
ನವದೆಹಲಿ/ಉಡುಪಿ(ಮಾ.12): ಅಯೋಧ್ಯೆಯಲ್ಲಿ ರಾಮನಿಗೆ ಮನೆ ನಿರ್ಮಾಣ ಆಗಿದೆ, ಇನ್ನು ಬಡವರೆಲ್ಲರಿಗೂ ಮನೆ ನಿರ್ಮಾಣ ಆಗಬೇಕು. ಆ ಮೂಲಕ ರಾಮರಾಜ್ಯದ ನಿರ್ಮಾಣ ಆಗಬೇಕು ಎಂದು ಅಯೋಧ್ಯೆಯ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ಥರು, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶಿಸಿದ್ದಾರೆ.
ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಯ ನಂತರ ಅಖಂಡ 48 ದಿನಗಳ ಕಾಲ ವಿವಿಧ ಯಜ್ಞಯಾಗಾದಿಗಳೊಂದಿಗೆ ಮಂಡಲೋತ್ಸವವನ್ನು ಪೂರ್ಣಗೊಳಿಸಿ, ದೆಹಲಿಗೆ ಆಗಮಿಸಿದ ಶ್ರೀಗಳು, ಮಂಡಲ ಪೂಜೆಯ ಬಗ್ಗೆ ಧನ್ಯತಾಭಾವ ವ್ಯಕ್ತಪಡಿಸಿದರು. ಏ.17ರಂದು ಪ್ರಥಮ ರಾಮನವಮಿ ಹಬ್ಬ ಬರುತ್ತಿದೆ, ರಾಮಮಂದಿರ ನಿರ್ಮಾಣ ಆದ ಮೇಲೆ ಇದು ಪ್ರಥಮ ರಾಮನವಮಿ, ಅದರ ಆಚರಣೆ ವಿಜೃಂಭಣೆಯಿಂದ ನಡೆಯಲಿದೆ. ಈ ಬಗ್ಗೆ ಟ್ರಸ್ಟ್ನಲ್ಲಿ ಚರ್ಚೆಯಾಗಬೇಕಾಗಿದೆ. ರಾಮಮಂದಿರ ಸಂಪೂರ್ಣ ನಿರ್ಮಾಣಕ್ಕೆ ಇನ್ನೂ 2 ವರ್ಷಗಳ ಬೇಕಾದೀತು ಎಂದು ಶ್ರೀಗಳು ಹೇಳಿದರು.
ಅಡ್ವಾಣಿಗೆ ರಾಮಲಲ್ಲಾನ ಪೂರ್ಣ ಕೃಪೆಯಾಗಿದೆ: ಪೇಜಾವರ ಶ್ರೀ
ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯಾಗಿ ರಾಮಮಂದಿರದ ಕನಸು ಈಡೇರಿದೆ. ಈಗ ರಾಮ ರಾಜ್ಯದ ಕನಸು ಈಡೇರಬೇಕಿದೆ. ರಾಮ ರಾಜ್ಯ ಎಂದರೆ ಸರ್ವ ಸಮೃದ್ಧಿ ಎಂದರ್ಥ. ಇವತ್ತು ಪ್ರಜಾರಾಜ್ಯ ಇದೆ. ಹಾಗಾಗಿ ಪ್ರಜೆಗಳು ಎಲ್ಲರೂ ಈಗ ರಾಮನಾದರೆ ಸಾಕು, ರಾಮರಾಜ್ಯ ಸ್ಥಾಪನೆಯಾಗುತ್ತದೆ. ಮದುವೆ, ಮಹೋತ್ಸವ ಎಂದೆಲ್ಲ ಕೋಟಿಗಳಲ್ಲಿ ಹಣ ಖರ್ಚು ಮಾಡಲಾಗುತ್ತಿದೆ, ಅದೇ ಹಣದಲ್ಲಿ ನಮ್ಮೂರಿನ ಬಡವನಿಗೆ ಮನೆ ಕಟ್ಟಿಕೊಡುವ ಕೆಲಸ ಆಗಬೇಕು, ಆಗ ರಾಮ ರಾಜ್ಯ ಸ್ಥಾಪನೆಯಾಗುತ್ತದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಅಯೋಧ್ಯೆಯ ಯಜ್ಞಶಾಲೆಯಲ್ಲಿ ಅನೇಕ ಯಜ್ಞಗಳು ನಡೆದಿವೆ. ಭಾರತ ಮಾತ್ರವಲ್ಲ ವಿದೇಶಗಳಲ್ಲೂ ರಾಮಭಕ್ತರು ರಾಮತಾರಕ ಮಂತ್ರ ಜಪಿಸಿದ್ದಾರೆ. ದೇಶದ ಎಲ್ಲ ಕಡೆಯಿಂದ ಭಕ್ತರು ಬಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದ್ದಾರೆ. ನಿತ್ಯ 3 ಲಕ್ಷ ಮಂದಿ ಶ್ರೀರಾಮನ ದರ್ಶನ ಪಡೆಯುತ್ತಿದ್ದಾರೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ