Republic Day Tableau: ಆಯ್ಕೆ ಹೇಗೆ.? ತಿರಸ್ಕಾರಕ್ಕೆ ಕಾರಣಗಳು ಏನೇನು?

By Kannadaprabha NewsFirst Published Jan 18, 2022, 10:07 AM IST
Highlights

ಕೇರಳದ ನಾರಾಯಣ ಗುರು *(Narayana Guru) ಪ್ರತಿಮೆಯುಳ್ಳ ಸ್ತಬ್ಧಚಿತ್ರವನ್ನು ( tableau) ಗಣರಾಜ್ಯ ಪರೇಡ್‌ಗೆ (Republic Day Parade) ಆಯ್ಕೆ ಮಾಡದಿರಲು, ಕೇರಳ ಸರ್ಕಾರ ನಿಯಮ ಪಾಲಿಸದಿದ್ದುದೇ ಕಾರಣ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್‌ ಜೋಶಿ ಸ್ಪಷ್ಟಪಡಿಸಿದ್ದಾರೆ.

2022ನೇ ಸಾಲಿನ ಗಣರಾಜ್ಯೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ, ಈ ಬಾರಿ ಪರೇಡ್‌ಗೆ ಕೆಲ ರಾಜ್ಯಗಳ ಸ್ತಬ್ಧಚಿತ್ರ ಕೈಬಿಟ್ಟಬಗ್ಗೆ ಅಪಸ್ವರ ಕೇಳಿಬಂದಿದೆ. ವಿವಾದಕ್ಕೆ ರಾಜಕೀಯ ಬಣ್ಣವನ್ನೂ ಮೆತ್ತಲಾಗಿದೆ. ಹಾಗಿದ್ದರೆ ಈ ಬಾರಿ ತಿರಸ್ಕೃತಗೊಂಡ ರಾಜ್ಯಗಳಿಗೆ ಈ ಹಿಂದೆ ಅವಕಾಶ ಸಿಕ್ಕಿರಲಿಲ್ಲವೆ, ಇಡೀ ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ? ತಿರಸ್ಕಾರಗೊಳ್ಳುವುದು ಏಕೆ? ಎಂಬಿತ್ಯಾದ ವಿಷಯಗಳ ಬಗ್ಗೆ ಕಿರು ಮಾಹಿತಿ ಇಲ್ಲಿದೆ.

ಪರೇಡ್‌ಗೆ ಸ್ತಬ್ಧ ಚಿತ್ರ ಆಯ್ಕೆ ಹೊಣೆ ಯಾರದ್ದು?

ಗಣರಾಜ್ಯೋತ್ಸವ ಪರೇಡ್‌ಗೆ ಸ್ತಬ್ಧಚಿತ್ರಗಳ ಆಯ್ಕೆ, ನಿರ್ವಹಣೆ ಹೊಣೆ ರಕ್ಷಣಾ ಸಚಿವಾಲಯದ್ದು. ಪ್ರತಿ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ ಅದು ಮುಂದಿನ ವರ್ಷದ ಪರೇಡ್‌ಗೆ ರಾಜ್ಯ, ಕೇಂದ್ರಾಡಳಿತ ಪ್ರದೇಶ, ಕೇಂದ್ರ ಸರ್ಕಾರಿ ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳಿಂದ ಪ್ರಸ್ತಾವನೆ ಆಹ್ವಾನಿಸುತ್ತದೆ. ಸೆ.27ರೊಳಗೆ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಅವುಗಳ ಪೈಕಿ ಕೆಲವನ್ನು ಆಯ್ಕೆ ಮಾಡುವ ಪ್ರಕ್ರಿಯೆ ಅಕ್ಟೋಬರ್‌ 2ನೇ ವಾರದಲ್ಲಿ ಆರಂಭವಾಗುತ್ತದೆ.

ನೇತಾಜಿ ಸ್ತಬ್ಧಚಿತ್ರ, ಕೇರಳ ಬಳಿಕ ಈಗ ಬಂಗಾಳ ಟ್ಯಾಬ್ಲೋ ತಿರಸ್ಕಾರ: ವಿವಾದ!

ಏನು ಬೇಕಾದರೂ ಪ್ರದರ್ಶಿಸಬಹುದೇ?

ಇಲ್ಲ. ರಾಜ್ಯ/ಇಲಾಖೆಗಳು ತಮಗೆ ಸಂಬಂಧಿಸಿದ ವಿಷಯಗಳನ್ನು ಮಾತ್ರ ಪ್ರದರ್ಶಿಸಬಹುದು. ಉದಾಹರಣೆಗೆ ಈ ವರ್ಷ ಎಲ್ಲರಿಗೂ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಹಿನ್ನೆಲೆಯ ವಿಷಯವನ್ನು ನೀಡಲಾಗಿತ್ತು.

ರಕ್ಷಣಾ ಸಚಿವಾಲಯ ಏನೇನು ಸಲಹೆ ನೀಡುತ್ತದೆ?

ಖ್ಯಾತನಾಮ ಸಂಸ್ಥೆಗಳಲ್ಲಿ ತರಬೇತಿ ಪಡೆದ ಯುವ ಸಮೂಹವನ್ನು ಬಳಸಿಕೊಳ್ಳಿ, ಚಿತ್ರ ಮತ್ತು ವಿವರಗಳು ಹೆಚ್ಚು ಸ್ಪಷ್ಟಸುಂದರವಾಗಿ ಕಾಣಲು ಎಲೆಕ್ಟ್ರಾನಿಕ್‌ ಡಿಸ್‌ಪ್ಲೇ ಬೋರ್ಡ್‌ ಬಳಸಿ, ರೋಬೋಟ್‌ ಬಳಸಿ ಚಲಿಸುವ ಅಂಶಗಳನ್ನು ಸೇರಿಸಿಕೊಳ್ಳಿ, ಕೆಲವೊಂದು ವಿಷಯಗಳಿಗೆ 3ಡಿ ಪ್ರಿಂಟಿಂಗ್‌ ಬಳಸಬಹುದು, ವಚ್ರ್ಯುವಲ್‌ ರಿಯಾಲಿಟಿ ಬಳಸಿ, ಹೆಚ್ಚು ಸುಂದರವಾಗಿ ಗೋಚರಿಸುವಂತೆ ಮಾಡಲು ಸ್ಪೆಷಲ್‌ ಎಫೆಕ್ಟ್ ಬಳಸಿ, ಪರಿಸರ ಸ್ನೇಹಿ ವಸ್ತು ಬಳಸಿ ಎಂಬಿತ್ಯಾದಿ ಸಲಹೆಗಳನ್ನು ರಕ್ಷಣಾ ಸಚಿವಾಲಯವು ಪ್ರತಿಯೊಬ್ಬರಿಗೂ ರವಾನಿಸಿರುತ್ತದೆ.

ಟ್ಯಾಬ್ಲೋಗೆ ನಿಯಮಗಳೇನು?

ಎರಡು ರಾಜ್ಯಗಳು ಒಂದೇ ರೀತಿಯ ವಿಷಯ ಬಳಸುವಂತಿಲ್ಲ. ಟ್ಯಾಬ್ಲೋದ ಮೇಲೆ ಯಾವುದೇ ಚಿಹ್ನೆ ಇರುವಂತಿಲ್ಲ, ಏನನ್ನೂ ಬರೆಯುವಂತಿಲ್ಲ. ಟ್ಯಾಬ್ಲೋದ ಮುಂಭಾಗದಲ್ಲಿ ಹಿಂದಿಯಲ್ಲಿ, ಹಿಂಭಾಗದಲ್ಲಿ ಇಂಗ್ಲೀಷ್‌ನಲ್ಲಿ, ಪಕ್ಕದಲ್ಲಿ ಸ್ಥಳೀಯ ಭಾಷೆಯಲ್ಲಿ ರಾಜ್ಯದ ಹೆಸರು ಬರೆದಿರಬೇಕು. ರಕ್ಷಣಾ ಸಚಿವಾಲಯ ಒಂದು ಟ್ರ್ಯಾಕ್ಟರ್‌ ಮತ್ತು ಟ್ರಾಲಿ ನೀಡುತ್ತದೆ. ಅದನ್ನು ಮಾತ್ರ ಬಳಸಬೇಕು. ಬೇಡವೆಂದಾದಲ್ಲಿ ಕೇವಲ 2 ವಾಹನಗಳನ್ನು ಬಳಸಿ ಅದರಲ್ಲಿಟ್ಟು ಟ್ಯಾಬ್ಲೋ ಪ್ರದರ್ಶಿಸಬೇಕು.

ಇನ್ಮುಂದೆ ಜನವರಿ 23 ರಿಂದ Republic Day Celebrations!

ಆಯ್ಕೆ ಪ್ರಕ್ರಿಯೆ ಹೇಗೆ?

ಸ್ತಬ್ಧಚಿತ್ರ ಆಯ್ಕೆಗೆ ರಕ್ಷಣಾ ಸಚಿವಾಲಯವು ಕಲೆ, ಸಂಸ್ಕೃತಿ, ಪೇಂಟಿಂಗ್‌, ಸಂಗೀತ, ಶಿಲ್ಪಿ, ಕೊರಿಯೋಗ್ರಾಫಿ ಮೊದಲಾದ ವಿಷಯಗಳಿಗೆ ಸೇರಿದ ತಜ್ಞರ ಸಮಿತಿ ರಚಿಸುತ್ತದೆ. ಈ ಸಮಿತಿ ಮೊದಲಿಗೆ ರಾಜ್ಯಗಳಿಂದ ಬಂದ ಸ್ಕೆಚ್‌ ಒಳಗೊಂಡ ಪ್ರಸ್ತಾಪ ಪರಿಶೀಲಿಸುತ್ತದೆ. ಅದರಲ್ಲಿ ಏನಾದರೂ ಬದಲಾವಣೆ ಬೇಕಿದ್ದರೆ ಆ ಕುರಿತು ಸಲಹೆ ರವಾನಿಸುತ್ತದೆ. ಮೊದಲ ಹಂತದಲ್ಲಿ ಆಯ್ಕೆಯಾದವರಿಗೆ ಎರಡನೇ ಹಂತಕ್ಕೆ ಆಹ್ವಾನ ನೀಡಲಾಗುತ್ತದೆ. ಈ ಹಂತಕ್ಕೆ ಆಯ್ಕೆಯಾದವರು ತಮ್ಮ ಪ್ರಸ್ತಾಪಗಳನ್ನು 3ಡಿ ಮಾದರಿಯಲ್ಲಿ ಸಲ್ಲಿಸಬೇಕು. ಹೀಗೆ ಒಟ್ಟು 6 ಹಂತಗಳ ಬಳಿಕ ಅಂತಿಮ ಪಟ್ಟಿಪ್ರಕಟಿಸಲಾಗುತ್ತದೆ. ಅಂತಿಮ ಹಂತಕ್ಕೆ ಆಯ್ಕೆ ಮಾಡುವ ಮುನ್ನ ತಜ್ಞರ ತಂಡ, ಸ್ತಬ್ಧ ಚಿತ್ರವು ನೋಡಲು ಎಷ್ಟುಸುಂದರವಾಗಿದೆ? ಸ್ತಬ್ಧ ಚಿತ್ರದ ಥೀಮ್‌, ವಿವರಿಸಲು ಬಳಸಿದ ಮಾದರಿ, ಎಷ್ಟುವಿಸ್ತೃತವಾಗಿ ಚಿತ್ರಿತಗೊಂಡಿದೆ, ಅದಕ್ಕೆ ನೀಡಲಾದ ಹಿನ್ನೆಲೆ ಸಂಗೀತ ಮೊದಲಾದ ಅಂಶಗಳನ್ನು ಪರಿಗಣಿಸುತ್ತದೆ.

ಆಯ್ಕೆಯಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ

ಇಡೀ ಆಯ್ಕೆ ಪ್ರಕ್ರಿಯೆಯಲ್ಲಿ ಸರ್ಕಾರದ ಪಾತ್ರ ಏನೂ ಇರುವುದಿಲ್ಲ. ಆಯ್ಕೆ ಮತ್ತು ತಿರಸ್ಕಾರ ಎರಡೂ ಸ್ವತಂತ್ರವಾದ ತಜ್ಞರ ಸಮಿತಿಗೆ ಸಂಬಂಧಿಸಿದ್ದಾಗಿರುತ್ತದೆ. ವೇದಿಕೆ, ಸಂಪನ್ಮೂಲ ಒದಗಿಸುವುದಷ್ಟೇ ಸರ್ಕಾರದ ಕೆಲಸವಾಗಿರುತ್ತದೆ.

ಸ್ತಬ್ಧ ಚಿತ್ರ ತಿರಸ್ಕಾರಕ್ಕೆ ಕಾರಣಗಳು ಏನೇನು?

ಪ್ರತಿ ವರ್ಷ 20ರಿಂದ 25 ಸ್ತಬ್ಧ ಚಿತ್ರಗಳಿಗೆ ಮಾತ್ರ ರಾಜಪಥದಲ್ಲಿ ಪ್ರದರ್ಶನಕ್ಕೆ ಅವಕಾಶ ಇರುತ್ತದೆ. ಉದಾಹರಣೆಗೆ ಈ ವರ್ಷ ಸಲ್ಲಿಕೆಯಾದ 56ರ ಪೈಕಿ 21ನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಒಂದೇ ವಿಷಯ ಆಧರಿತ, ನೋಡಲು ಆಕರ್ಷಕವಾಗಿಲ್ಲದೆ ಇರುವುದು, ನಿರೀಕ್ಷಿಸಿದ ರೀತಿಯಲ್ಲಿ ಸ್ತಬ್ಧ ಚಿತ್ರ ಮೂಡದೇ ಇರುವುದು, ಸೀಮಿತ ಸಂಖ್ಯೆಯ ಟ್ಯಾಬ್ಲೋಗಳಿಗೆ ಮಾತ್ರವೇ ಅವಕಾಶ ನೀಡಬಹುದಾದ ಕಾರಣ, ಇರುವುದರಲ್ಲೇ ಉತ್ತಮವಾದುದರ ಆಯ್ಕೆ ಮೊದಲಾದ ಕಾರಣಗಳಿಂದಾಗಿ ಹಲವು ರಾಜ್ಯಗಳ ಪ್ರಸ್ತಾಪಗಳನ್ನು ತಿರಸ್ಕರಿಸಲಾಗುತ್ತದೆ.

Narayana Guru Tableau ಗಣರಾಜ್ಯೋತ್ಸವ ಪರೇಡ್‌ಗೆ ನಾರಾಯಣ ಗುರು ಸ್ತಬ್ಧ ಚಿತ್ರ ತಿರಸ್ಕರಿಸಿದ ಕೇಂದ್ರ, ಎಚ್‌ಡಿಕೆ ಕಿಡಿ

ಕೇರಳ, ಬಂಗಾಳ, ತಮಿಳ್ನಾಡಿಗೆ ಅವಕಾಶ ಸಿಕ್ಕೇ ಇಲ್ಲವೇ?

ಈ ಬಾರಿ ಕೇರಳ ಸರ್ಕಾರ ಸಲ್ಲಿಸಿದ್ದ ನಾರಾಯಣ ಗುರು, ಬಂಗಾಳದ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಮತ್ತು ತಮಿಳುನಾಡು ಸರ್ಕಾರ ಕಳಿಸಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದ ವೀರಮಂಗಾಯ್‌ ವೇಲುನಾಚಾರಾರ‍ಯರ್‌, ಕಪ್ಪಲೋಟ್ಟಿಯ ತಮಿಳಗಣ್‌, ಭಾರತೀಯರಾರ್‌ ಅವರ ಚಿತ್ರಗಳನ್ನು ಒಳಗೊಂಡ ಪ್ರಸ್ತಾಪ ತಿರಸ್ಕೃತವಾಗಿವೆ. ಇಡೀ ದಕ್ಷಿಣ ಭಾರತದಲ್ಲಿ ಕರ್ನಾಟಕದ ಸ್ತಬ್ಧ ಚಿತ್ರ ಮಾತ್ರ ಆಯ್ಕೆಯಾಗಿದೆ. ಇದು ವಿವಾದಕ್ಕೂ ಕಾರಣವಾಗಿದೆ. ಆದರೆ ವಿನಾಕಾರಣ ಈ ವಿಷಯದಲ್ಲಿ ರಾಜಕೀಯ ಮಾಡಲಾಗುತ್ತಿದೆ.

ಮೋದಿ ಸರ್ಕಾರ ಯಾವ ಮಾನದಂಡ ಬಳಸಿ 2018, 2021ರಲ್ಲಿ ಕೇರಳಕ್ಕೆ ಅವಕಾಶ ನೀಡಿತ್ತೋ, ತಮಿಳುನಾಡಿಗೆ 2016, 2017, 2019, 2020, 2021ರಲ್ಲಿ ಅವಕಾಶ ನೀಡಿತ್ತೋ, ಬಂಗಾಳಕ್ಕೆ 2016, 2017, 2019, 2021ರಲ್ಲಿ ಅವಕಾಶ ನೀಡಿತ್ತೋ ಅದೇ ಮಾನದಂಡಗಳನ್ನೇ ಈ ವರ್ಷವೂ ಬಳಸಿ ಅರ್ಹ ಪ್ರಸ್ತಾಪಗಳನ್ನು ಸ್ವೀಕರಿಸಿದೆ. ಹೀಗಾಗಿ ರಾಜಕೀಯ ಕಾರಣಕ್ಕಾಗಿ ಈ ರಾಜ್ಯಗಳ ಪ್ರಸ್ತಾಪ ತಿರಸ್ಕರಿಸಲಾಗಿದೆ, ಪ್ರಸ್ತಾಪ ತಿರಸ್ಕರಿಸುವ ಮೂಲಕ ಗಣ್ಯರಿಗೆ ಅವಮಾನ ಮಾಡಲಾಗಿದೆ ಎಂಬ ವಿಷಯವೇ ಉದ್ಭವವಾಗದು ಎಂದು ಸರ್ಕಾರದ ಮೂಲಗಳ ಹೇಳಿಕೆ.

ನಿಯಮ ಪಾಲಿಸದಿದ್ದಕ್ಕೆ ನಾರಾಯಣಗುರು ಸ್ತಬ್ಧ ಚಿತ್ರ ಆಯ್ಕೆ ಇಲ್ಲ: ಜೋಶಿ

 ಕೇರಳದ ನಾರಾಯಣ ಗುರು ಪ್ರತಿಮೆಯುಳ್ಳ ಸ್ತಬ್ಧಚಿತ್ರವನ್ನು ಗಣರಾಜ್ಯ ಪರೇಡ್‌ಗೆ ಆಯ್ಕೆ ಮಾಡದಿರಲು, ಕೇರಳ ಸರ್ಕಾರ ನಿಯಮ ಪಾಲಿಸದಿದ್ದುದೇ ಕಾರಣ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್‌ ಜೋಶಿ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಜೋಶಿ, ‘ಕೇಂದ್ರದ ಸ್ತಬ್ಧಚಿತ್ರದ ನಿಯಮಾವಳಿ ಹಾಗೂ ಮಾರ್ಗದರ್ಶಿಯನ್ನು ಕೇರಳ ಸರ್ಕಾರ ಸರಿಯಾಗಿ ಪಾಲಿಸದ ಕಾರಣ ಕೇರಳದ ಸ್ತಬ್ಧಚಿತ್ರ ಆಯ್ಕೆಯಾಗಿಲ್ಲ. 2018 ಹಾಗೂ 2021 ರಲ್ಲಿ ಕೇರಳದ ಸ್ತಬ್ಧಚಿತ್ರಗಳು ಆಯ್ಕೆಯಾಗಿದ್ದವು. ಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ರಕ್ಷಣೆ ನೀಡಲಾಗದ ಕೇರಳದ ಕಮ್ಯುನಿಸ್ಟ್‌ ಸರ್ಕಾರದ ಎಡವಟ್ಟಿನಿಂದ ಈ ಬಾರಿ ಸ್ತಬ್ಧಚಿತ್ರ ಆಯ್ಕೆಯಾಗಿಲ್ಲ’ ಎಂದಿದ್ದಾರೆ. ಇದೇ ವೇಳೆ, ‘ಕರ್ನಾಟಕ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ವಿನಾಕಾರಣ ಬ್ರಹ್ಮಶ್ರೀ ನಾರಾಯಣಗುರು ಹೆಸರಿನಲ್ಲಿ ವಿವಾದ ಸೃಷ್ಟಿಸುತ್ತಿರುವುದು ಖಂಡನೀಯ’ ಎಂದು ಜೋಶಿ ಹೇಳಿದ್ದಾರೆ.

 

click me!