
ಬೆಂಗಳೂರು (ಜ.12): ರಾಜ್ಯದಲ್ಲಿ ಇತ್ತೀಚೆಗೆ ನಡೆದ ಬೆಳಗಾವಿಯ ವಿಧಾನಸಭಾ ಅಧಿವೇಶನದ ಕೊನೆಯ ದಿನ ಸರ್ಕಾರದಿಂದ ಘೋಷಣೆ ಮಾಡಲಾಗಿದ್ದ ಲಿಂಗಾಯತ, ಪಂಚಮಸಾಲಿ ಮೀಸಲಾತಿಯನ್ನು ಹೈಕೋರ್ಟ್ ತಡೆಹಿಡಿದಿದೆ. ಈ ಮೂಲಕ ಮೀಸಲಾತಿಯ ಆಸೆ ಕಂಡವರಿಗೆ ಭಾರಿ ಶಾಕ್ ಉಂಟಾಗಿದೆ.
ರಾಜ್ಯದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಕಳೆದ ಎರಡು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಸರ್ಕಾರದ ಅಧಿಕಾರ ಇನ್ನು ಮೂರು ತಿಂಗಳಲ್ಲಿ ಮುಕ್ತಾಯ ಆಗಲಿದ್ದು, ಈ ಸರ್ಕಾರದ ಅವಧಿಯಲ್ಲಿಯೇ ಮೀಸಲಾತಿ ಒಡೆಯುವ ನಿಟ್ಟಿನಲ್ಲಿ ದೊಡ್ಡ ಮಟ್ಟದ ಹೋರಾಟ ಆರಂಭಿಸಲಾಗಿತ್ತು. ಇದಕ್ಕೆ ಮಣಿದಿದ್ದ ಸರ್ಕಾರ ಬೆಳಗಾವಿ ಅಧಿವೇಶನದ ಕೊನೆಯ ದಿನ ಸಚಿವ ಸಂಪುಟದಲ್ಲಿ ಚರ್ಚಿಸಿ ಲಿಂಗಾಯತ, ಒಕ್ಕಲಿಗ ಮತ್ತು ಪಂಚಮಸಾಲಿ ಸಮುದಾಯಕ್ಕೆ ಪ್ರತ್ಯೇಕ ಪ್ರವರ್ಗವನ್ನು ಸೃಷ್ಟಿಸಿ ಮೀಸಲಾತಿ ನೀಡಲು ಮುಂದಾಗಿತ್ತು. ಆದರೆ, ಈ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಸರ್ಕಾರದ ಪರಿಷ್ಕೃತ ಮೀಸಲಾತಿ ನೀತಿ: ಸರ್ಕಾರದ ವಿರುದ್ಧ ಬ್ರಾಹ್ಮಣರ ಆಕ್ರೋಶ
ರಾಜ್ಯ ಸರ್ಕಾರ ಮುಂಬರುವ ಚುನಾವಣೆಯಲ್ಲಿ ದೊಡ್ಡ ಸಮುದಾಯಗಳ ಮತಗಳನ್ನು ಪಡೆಯುವ ಉದ್ದೇಶದಿಂದ ಮೀಸಲಾತಿಯನ್ನು ನೀಡಲು ಮುಂದಾಗಿತ್ತು. ಪ್ರವರ್ಗ 3ರಲ್ಲಿ ಇದ್ದ ಒಕ್ಕಲಿಗ ಮತ್ತು ಪಂಚಮಸಾಲಿ ಸಮುದಾಯಗಳನ್ನು ಪ್ರವರ್ಗ 2ಕ್ಕೆ ತರಲು ನಿರ್ಧರಿಸಲಾಗಿತ್ತು. ಆದರೆ, 2ಎ ಪ್ರವರ್ಗದಲ್ಲಿ ಈಗಾಗಲೇ ಕುರುಬ ಸಮುದಾಯ ಸೇರಿ ಹಲವು ಸಮುದಾಯಗಳು ಇರುವ ಹಿನ್ನೆಲೆಯಲ್ಲಿ ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿಗೆ ಸೇರಿಸಲು ವಿರೋಧ ವ್ಯಕ್ತವಾಗಿತ್ತು. ಈ ಎಲ್ಲ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರವರ್ಗ 2ರಲ್ಲಿ ಹೊಸದಾಗಿ 2ಸಿ ಮತ್ತು 2ಡಿ ಪ್ರವರ್ಗಗಳನ್ನು ಸೃಷ್ಟಿಸಿ ಆದೇಶ ಹೊರಡಿಸಿತ್ತು. ಈಗ ಹೈಕೋರ್ಟ್ ಇದಕ್ಕೆ ತಡೆ ಒಡ್ಡಿದ್ದು, ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಮಾಡದಂತೆ ಸೂಚನೆ ನಿಡಿದೆ.
ಸದ್ಯ ಜಾರಿಯಾಗಲ್ಲ ಹೊಸ ಮೀಸಲಾತಿ: ಒಕ್ಕಲಿಗ , ಲಿಂಗಾಯತರಿಗೆ 2ಡಿ, 2ಸಿ ಮೀಸಲಾತಿ ವಿಚಾರವಾಗಿ ಹೊಸ ಮೀಸಲಾತಿ ಪ್ರವರ್ಗಕ್ಕೆ ಹೈಕೋರ್ಟ್ ತಡೆ ನೀಡಿರುವ ಹಿನ್ನೆಲೆಯಲ್ಲಿ ಹೊಸ ಮೀಸಲಾತಿ ಸದ್ಯಕ್ಕೆ ಜಾರಿಯಾಗುವುದಿಲ್ಲ. ಹೊಸ ಪ್ರವರ್ಗ ಸೃಷ್ಟಿಗೆ ಸಂಪುಟದಲ್ಲಿ ಒಪ್ಪಿಗೆ ದೊರಕಿತ್ತು. ಮೀಸಲಾತಿ ಜಾರಿ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದ ವಿಚಾರಣೆಯನ್ನು ನಡೆಸಿದ ಹೈಕೋರ್ಟ್ ಇದೀಗ ಮೀಸಲಾತಿ ಪ್ರವರ್ಗಕ್ಕೆ ತಡೆ ನೀಡಿದೆ.
Balija Community 2A Reservation: 2ಎ ಮೀಸಲಾತಿಗೆ ಈಗ ಬಲಿಜರ ಪಟ್ಟು..!
ಮುಖ್ಯ ನ್ಯಾಯಮೂರ್ತಿ ಗಳ ಪೀಠದಿಂದ ಆದೇಶ: ಬೆಂಗಳೂರಿನ ಡಿ.ಜಿ.ರಾಘವೇಂದ್ರ ಎಂಬುವರು ಮೀಸಲಾತಿಗೆ ಸೃಷ್ಟಿಸಲಾಗಿದ್ದ ಹೊಸ ಪ್ರವರ್ಗಗಳ ಬಗ್ಗೆ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. 2ಎ ಗೆ ಪಂಚಮಸಾಲಿ ಯವರನ್ನ ಪರಿಗಣಿಸದಂತೆ ಸರ್ಕಾರಕ್ಕೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಆದರೆ, ಹಿಂದೂಳಿದ ವರ್ಗಗ ಆಯೋಗ ಮಧ್ಯಂತರ ಅರ್ಜಿ ಸಲ್ಲಿಸಿ ಪಂಚಮಸಾಲಿ ವರ್ಗವನ್ನ ಹಿಂದುಳಿದ ವರ್ಗಗಳಿಗೆ ಸೇರಿಸಲು ಶಿಫಾರಸು ಮಾಡಿತ್ತು. ಹಿಂದೂಳಿದ ಆಯೋಗದ ಮಧ್ಯಂತರ ಪ್ರಶ್ನಿಸಿದ್ದ ಅರ್ಜಿದಾರರ ಪರವಾಗಿ ರವಿವರ್ಮಾಕುಮಾರ್ ವಾದಿಸಿದರು. ವಾದ ಆಲಿಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಗಳ ಪೀಠ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚನೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ