
ಆತ್ಮಭೂಷಣ್
ಮಂಗಳೂರು (ಡಿ.14): ಜನಸಂಖ್ಯಾ ನಿಯಂತ್ರಣ ಸಲುವಾಗಿ ಇತ್ತೀಚೆಗೆ ಮುಖ್ಯಮಂತ್ರಿಗಳು ಧಾರವಾಡದ ನವಲಗುಂದದಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ‘ಒಂದು ಅಥವಾ ಎರಡು ಮಕ್ಕಳನ್ನು ಮಾತ್ರ ಮಾಡಿಕೊಳ್ಳಿ’ ಎಂದು ನವ ದಂಪತಿಗಳಿಗೆ ಸಲಹೆ ನೀಡಿದ್ದರು. ಆದರೆ ಈಗಾಗಲೇ ಈ ಸಲಹೆ ಪಾಲಿಸುತ್ತಿರುವ ಉನ್ನತ ಶಿಕ್ಷಣ ನೌಕರರಿಗೆ ಸೌಲಭ್ಯಕ್ಕೇ ಕತ್ತರಿ ಹಾಕಲಾಗಿದೆ.
ಉನ್ನತ ಶಿಕ್ಷಣ ಇಲಾಖೆಯಲ್ಲಿ ಸರ್ಕಾರಿ ನೌಕರರು ವ್ಯಾಸೆಕ್ಟಮಿ ಹಾಗೂ ಟ್ಯುಬೋಕ್ಟ್ಯಮಿ ಯಂತಹ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾದರೆ ಅವರಿಗೆ ಪ್ರತ್ಯೇಕ ಸೌಲಭ್ಯ ನೀಡುವುದು ಕ್ರಮ. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿದವರಿಗೆ ಶೇ. 3 ರಷ್ಟು ಸಣ್ಣ ಕುಟುಂಬ ನಿಯಂತ್ರಣ ಭತ್ಯೆ/ವಿಶೇಷ ವೇತನ ಬಡ್ತಿಯನ್ನು ನೀಡಲಾಗುತ್ತಿತ್ತು. ಆದರೆ ಕಳೆದ 9 ವರ್ಷಗಳಿಂದ ಈ ಸೌಲಭ್ಯಕ್ಕೆ ಕೊಕ್ಕೆ ಹಾಕಲಾಗಿದೆ.
ಉನ್ನತ ಶಿಕ್ಷಣ ನೌಕರರಲ್ಲಿ ಯುಜಿಸಿ ವೇತನ ಪಡೆಯುವವರೂ ಇದ್ದಾರೆ. ಇವರೆಲ್ಲರಿಗೆ 2015ರ ವರೆಗೆ ಈ ಪ್ರತ್ಯೇಕ ಸೌಲಭ್ಯ ನೀಡಲಾಗುತ್ತಿತ್ತು. ಹೀಗಾಗಿಯೇ ಅನೇಕ ಮಂದಿ ಪುರುಷ ಹಾಗೂ ಮಹಿಳಾ ನೌಕರರು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸೌಲಭ್ಯ ಪಡೆದುಕೊಂಡಿದ್ದರು. ಸಣ್ಣ ಕುಟುಂಬ ನಿಯಂತ್ರಣ ಭತ್ಯೆ/ವಿಶೇಷ ವೇತನ ಬಡ್ತಿಯನ್ನು ನಿಯಮಿತವಾಗಿ ಪಡೆದುಕೊಳ್ಳುತ್ತಿದ್ದರು.
ಗೊಂದಲ ಮಾಡಿಕೊಂಡ ಇಲಾಖೆ: 2015ರ ವರೆಗೂ ನಿಯಮಿತವಾಗಿ ಈ ಪ್ರತ್ಯೇಕ ಸೌಲಭ್ಯವನ್ನು ನೀಡುತ್ತಿದ್ದ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು 2016ರಲ್ಲಿ ಏಕಾಏಕಿ ಗೊಂದಲಕ್ಕೆ ಬಿದ್ದಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ಅಧ್ಯಾಪಕರಿಗೆ ಹೇಗೆ ಜಾರಿಗೊಳಿಸಬೇಕು ಎಂದು ಬೆಂಗಳೂರಿನ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಿಂದ ರಾಜ್ಯದ ಎಲ್ಲ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರುಗಳಿಗೆ ಪತ್ರ ಬರೆದು ಮಾಹಿತಿ ಕೇಳಿದ್ದಾರೆ.
ಹಾಲಿ ಜಾರಿಯಲ್ಲಿರುವ ಯುಜಿಸಿ ನಿಯಮಗಳಲ್ಲಿ ನೀಡಿರುವ ಸೂಚನೆಯ ಅನ್ವಯ ಜಾರಿಗೊಳಿಸಬೇಕೇ ಅಥವಾ ಕೇಂದ್ರ ಸರ್ಕಾರಿ ನೌಕರರಿಗೆ ಮಂಜೂರು ಮಾಡುವ ಸಣ್ಣ ಕುಟುಂಬ ವಿಶೇಷ ವೇತನ ಬಡ್ತಿಯ ದರಗಳಲ್ಲಿ ಮಂಜೂರು ಮಾಡಬೇಕೇ ಅಥವಾ ಈ ಹಿಂದೆ ಇಲಾಖೆಯಲ್ಲಿ ಈ ಭತ್ಯೆಯನ್ನು ಮಂಜೂರು ಮಾಡುತ್ತಿರುವ ಕ್ರಮವನ್ನು ಮುಂದುವರಿಸಬೇಕೇ ಎಂದು ಸರ್ಕಾರದ ಮಾರ್ಗದರ್ಶನ ಕೋರಲಾಗಿದೆ. ಈ ಬಗ್ಗೆ ಇಲಾಖಾ ಅಧಿಕಾರಿಗಳು 2022ರಲ್ಲಿ ರಾಜ್ಯದ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರುಗಳಿಗೆ ಪತ್ರ ಬರೆದು ಕೋರಿದ್ದರು. ಅಲ್ಲದೆ ಈ ಕುರಿತು ಸಿಬ್ಬಂದಿ ಮನವಿ ಪತ್ರ ಹಾಗೂ ಅಫಿದವಿತ್ ಸಲ್ಲಿಸುವಂತೆಯೂ ಸೂಚಿಸಿದ್ದರು.
ಸಣ್ಣ ಕುಟುಂಬ ನಿಯಂತ್ರಣ ಭತ್ಯೆ/ವಿಶೇಷ ವೇತನ ಬಡ್ತಿಯನ್ನು ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದೆ. ಕಳೆದ ಒಂಭತ್ತು ವರ್ಷಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಇನ್ನೂ ಫಲ ಸಿಕ್ಕಿಲ್ಲ. ಯುಜಿಸಿ ನಿಯಮಾವಳಿಯಲ್ಲಿ ಕೂಡ ವಿಶೇಷ ಸೌಲ್ಯ ನೀಡುವಂತೆ ಸೂಚನೆ ಇದ್ದರೂ ಇಲಾಖೆಯಿಂದ ಪಾಲನೆಯಾಗುತ್ತಿಲ್ಲ. ಈ ಬಗ್ಗೆ ಸೂಕ್ತ ದಾಖಲೆಗಳನ್ನು ನೀಡಿ ಸರ್ಕಾರಕ್ಕೆ ಮನವಿ ಮಾಡಿದರೂ ನಿರಾಕರಿಸಲಾಗುತ್ತಿದೆ. ಆದರೆ ಸರ್ಕಾರದ ಇತರೆ ಇಲಾಖೆಗಳಲ್ಲಿ ಈ ಬಡ್ತಿ ಅಥವಾ ಭತ್ಯೆಯನ್ನು ನೀಡುವುದರಲ್ಲಿ ಯಾವುದೇ ತೊಂದರೆಯಾಗಿಲ್ಲ ಎಂದು ನೊಂದ ನೌಕರರು ಹೇಳುತ್ತಿದ್ದಾರೆ.
ಸರ್ಕಾರದ ಮಾರ್ಗದರ್ಶನ ಪಡೆಯುವಂತೆ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪತ್ರ ಬರೆದು ವರ್ಷಗಳೇ ಕಳೆದರೂ ಉತ್ತರ ಪಡೆಯದೇ, ಇತ್ತ ಬಡ್ತಿಯನ್ನೂ ನೀಡದೆ ಕಾಲ ಹರಣ ಮಾಡಲಾಗುತ್ತಿದೆ.
-ನೊಂದ ನೌಕರರು, ಬೆಂಗಳೂರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ