆಂಗಳೂರಿನ 60 ಸ್ಟಾರ್‌ ಹೋಟೆಲ್‌ಗಳು ಸೇರಿದಂತೆ ಇತರೆ ಎಲ್ಲ ಸಣ್ಣ, ಮಧ್ಯಮ ಹೋಟೆಲ್‌ಗಳಲ್ಲಿ ಹೊಸ ವರ್ಷದ ಅವಧಿಯಲ್ಲಿ .500 ಕೋಟಿಗಳಿಗೂ ಹೆಚ್ಚು ವ್ಯಾಪಾರವಾಗಲಿದೆ. ಸರ್ಕಾರ ಹಲವು ಮಿತಿಗಳನ್ನು ಹೇರಿರುವುದರಿಂದ ಇದರಲ್ಲಿ ಶೇ.20ರಿಂದ 30ರಷ್ಟು ವ್ಯಾಪಾರ ಕಡಿಮೆ ಆಗುವ ಸಾಧ್ಯತೆ ಇದೆ.

Omicron Effect: ಹೆಚ್ಚಿದ ಅಪಾಯ, ಒಂದೇ ದಿನ ವಿಶ್ವಾದ್ಯಂತ 14 ಲಕ್ಷ ಕೇಸ್‌

ಇಡೀ ದಿನ ಪ್ರದರ್ಶನ ನಡೆಯುವ ಚಿತ್ರಮಂದಿರಗಳಲ್ಲಿ, ಸಂಚರಿಸುವ ವಾಹನಗಳಲ್ಲಿ ಶೇ.100ರಷ್ಟು ಜನರಿಗೆ ಅವಕಾಶ ಕಲ್ಪಿಸಿ ಒಂದೆರಡು ಗಂಟೆ ಕಾರ್ಯಕ್ರಮ ಮಾಡುವ ಹೋಟೆಲ್‌, ಬಾರ್‌ ಮತ್ತು ರೆಸ್ಟೋರೆಂಟ್‌, ರೆಸಾರ್ಟ್‌ಗಳಿಗೆ ಶೇ.50ರ ಮಿತಿ, ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಿರುವ ಸರ್ಕಾರಕ ಕ್ರಮ ಅವೈಜ್ಞಾನಿಕ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪೊಲೀಸರ ಕಿರುಕುಳ ತಪ್ಪಿಸಿ

ನೈಟ್‌ ಕರ್ಫ್ಯೂ ನಿಯಮದಂತೆ 10 ಗಂಟೆಗೆ ಬಾಗಿಲು ಹಾಕಿದರೂ ನಂತರ ನಮ್ಮ ಯಾವುದಾದರೂ ಸಿಬ್ಬಂದಿ ಊಟ ಮಾಡುತ್ತಿದ್ದರೂ, ಎಲ್ಲೋ ಒಂದು ಲೈಟ್‌ ಆನ್‌ ಆಗಿದ್ದರೂ ಪೊಲೀಸರು ಬಂದು ಅನಗತ್ಯ ತೊಂದರೆ ನೀಡುತ್ತಾರೆ. ಈ ಹಿಂದೆ ಇಂತಹ ಸಮಸ್ಯೆ ಸಾಕಷ್ಟು ಅನುಭವಿಸಿದ್ದೇವೆ. ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕೆಂದು ಮನವಿ ಮಾಡುತ್ತೇನೆ ಅಂತ ರಾಜ್ಯ ಹೋಟೆಲ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳ ಮಾಲೀಕರ ಸಂಘದ ಕಾರ್ಯದರ್ಶಿ ಮಧುಕರ ಎಂ.ಶೆಟ್ಟಿ ತಿಳಿಸಿದ್ದಾರೆ.  
 

click me!