ಪ್ರಜ್ವಲ್‌ ರೇವಣ್ಣ ಎಲ್ಲಿದ್ರೂ ಹುಡುಕಿ ತರುತ್ತೇವೆ: ಗೃಹ ಸಚಿವ ಪರಮೇಶ್ವರ್‌

By Girish GoudarFirst Published May 2, 2024, 4:32 PM IST
Highlights

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳು ಬೀದಿ ಬೀದಿಗಳಲ್ಲಿ ಎಲ್ಲರ ಮೋಬೈಲ್‌ಗಳಲ್ಲೂ ಹರಿದಾಡುತ್ತಿರುವ ಬಗ್ಗೆ ನಮಗೂ ಖೇದವಿದೆ. ಈ ಬಗ್ಗೆ ಟ್ವೀಟರ್‌, ಫೇಸಬುಕ್‌, ಇನ್‌ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳವರಿಗೆ ಪತ್ರ ಬರೆದು ಈ ವಿಡಿಯೋಗಳು ಪ್ರಸಾರವಾಗದಂತೆ ತಡೆಯಲು ಕೋರಿದ್ದೇವೆ.  ಆದಾಗ್ಯೂ ಈ ಏಜನ್ಸಿಗಳಿಂದ ಅಂತಹ ಸ್ಪಂದನೆ ಸಿಕ್ಕಿಲ್ಲ. 

ಕಲಬುರಗಿ(ಮೇ.02):  ಹಾಸನ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಮತ್ತೊಬ್ಬ ಮಹಿಳೆ ದೂರು ದಾಖಲಿಸಿದ್ದಾರೆ. ಆಕೆಯ ದೂರು ದಾಖಲಿಸಿಕೊಂಡಿರುವ ಎಸ್‌ಐಟಿ ಹೇಳಿಕೆ ದಾಖಲಿಸಿಕೊಂಡು ತನಿಖೆಗೆ ಮುಂದುವರಿಸಿದೆ. ಪ್ರಜ್ವಲ್‌ ರೇವಣ್ಣರಿಂದ ಲೈಂಗಿಕ ಕಿರುಕುಳಕ್ಕೊಳಗಾಗಿದ್ದೇವೆ ಎಂದು ಇಬ್ಬರು ಮಹಿಳೆಯರು ದೂರು ದಾಖಲಿಸಿದ್ದಾರೆ. ದೂರು ನೀಡಿದ ಸಂತ್ರಸ್ತರಿಗೆ ಸರ್ಕಾರದಿಂದ ಸಂಪೂರ್ಣ ರಕ್ಷಣೆ ನೀಡುತ್ತೇವೆ. ಎಸ್‌ಐಟಿ ಈಗ ತಾನೆ ತನಿಖೆ ಶುರು ಮಾಡಿದೆ. ನೂರಾರು ವಿಡಿಯೋ ಇರೋದರಿಂದ ಇದು ಸೂಕ್ಷ್ಮ ಪ್ರಕರಣವಾಗಿದೆ. ಬೇಕಾಬಿಟ್ಟಿ ಇದನ್ನ ವಿಚಾರಣೆ ಮಾಡಲಾಗದು. ಇದರಲ್ಲಿ ನೂರಾರು ಮಹಿಳೆಯರ ಬದುಕೇ ಅಡಗಿದೆ. ಇದೊಂದು ಗಂಭೀರ ಹಗರಣವಾಗಿ ಸರ್ಕಾರ ಪರಿಗಣಿಸಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ. 

ಇಂದು(ಗುರುವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಪರಮೇಶ್ವರ ಅವರು, ವಿಚಾರಣೆಗೆ ಹಾಜರಾಗದಿದ್ರೆ ರೇವಣ್ಣ ಬಂಧನವಾಗುವ ಸಾಧ್ಯತೆ ಇದೆ. ದೂರು ಬಂದ ತಕ್ಷಣ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗಿದೆ. ಮಹಿಳಾ ಆಯೋಗದಿಂದ ಪತ್ರ ಬರುತ್ತಿದ್ದಂತೆಯೇ ಸರ್ಕಾರದಿಂದ ಎಸ್‌ಐಟಿ ರಚನೆ ಮಾಡಿ ತನಿಖೆಗೆ ಆದೇಶಿಸಲಾಗಿದೆ. ಎಸ್‌ಐಟಿ ರಚನೆ ವಿಚಾರ ಗೊತ್ತಾಗುತ್ತಿದ್ದಂತೆಯೇ ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಹೋಗಿರಬಹುದು. ಈಗಾಗ್ಲೇ ನಮ್ಮ ಅಧಿಕಾರಿಗಳು ಸೆಕ್ಷನ್‌ 41- ಎ ಪ್ರಕಾರ ಪ್ರಜ್ವಲ್‌ ಹಾಗೂ ಎಚ್‌.ಡಿ. ರೇವಣ್ಣ ಇಬ್ಬರಿಗೂ ನೋಟೀಸ್‌ ನೀಡಿದ್ದಾರೆ. ನೋಟೀಸ್‌ ಪಡೆದವರು 24 ಗಂಟೆಯೊಳಗೆ ವಿಚಾರಣಾಧಿಕಾರಿ ಮುಂದೆ ಹಾಜರಾಗಬೇಕು. ಪ್ರಜ್ವಲ್‌ ವಿದೇಶದಲ್ಲಿದ್ದಾರೆ, ರೇವಣ್ಣ ವಿಚಾರಣೆಗೆ ಬರಬಹುದು, ಬರದೆ ಹೋದ್ರೆ ಅಧಿಕಾರಿಗಳು ಬಂಧಿಸಿ ಕರೆ ತರುತ್ತಾರೆ ಎಂದು ಹೇಳಿದ್ದಾರೆ. 

ದೇವೇಗೌಡರ ಕುಟುಂಬ ಸದಸ್ಯರು ಹಾಸನಷ್ಟೇ ಅಲ್ಲ, ಕರ್ನಾಟಕದ ಹೆಸರು ಕೆಡಿಸಿದ್ದಾರೆ: ಮೊಯ್ಲಿ ಆಕ್ರೋಶ

ಪ್ರಜ್ವಲ್‌ ರೇವಣ್ಣ ವಿರುದ್ಧ ಲುಕ್‌ಔಟ್‌ ನೋಟಿಸ್‌ ಹೊರಡಿಸಲಾಗಿದೆ. ಎಲ್ಲ ಏರ್‌ಪೋರ್ಟ್‌, ಬಂದರುಗಳಲ್ಲಿ ರೇವಣ್ಣ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಅವರ ವಕೀಲರು ತಮ್ಮ ಕಕ್ಷೀದಾರ ವಿದೇಶದಲ್ಲಿದ್ದಾರೆ. ವಿಚಾರಣೆಗೆ ಹಾಜರಾಗಲು 6 ದಿನ ಸಮಯ ಕೇಳಿದ್ದಾರೆ. ನಮ್ಮ ಅಧಿಕಾರಿಗಳು ಈ ಬಗ್ಗೆ ಕಾನೂನು ಸಲಹೆ ಪಡೆದಿದ್ದಾರೆ. ಸದ್ಯದ ನಿಯಮಗಳ ಪ್ರಕಾರ ಇಂತಹ ಪ್ರಕರಣದಲ್ಲಿ ಸಮಯ ನೀಡೋದು ಅಸಾಧ್ಯ ಎಂದು ತಿಳಿಸಿದ್ದಾರೆ. 

ಸಂತ್ರಸ್ತ ಮಹಿಳೆಯರನ್ನ ಗುರುತಿಸಿ ಅವರನ್ನು ಭೇಟಿ ಮಾಡಿ ಹೇಳಿಕೆ ಪಡೆಯುವ ಪ್ರಕ್ರಿಯೆ ಚುರುಕಿನಿಂದ ಸಾಗಿದೆ. ಪ್ರಜ್ವಲ್‌ ರೇವಣ್ಣ ಸದ್ಯ ತನ್ನ ಬಳಿ ಹೊಂದಿರುವ ವೀಸಾದಂತೆ 45 ದೇಶಗಳಿಗೆ ಸುತ್ತಾಡಬಹುದು. ಅವರ ಡಿಪ್ಲೋಮ್ಯಾಟಿಕ್‌ ಪಾಸ್‌ ರದ್ದು ಮಾಡಲು ಕೋರಿ ಪತ್ರ ಬರೆಯಲಾಗಿದೆ. ಪ್ರಜ್ವಲ್‌ ರೇವಣ್ಣರನ್ನ ಶೋಧಿಸಿ ತರುತ್ತೇವೆ. ಹೊರ ದೇಶದಲ್ಲಿರೋ ಕಾರಣ ಕೇಂದ್ರದ ಸಹಕಾರ ಕೋರಿದ್ದೇವೆ. ಉಳಿದಂತೆ ರಾಜ್ಯ ಸರ್ಕಾರವೇ ಅವರ ವಿರುದ್ಧ ಅಗತ್ಯ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. 

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳು ಬೀದಿ ಬೀದಿಗಳಲ್ಲಿ ಎಲ್ಲರ ಮೋಬೈಲ್‌ಗಳಲ್ಲೂ ಹರಿದಾಡುತ್ತಿರುವ ಬಗ್ಗೆ ನಮಗೂ ಖೇದವಿದೆ. ಈ ಬಗ್ಗೆ ಟ್ವೀಟರ್‌, ಫೇಸಬುಕ್‌, ಇನ್‌ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳವರಿಗೆ ಪತ್ರ ಬರೆದು ಈ ವಿಡಿಯೋಗಳು ಪ್ರಸಾರವಾಗದಂತೆ ತಡೆಯಲು ಕೋರಿದ್ದೇವೆ.  ಆದಾಗ್ಯೂ ಈ ಏಜನ್ಸಿಗಳಿಂದ ಅಂತಹ ಸ್ಪಂದನೆ ಸಿಕ್ಕಿಲ್ಲ. ಫೇಸಬುಕ್‌ನವರಂತೂ ಇಟ್‌ ಡಸಂಟ್‌ ಹ್ಯಾವ್‌ ನ್ಯಾಶನಲ್‌ ಇಂಪ್ಯಾಕ್ಟ್‌ ಎಂದು ನಮ್ಮ ಮೇಲ್‌ಗೆ ಉತ್ತರ ರವಾನಿಸಿ ಕೈತೊಳೆದುಕೊಂಡಿದ್ದಾರೆ. ಪ್ರಕರಣದಲ್ಲಿ ಕಾಂಗ್ರೆಸ್‌ ಸುಮ್ಮನ್ಯಾಕೆ ಕುಂತಿದೆ ಎಂದು ಬಿಜೆಪಿಯವರು ಕೇಳಿದ್ದಾರೆ. ಇವೆಲ್ಲ ಸೂಕ್ಷ್ಮ ಪ್ರಕರಣ, ದೂರು ಇಲ್ಲದೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಮುಂದುವರೆಯೋದು ಆಗೋದಿಲ್ಲ. ದೂರು ಸಲ್ಲಿಕೆಯಾಗುತ್ತಿದ್ದಂತೆಯೇ ನಾವು ಕ್ರಮಕ್ಕೆ ಮುಂದಾಗಿದ್ದೇವೆ. ಇದರಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ.  ಪ್ರಜ್ವಲ್‌ ಅದೆಲ್ಲೇ ಇದ್ದರೂ ನಾವು ಅವರನ್ನ ಕರೆ ತರುತ್ತೇವೆ. ಯಾರದೋ ಹೇಳಿಕೆಗಳನ್ನಾಧರಿಸಿ ತನಿಖೆ ನಡೆಯೋದಿಲ್ಲ. ತನಿಖೆ ಅದೇನಿದ್ದರೂ ಫ್ಯಾಕ್ಟ್‌ಗಳ ಹಿನ್ನೆಲೆಯಲ್ಲಿ ನಡೆಯುತ್ತದೆ. ಇಂತಹ ಪ್ರಕರಣಗಳಲ್ಲಿ ಸಾಧ್ಯವಿದ್ದಷ್ಟು ಸಾಕ್ಷ್ಯ- ಪುರಾವೆ ಕಲೆ ಹಾಕಿ ನೊಂದವರಿಗೆ ನ್ಯಾಯ ಕೊಡಿಸೋದೇ ಮುಖ್ಯವಾಗಿದೆ ಎಂದು ಹೇಳಿದ್ದಾರೆ. 

click me!