ಮುರುಘಾ ಶ್ರೀಗಳ ಕೇಸ್‌ನಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ: ಆರಗ

By Govindaraj SFirst Published Sep 4, 2022, 3:30 AM IST
Highlights

ಅಪ್ರಾಪ್ತೆಯರಿಗೆ ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಚಿತ್ರದುರ್ಗ ಮುರುಘಾ ಶ್ರೀಗಳ ಪ್ರಕರಣದಲ್ಲಿ ಸರ್ಕಾರ ಯಾವುದೇ ರೀತಿಯಲ್ಲೂ ಹಸ್ತಕ್ಷೇಪ ನಡೆಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಶಿವಮೊಗ್ಗ (ಸೆ.04): ಅಪ್ರಾಪ್ತೆಯರಿಗೆ ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಚಿತ್ರದುರ್ಗ ಮುರುಘಾ ಶ್ರೀಗಳ ಪ್ರಕರಣದಲ್ಲಿ ಸರ್ಕಾರ ಯಾವುದೇ ರೀತಿಯಲ್ಲೂ ಹಸ್ತಕ್ಷೇಪ ನಡೆಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳ ಪ್ರಕರಣ ವಿಚಾರವಾಗಿ ಸದ್ಯ ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿಗೆ ಏನನ್ನು ಹೇಳುವುದಿಲ್ಲ. ಮುರುಘಾ ಮಠಕ್ಕೆ ಸೂಕ್ತ ಬಂದೋಬಸ್ತ್‌ ಕಲ್ಪಿಸಲಾಗಿದೆ. 

ಭದ್ರತೆಗೆ 7 ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ ಎಂದು ತಿಳಿಸಿದರು. ಸೆ.8ರಂದು ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮ ನಡೆಯಲಿದೆ. ಬಿಜೆಪಿ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಪ್ರಧಾನಿಯಾಗಿ ಏನು ಕೆಲಸ ಮಾಡಬೇಕೋ ಅದನ್ನು ಮೋದಿ ಮಾಡುತ್ತಾರೆ. ಪ್ರಧಾನಿ ಕುರಿತಾಗಿ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ಸರಿಯಲ್ಲ. ಮಳೆ ಹಾನಿಗೆ ಸರ್ಕಾರ ಏನೇನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಂಡಿದೆ ಎಂದು ತಿರುಗೇಟು ನೀಡಿದರು.

ಮುರುಘಾ ಶ್ರೀ ಬಂಧಿಸಲು ವಿಳಂಬವೇಕೆ? ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಿಷ್ಟು!

ಎನ್‌ಐಎಗೆ ಪ್ರೇಮ್‌ ಸಿಂಗ್‌ ಪ್ರಕರಣ: ಶಿವಮೊಗ್ಗದ ಪ್ರೇಮ್‌ ಸಿಂಗ್‌ಗೆ ಚೂರಿ ಇರಿತ ಪ್ರಕರಣದ ಪ್ರಮುಖ ಆರೋಪಿ ಜಬೀವುಲ್ಲಾ ಎಂಬಾತನಿಗೆ ಇರುವ ಲಿಂಕ್‌ ಭಯಾನಕವಾಗಿದೆ. ಭಯೋತ್ಪಾದಕರ ಜೊತೆ ಸಂಬಂಧ ಇರುವುದು ಬಹಿರಂಗವಾಗುತ್ತಿದೆ. ಸದ್ಯದಲ್ಲೇ ಈ ಪ್ರಕರಣವನ್ನು ಎನ್‌.ಐ.ಎ.ಗೆ ಹಸ್ತಾಂತರ ಮಾಡಲಾಗುತ್ತಿದೆ. ಶಿವಮೊಗ್ಗ ಸಂಪೂರ್ಣ ಶಾಂತಿಯುತವಾಗಿದೆ. ಆಗಾಗ ಆಕಸ್ಮಿಕ ಘಟನೆಗಳು ನಡೆಯುತ್ತವೆ ಅಷ್ಟೇ. ಟೆರರಿಸ್ಟ್‌ ಜೊತೆ ಲಿಂಕ್‌ ಇದ್ದವರೊಂದಿಗೆ ಶಾಂತಿ ನಡಿಗೆ ನಡೆಸಲಿ ಎಂದು ಶಿವಮೊಗ್ಗದಲ್ಲಿ ಶಾಂತಿಗಾಗಿ ಕಾಲ್ನಡಿಗೆ ಜಾಥಾ ಕುರಿತು ಪ್ರತಿಕ್ರಿಯೆ ನೀಡಿದರು.

ಸಚಿವ ಆರಗ ಬಿಡಿಎ ಸೈಟ್‌ ವಾಪಸ್‌: ನಿಯಮ ಉಲ್ಲಂಘಿಸಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಬೆಂಗಳೂರಿನ ಆರ್‌ಎಂವಿ ಬಡಾವಣೆಯಲ್ಲಿ ಹಂಚಿಕೆ ಮಾಡಿರುವ ನಿವೇಶನವನ್ನು ವಾಪಸ್‌ ಪಡೆಯುತ್ತೇವೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ತಿಳಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬದಲಿ ನಿವೇಶನ ಕೊಡುವಾಗ ಅದೇ ಬಡಾವಣೆ ಅಥವಾ ತದ ನಂತರದ ಬಡಾವಣೆಯಲ್ಲಿ ಕೊಡಬೇಕು ಎಂಬ ನಿಯಮವಿದೆ. ಆದರೆ, ಅರಗ ಜ್ಞಾನೇಂದ್ರ ಅವರಿಗೆ ಎಚ್‌ಎಸ್‌ಆರ್‌ ಲೇಔಟ್‌ಗಿಂತ ಮೊದಲೇ ನಿರ್ಮಾಣವಾದ ಆರ್‌ಎಂವಿ ಬಡಾವಣೆಯಲ್ಲಿ ನಿವೇಶನ ಕೊಟ್ಟಿರುವುದು ಸರಿಯಲ್ಲ ಎಂದು ನಿಯಮ ಸ್ಪಷ್ಟಪಡಿಸಿದೆ. ಹೀಗಾಗಿ ಸುಪ್ರೀಂ ಕೋರ್ಚ್‌ ಆದೇಶ ಕೊಟ್ಟಿದೆ. ಕೋರ್ಚ್‌ ಆದೇಶ ಪರಿಪಾಲಿಸುತ್ತೇವೆ’ ಎಂದರು.

ರಾಷ್ಟ್ರಧ್ವಜ ಎಲ್ಲರಿಗೆ ಸೇರಿದ್ದು​​​​​​: ಗೃಹ ಸಚಿವ ಆರಗ ಜ್ಞಾನೇಂದ್ರ

ಕೋರ್ಟಿಗೆ ಹೋಗುವೆ- ಸಚಿವ: ಬಿಡಿಎನಿಂದ ನಿವೇಶನ ಮಂಜೂರಾತಿಗಾಗಿ ಯಾವುದೇ ಪ್ರಭಾವ ಅಥವಾ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ. ‘ನನಗೆ 17 ವರ್ಷಗಳ ಹಿಂದೆ ಮಂಜೂರಾಗಿದ್ದ ನಿವೇಶವನ್ನು ಸಕಾರಣವಿಲ್ಲದೆ ಬಿಡಿಎ ಹಿಂಪಡೆದಿದೆ. ಆದರೆ ಆ ನಿವೇಶನಕ್ಕೆ ಮೂರು ನೊಂದಣಿ ಸಂಬಂಧ ಶುಲ್ಕ ಪಾವತಿಸಿದ್ದರೂ ಮತ್ತೆ ಮಂಜೂರು ಮಾಡಿಲ್ಲ’ ಎಂದು ಹೇಳಿದ್ದಾರೆ. ಬಿಡಿಎ ನಿಂದ ನ್ಯಾಯ ಪಡೆಯಲು ನ್ಯಾಯಾಲಯದ ಮೊರೆ ಹೋಗಲು ಸಹ ನಿರ್ಧರಿಸಿದ್ದೇನೆ ಎಂದು ಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!