
ಬೆಂಗಳೂರು (ಅ.02) ಇಡೀ ಜಾಗತಿಕ ಮಟ್ಟದಲ್ಲಿ ಶಾಂತಿ ಸೂಚಕವಾದ ಮಹಾತ್ಮಾಗಾಂಧಿ ಅವರ ಜಯಂತಿಯನ್ನು ಆಚರಣೆ ಮಾಡುವ ಹಿಂದಿನ ದಿನ ಶಿವಮೊಗ್ಗ ನಗರದಲ್ಲಿ ಹಿಂದೂ ಮುಸ್ಲಿಂ ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಕಲ್ಲು ತೂರಾಟ ನಡೆದು 144 ಸೆಕ್ಷನ್ ಜಾರಿ ಮಾಡಲಾಗಿದೆ. ಇಡೀ ರಾಜ್ಯವೇ ತಲೆ ತಗ್ಗಿಸುವಂತಃ ಘಟನೆ ನಡೆದಿದ್ದರೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಶಿವಮೊಗ್ಗದಲ್ಲಿ ಇದೆಲ್ಲಾ ಏನ್ ಹೊಸದಾಗಿ ಮಾಡ್ತಾರಾ? ಎಂದು ಉಡಾಫೆ ಉತ್ತರವನ್ನು ನೀಡಿದ್ದಾರೆ.
ಶಿವಮೊಗ್ಗ ಗಲಾಟೆ ಪ್ರಕರಣದ ಕುರಿತು ಸೋಮವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್ ಅವರು, ಶಿವಮೊಗ್ಗದ ಘಟನೆಯಲ್ಲಿ ಭಾಗಿಯಾದ ನಾಲ್ವರನ್ನು ಅರೆಸ್ಟ್ ಮಾಡಲಾಗಿದೆ. ಯಾರು ಅರೆಸ್ಟ್ ಆಗಿದ್ದಾರೆ ಅನ್ನೋ ಡೀಟೇಲ್ಸ್ ಗೊತ್ತಿದ್ರೂ ನಿಮಗೆ ಹೇಳುವುದಿಲ್ಲ. ಹೆಸರುಗಳನ್ನ ಹೇಗೆ ಬಹಿರಂಗಪಡಿಸಬೇಕು ಅಂತ ನಿರೀಕ್ಷೆ ಮಾಡ್ತೀರಾ?ಅವರಿಗೆ ಕಾನೂನು ಪ್ರಕಾರ ಏನು ಕ್ರಮ ಆಗಬೇಕು ಆಗುತ್ತದೆ. ಇದೆಲ್ಲ ಏನು ಹೊಸದಾಗಿ ಆಗ್ತಾ ಇರೋದಾ? ಆಗಿದೆ ಅದನ್ನು ನಿಯಂತ್ರಣ ಮಾಡುವುದಕ್ಕೆ ಪೊಲೀಸರು ಸಮರ್ಥರಿದ್ದಾರೆ. ನಮಗೆ ಗೊತ್ತಿತ್ತು ಅಲ್ಲಿ ಟೆನ್ಶನ್ ಇದೆ, ಪ್ರೊಸೆಷನ್ ಹೋದಾಗ ಏನಾದರು ಆಗುತ್ತೆ ಅಂತ. ಹಾಗಾಗಿ ದೊಡ್ಡ ಪ್ರಮಾಣದ ಗಲಾಟೆ ಆಗಿಲ್ಲ ಅದನ್ನ ನಿಯಂತ್ರಿಸಿದ್ದಾರೆ.
ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ: 144 ಸೆಕ್ಷನ್ ಜಾರಿ
ರಾಜ್ಯದ ಎಲ್ಲ ಕಡೆಯಲ್ಲೂ ಇಂತಹ ಘಟನೆಗಳು ನಡೆದಿವೆ: ಸಣ್ಣಪುಟ್ಟ ಗಲಾಟೆ ಆದಾಗ ಅದನ್ನ ಹೇಗೆ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಪೊಲೀಸರು ಮಾಡಿದ್ದಾರೆ. ಅವರ ಕಡೆ ಇವರ ಕಡೆ ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ. ಬ್ಯಾನರ್ ಕಟ್ಟೋದು ಪೋಸ್ಟರ್ ಕಟ್ಟೋದು ಈ ಸಂದರ್ಭವನ್ನು ಉಪಯೋಗಿಸಿಕೊಂಡು ಪ್ರಚೋದನೆಯನ್ನು ಮಾಡುತ್ತಾರೆ. ಇಡೀ ರಾಜ್ಯದಲ್ಲಿ ಎಲ್ಲ ಜಿಲ್ಲೆನಲ್ಲೂ ಅಲ್ಲಲ್ಲಿ ಇಂತ ಘಟನೆಗಳು ನಡೆದಿದೆ. ಅದನ್ನು ನಮ್ಮವರು ನಿಯಂತ್ರಣ ಮಾಡಿದ್ದಾರೆ. ಈ ಬಾರಿ ಎಲ್ಲೂ ಅಹಿತಕರ ಘಟನೆ ಆಗೋದಕ್ಕೆ ಬಿಟ್ಟಿಲ್ಲ. ಎರಡು ಸಮುದಾಯದವರೆಗೂ ವಾರ್ನ್ ಮಾಡಿದ್ದೇವೆ. ಅದನ್ನ ಮೀರಿ ಹೋದರೆ ನ್ಯಾಚುರಲಿ ಕಾನೂನು ಪ್ರಕಾರ ಕೈಗೊಳ್ಳಲಾಗತ್ತದೆ ಎಂದರು.
ಈದ್ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ, ಶಿವಮೊಗ್ಗ ಈಗ ಬೂದಿಮುಚ್ಚಿದ ಕೆಂಡ
ಕತ್ತಿ ಗುರಾಣಿ ಹಿಡಿದುಕೊಂಡಿದ್ದೆಲ್ಲಾ ಮಾಹಿತಿ ಇಲ್ಲ: ಶಿವಮೊಗ್ಗದ ಕುರಿತು ನನಗೆ ಬಂದಿರುವ ಮಾಹಿತಿಯಲ್ಲಿ ಕಲ್ಲುತೂರಾಟ ಮಾಡಿದ್ದಾರೆ ಅನ್ನುವ ಮಾಹಿತಿ ಇದೆ. ಕತ್ತಿ ಗುರಾಣಿ ಹಿಡಿದುಕೊಂಡಿದ್ದೆಲ್ಲಾ ಮಾಹಿತಿ ಇಲ್ಲ. ಯಾರು ಏನು ಬೇಕಾದರೂ ಹೇಳಿಕೆ ಕೊಡಲಿ ನಮಗೆ ವಾಸ್ತವ ಏನಿದೆ ಅಂತ ಗೊತ್ತಿದೆ. ಯಾರು ಹೊರಗಡೆಯಿಂದ ಬರೋದಕ್ಕೆ ಬಿಟ್ಟಿಲ್ಲ. ನಾವು ಎಲ್ಲಾ ರೋಡ್ ಗಳನ್ನು ರೆಗ್ಯುಲೇಟ್ ಮಾಡಿದ್ದೇವೆ. ಹಿಂದೆ ಇಲ್ಲಿ ನಡೆದಿರುವುದರಿಂದ ನಮಗೆ ಗೊತ್ತಿದೆ. ಅದಕ್ಕಾಗಿ ನಾವು ಮೊದಲೇ ಮುಂಜಾಗ್ರತ ಕ್ರಮ ವಹಿಸಿದ್ದೆವು. ಹೊರಗಿಂದ ಜನ ಬರೋದಕ್ಕೆ ಬಿಟ್ಟಿಲ್ಲ. ಪೋಸ್ಟರ್ ಹಾಕೋದಕ್ಕೆ ಯಾವುದೇ ಅನುಮತಿಯನ್ನು ನಾವು ಕೊಡುವುದಿಲ್ಲ ಕೊಟ್ಟಿಲ್ಲ. ಯಾರು ಹಾಕಿದ್ದಾರೆ ಯಾವ ಉದ್ದೇಶಕ್ಕೆ ಹಾಕಿದ್ದಾರೆ ಎಂಬುದನ್ನು ತನಿಖೆ ಮಾಡುತ್ತೇವೆ. ನಮ್ಮಲ್ಲಿ ಪರ್ಮಿಷನ್ ಕೇಳಿದ್ರೆ ಯಾವ ಕಾರಣಕ್ಕೂ ಕೊಡೋದಿಲ್ಲ. ಇಂಥದಕ್ಕೆಲ್ಲಾ ನಾವು ಉತ್ತೇಜನ ಕೊಡುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ