
ಹುಬ್ಬಳ್ಳಿ (ಮೇ 21): ಕೌಟುಂಬಿಕ ಕಲಹದಿಂದ ಬೇಸತ್ತು ಪುರುಷನೊಬ್ಬ ಕಣ್ಣೀರಿಡುತ್ತಾ ಮನವಿ ಮಾಡಿಕೊಳ್ಳುತ್ತಿರುವ ದೃಶ್ಯವೊಂದು ಹುಬ್ಬಳ್ಳಿಯ ಸಬ್ಅರ್ಬನ್ ಪೊಲೀಸ್ ಠಾಣೆಯಲ್ಲಿ ನಡೆದಿದೆ. ನನ್ನ ಪತ್ನಿ ನನ್ನ ಮೇಲೆ ವರದಕ್ಷಿಣೆ ಆರೋಪ ಮಾಡಿದ್ದು, ನನಗೆ ಹೊಡೆಯುತ್ತಾಳೆ. ನನ್ನನ್ನು ಅವರ ಮನೆಯಿಂದ ರಕ್ಷಣೆ ಮಾಡಿ ಎಂದು ಗಂಡ ಕಣ್ಣೀರಿಟ್ಟು ಬೇಡಿಕೊಂಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಹುಬ್ಬಳ್ಳಿ ನಗರದ ಪತಿ-ಪತ್ನಿಯ ಕೌಟುಂಬಿಕ ಕಲಹ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕಾರ್ ಶೋರೂಮ್ ನಲ್ಲಿ ಕೆಲಸ ಮಾಡುತ್ತಿರುವ ಮಹಮ್ಮದ್ ಸಾಧಿಕ್ ಮತ್ತು ಹಾನಗಲ್ ಮೂಲದ ಆಸೀಯಾ ಎಂಬ ದಂಪತಿಯ ವೈವಾಹಿಕ ಕಲಹ ಇದೀಗ ಗಂಭೀರ ತಿರುವು ಪಡೆದುಕೊಂಡಿದೆ. ಮಹಮ್ಮದ್ ಸಾಧಿಕ್, ಕಳೆದ ನಾಲ್ಕು ವರ್ಷಗಳ ಹಿಂದೆ ಆಸೀಯಾಳನ್ನು ವಿವಾಹವಾಗಿದ್ದನು. ಆರಂಭದಲ್ಲಿ ಇಬ್ಬರೂ ಸುಖವಾಗಿ ಸಂಸಾರ ನಡೆಸಿದ್ದಾರೆ. ನಂತರ ದಾಂಪತ್ಯದಲ್ಲಿ ಸಣ್ಣ ಸಣ್ಣ ವಿಚಾರಕ್ಕೆ ಜಗಳ ಶುರುವಾಯಿತು. ಇದನ್ನೇ ದೊಡ್ಡದಾಗಿ ಮಾಡಿದ ಹೆಂಡತಿ ಕಳೆದ ಎರಡು ವರ್ಷಗಳಿಂದ ಗಂಡನ ಮನೆಯನ್ನು ಬಿಟ್ಟು ತವರು ಮನೆಗೆ ಹೋಗಿ ಸೇರಿಕೊಂಡಿದ್ದಾಳೆ. ಹೀಗಾಗಿ, ಇಬ್ಬರೂ ಎರಡು ವರ್ಷಗಳಿಂದ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರೆ.
ಹೆಂಡತಿಯನ್ನು ಮನೆಗೆ ಬರುವಂತೆ ಕೇಳಿಕೊಂಡಿರುವ ಸಾಧಿನ್ ವಿರುದ್ಧ ಆತನ ಹೆಂಡತಿ ಆಸಿಯಾ ಹುಬ್ಬಳ್ಳಿ ನಗರ ಮಹಿಳಾ ಠಾಣೆಗೆ ತೆರಳಿ ಪತಿ ಸಾಧಿಕ್ ವಿರುದ್ಧ ದೂರು ನೀಡಿದ್ದಾರೆ. ಗಂಡ ನನಗೆ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿದ್ದು, ಮರುಮದುವೆಯಾಗುತ್ತಿದ್ದಾನೆ ಎಂಬ ಅನುಮಾನವಿದೆ. ಆತ ನನಗೆ ಚಿನ್ನಾಭರಣ ಹಾಗೂ ಹಣಕ್ಕೆ ಪೀಡಿಸುತ್ತಿದ್ದಾನೆ. ನಾನು ಎಂಬಿಎ ಓದಿದ್ದೇನೆ. ಆದರೆ, ಇದೀಗ ನನ್ನ ಮಾರ್ಕ್ಸ್ ಕಾರ್ಡ್ ಸೇರಿದಂತೆ ಅನೇಕ ದಾಖಲಾತಿಗಳನ್ನು ಆತನೇ ಇಟ್ಟುಕೊಂಡಿದ್ದಾನೆ. ನನ್ನ ಶೈಕ್ಷಣಿಕ ಮತ್ತು ವೈಯಕ್ತಿಕ ದಾಖಲೆಗಳನ್ನು ಕೊಡುತ್ತಿಲ್ಲ. ಇನ್ನು ಮದುವೆ ಸಮಯದಲ್ಲಿ 50 ಗ್ರಾಂ ಚಿನ್ನಾಭರಣ ಮತ್ತು ₹20,000 ನಗದು ವರದಕ್ಷಿಣೆ ನೀಡಲಾಗಿತ್ತು ಎಂಬುದಾಗಿ ಗಂಡನ ವಿರುದ್ಧ ವರದಕ್ಷಿಣೆ ಆರೋಪವನ್ನೂ ಹೆಂಡತಿ ಆಸೀಯಾ ಮಾಡಿದ್ದಾರೆ.
ಪತ್ನಿ ವಿರುದ್ಧವೇ ಪತಿಯ ಆಕ್ರೋಶ:
ಇನ್ನು ಪತ್ನಿ ಆಸಿಯಾ ಅವರ ಆರೋಪಗಳಿಗೆ ಪ್ರತಿಯಾಗಿ, ಪತಿ ಮಹಮ್ಮದ್ ಸಾಧಿಕ್ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಎದುರು ಕಣ್ಣೀರಿಟ್ಟಿದ್ದಾರೆ. ತನ್ನ ವಿರುದ್ಧ ಪತ್ನಿಯ ಮನೆಯವರು ರೌಡಿಗಳನ್ನು ಕಳುಹಿಸಿ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ತನ್ನ ಜೀವಕ್ಕೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ ಗಂಡ ಮಹಮ್ಮದ್ ಸಾಧಿಕ್ ಪೊಲೀಸರ ರಕ್ಷಣೆಯನ್ನು ಕೋರಿ ಮನವಿ ಮಾಡಿದ್ದಾರೆ. ಇಬ್ಬರ ಆರೋಪ, ಪ್ರತ್ಯಾರೋಪವನ್ನು ಆಲಿಸಿದ ಹುಬ್ಬಳ್ಳಿ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಮಹಿಳಾ ಠಾಣೆಯಲ್ಲಿ ಮಹಮ್ಮದ್ ಸಾಧಿಕ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ