
ಬೆಂಗಳೂರು (ಜೂ.12): ಲಾಕ್ಡೌನ್ ವಿನಾಯಿತಿಗೆ ಇನ್ನು ಮೂರು ದಿನಗಳು ಬಾಕಿಯಿರುವ ಮುನ್ನವೇ ಜನರು ರಸ್ತೆಗಿಳಿದಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿರುವ ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ನಿಯಮ ಪಾಲಿಸದೆ ಪೊಲೀಸರ ಬಲ ಪ್ರಯೋಗಕ್ಕೆ ಜನರು ಅವಕಾಶ ಕೊಡಬಾರದು ಎಂದು ಎಚ್ಚರಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಿರುವ ಸಂದರ್ಭದಲ್ಲಿ ಲಾಕ್ಡೌನ್ ಅವಧಿ ಮುಗಿಯುವವರೆಗೆ ಮನೆಯಲ್ಲೇ ಇದ್ದು ನಾಗರಿಕರು ಸಹಕಾರ ನೀಡಬೇಕು ಎಂದು ಕೋರಿದರು.
5 ಕೇಸ್ ಪತ್ತೆಯಾದ್ರೆ ಹಳ್ಳಿ ಸೀಲ್ಡೌನ್: ಸಚಿವ ಸುಧಾಕರ್ .
ಜೂನ್ 14ರ ಸೋಮವಾರ ನಂತರ ಲಾಕ್ಡೌನ್ಗೆ ವಿನಾಯಿತಿ ನೀಡಲಾಗಿದೆ. ಆದರೆ ಲಾಕ್ಡೌನ್ ವಿನಾಯಿತಿ ಇಂದಿನಿಂದಲೇ ಜಾರಿಗೆ ಬಂದಿರುವಂತೆ ಭಾವಿಸಿ ಜನರು ಮನೆಯಿಂದ ಹೊರ ಬರುತ್ತಿರುವುದು ಸರಿಯಲ್ಲ. ಕಾನೂನು ಪಾಲಿಸಿ ಪೊಲೀಸರೊಂದಿಗೆ ಜನರಿಗೆ ಸಹಕರಿಸಬೇಕು. ಪೊಲೀಸರ ಬಲ ಪ್ರಯೋಗಕ್ಕೆ ಅವಕಾಶ ಕೊಡಬಾರದು ಎಂದರು.
ಆರ್ಥಿಕ ಚಟುವಟಿಕೆಗಳ ಉತ್ತೇಜನಕ್ಕಾಗಿ ಕೆಲ ಕ್ಷೇತ್ರಗಳಿಗೆ ಲಾಕ್ಡೌನ್ ನಿಯಮದಲ್ಲಿ ಮುಖ್ಯಮಂತ್ರಿಗಳು ರಿಯಾಯಿತಿ ಘೋಷಿಸಿದ್ದಾರೆ. ಕೈಗಾರಿಕಾ ಕ್ಷೇತ್ರಗಳಲ್ಲಿ ಶೇ.50ರಷ್ಟುಸಿಬ್ಬಂದಿಗೆ ಕೆಲಸಕ್ಕೆ ಅವಕಾಶ ಕೊಡಲಾಗಿದೆ. ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಹಾಗೂ ಅವರಿಗೆ ಲಸಿಕೆ ಕೊಡಿಸುವ ಕೆಲಸವನ್ನು ಮಾಲಿಕರೇ ಮಾಡಬೇಕು ಎಂದು ಹೇಳಿದರು.
ನಿಲ್ದಾಣಗಳಲ್ಲಿ ಕೊರೋನಾ ಟೆಸ್ಟ್?
ಲಾಕ್ಡೌನ್ ವಿನಾಯಿತಿಯಿಂದ ಬೆಂಗಳೂರಿಗೆ ಮರು ವಲಸೆ ಶುರುವಾಗುವ ಹಿನ್ನೆಲೆಯಲ್ಲಿ ರೈಲ್ವೆ, ವಿಮಾನ ಹಾಗೂ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಕೊರೋನಾ ಪರೀಕ್ಷೆ ನಡೆಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಬೊಮ್ಮಾಯಿ ಹೇಳಿದರು.
ಲಾಕ್ಡೌನ್ ಜಾರಿಯಾದ ಬಳಿಕ ನಗರ ತೊರೆದು ಬಹುತೇಕರು ಊರುಗಳಿಗೆ ಜನರು ಹೋಗಿದ್ದರು. ಈಗ ಲಾಕ್ಡೌನ್ ನಿಯಮಗಳು ಸಡಿಲಿಕೆ ಮಾಡಿದ ಕಾರಣ ನಗರಕ್ಕೆ ಜನರು ಮರಳುವ ಸಾಧ್ಯತೆಗಳಿವೆ. ಹೀಗಾಗಿ ಹೆಚ್ಚು ಜನಸಂದಣಿಯಾಗುವ ನಿಲ್ದಾಣಗಳಲ್ಲಿ ಕೊರೋನಾ ಪರೀಕ್ಷೆ ನಡೆಸುವ ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ