Karnataka rains: ರಾಜ್ಯದ ಈ 7ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರೀ ಮಳೆ! ಈ ಪಟ್ಟಿಯಲ್ಲಿ ನಿಮ್ಮ ಜಿಲ್ಲೆ ಇದೆಯಾ?

Kannadaprabha News   | Kannada Prabha
Published : May 15, 2026, 07:08 AM IST
Heavy rains in more than 7 districts of the state! Is your district on this list?

ಸಾರಾಂಶ

ರಾಜ್ಯದ ಏಳಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ದಾವಣಗೆರೆ ಮತ್ತು ಉಡುಪಿಯಲ್ಲಿ ಸಿಡಿಲು ಬಡಿದು ಕುರಿಗಾಯಿ ಹಾಗೂ ಕಾರ್ಮಿಕ ಮೃತಪಟ್ಟಿದ್ದಾರೆ. ಮಂಗಳೂರಿನಲ್ಲಿ ಧಾರಾಕಾರ ಮಳೆಯಿಂದಾಗಿ ವಿಮಾನ ಹಾರಾಟಕ್ಕೂ ಅಡ್ಡಿಯುಂಟಾಗಿದೆ.

ಬೆಂಗಳೂರು (ಮೇ.15): ರಾಜ್ಯದ ಏಳಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗುರುವಾರ ಮಳೆಯ ರೌದ್ರಾವತಾರವಾಗಿದೆ. ಗಾಳಿ, ಸಿಡಿಲು, ಗುಡುಗು ಸಮೇತ ಧಾರಾಕಾರವಾಗಿ ಮಳೆ ಸುರಿದಿದೆ. ರಕ್ಷಣೆ ಪಡೆಯಲು ಮರದಡಿ ನಿಂತಿದ್ದಾಗ ಸಿಡಿಲು ಬಡಿದು ಕುರಿಗಾಯಿ ಮೃತಪಟ್ಟಿದ್ದಾನೆ. ಸೇತುವೆ ಕಾಮಗಾರಿ ವೇಳೆ ಸಿಡಿಲು ಬಡಿದು ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದು, ಮತ್ತೊಬ್ಬ ಗಾಯಗೊಂಡಿದ್ದಾನೆ. ಇನ್ನು ಮಂಗಳೂರು ನಗರ ಮಳೆ ನೀರಿನಲ್ಲಿ ತೊಯ್ದು ಹೋಗಿದ್ದು, ವಿಮಾನ ಕಾರ್ಯಾಚರಣೆ ಅಡಚಣೆ ಆಗಿತ್ತು. ಉಡುಪಿ, ಯಾದಗಿರಿ, ಹಾವೇರಿ, ಕೊಡಗು, ಶಿವಮೊಗ್ಗ, ದಾವಣಗೆರೆ, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ವಿವಿಧೆಡೆ ಮಳೆ ಸುರಿದಿದೆ. ಮುಂದಿನ ಮೂರು ದಿನ ದಕ್ಷಿಣ ಕನ್ನಡ ಜಿಲ್ಲೆಗೆ ಮಳೆ ಮುನ್ಸೂಚನೆ ನೀಡಲಾಗಿದೆ. ಕಂಬಗಳು, ಮರಗಳು ಮುರಿದು ಬಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ.

ದಾವಣಗೆರೆ ಜಿಲ್ಲೆಯ ಮುದಹದಡಿ ಗ್ರಾಮದಲ್ಲಿ ಕುರಿಗಾಯಿ, ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮರಡಿ ಗ್ರಾಮದ ನಿವಾಸಿ ಅಜಯ್ ದುಂಡಪ್ಪ ಬಿ.ಗವನಾಳ (19) ಮೃತಪಟ್ಟಿದ್ದಾರೆ. ಕುರಿಗಳೊಂದಿಗೆ ವಲಸೆ ಬಂದಿದ್ದ ದುಂಡಪ್ಪ ಕುಟುಂಬವು ಮುದಹದಡಿ ಗ್ರಾಮದಲ್ಲಿ ಬೀಡುಬಿಟ್ಟಿತ್ತು. ಮಳೆ ಆರಂಭವಾದಾಗ ಅಜಯ್ ರಕ್ಷಣೆ ಪಡೆಯಲು ಮರದಡಿ ನಿಂತಿದ್ದರು. ಈ ಸಂದರ್ಭದಲ್ಲಿ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇನ್ನು ಉಡುಪಿ ಜಿಲ್ಲೆ ಕುಂದಾಪುರ ಬಳಿ ರಾಷ್ಟ್ರೀಯ ಹೆದ್ದಾರಿ-66ರ ಅರಾಟೆ ಸೇತುವೆ ದುರಸ್ತಿ ವೇಳೆ ಸಿಡಿಲು ಬಡಿದು ಪಂಜಾಬ್ ಮೂಲದ ಕಾರ್ಮಿಕ ಅಶುತೋಷ್ (35) ಮೃತಪಟ್ಟಿದ್ದಾರೆ. ಲವಜೋತ್ ಸಿಂಗ್(28) ಗಾಯಗೊಂಡಿದ್ದಾರೆ.

ಇನ್ನು ಯಾದಗಿರಿ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆ ಆಗಿದೆ. ಯಾದಗಿರಿ, ಶಹಾಪುರ ಹಾಗೂ ಸಗರದಲ್ಲಿ ಜನಜೀವನ ಅಸ್ತವ್ಯಸ್ತ ಆಯಿತು. ಕಚ್ಚಾ ಮನೆಗಳಲ್ಲಿನ ಟಿನ್‌ ಶೆಡ್‌ಗಳು ಹಾರಿಹೋದರೆ, ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ಜಲಾವೃತದ ಭೀತಿ ಎದುರಾಗಿತ್ತು.

ಮರ ತೆರವು ಮಾಡಿದ ಎನ್‌ಸಿಸಿ:

ಕೊಡಗು ಜಿಲ್ಲೆಯ ವಿರಾಜಪೇಟೆ–ಮೂರ್ನಾಡು ಮುಖ್ಯ ರಸ್ತೆಗೆ ಮರ ಬಿದ್ದು ಅರ್ಧ ಗಂಟೆ ವಾಹನ ಸಂಚಾರ ನಿಂತಿತ್ತು. ತರಬೇತಿ ಮುಗಿಸಿ ಬರುತ್ತಿದ್ದ ಕಾವೇರಿ ಕಾಲೇಜಿನ ಎನ್‌ಸಿಸಿ ಘಟಕದ ಕೆಡೆಟ್‌ಗಳು ಬಿದ್ದ ಮರಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಆಯಕಟ್ಟಿನ ಸ್ಥಳಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ 2-3 ಅಡಿ ನೀರು ನಿಂತು ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಭಾರಿ ಮಳೆಯ ಕಾರಣ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟಕ್ಕೂ ತೊಂದರೆ ಉಂಟಾಗಿತ್ತು. ಬೆಂಗಳೂರಿನಿಂದ ಆಗಮಿಸಿದ ಎರಡು ವಿಮಾನಗಳು ವಾತಾವರಣ ವೈಪರೀತ್ಯದಿಂದ ತಡವಾಗಿ ಇಳಿದವು.

==

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪೋಕ್ಸೋ ಪ್ರಕರಣದಲ್ಲಿ ವಚನ ಶ್ರೀಗೆ 5 ಗಂಟೆಗಳ ವಿಚಾರಣೆ; ಬಳಿಕ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಏನಾಯಿತು?
ಮಕ್ಕಳು ಕೇಸರಿ ಶಾಲು ಹಾಕಬೇಕು ಎನ್ನುವ ಬಿಜೆಪಿಗರು ತಮ್ಮ ಮಕ್ಕಳಿಗೇಕೆ ಹಾಕ್ಸಲ್ಲ? ಮಧು ಬಂಗಾರಪ್ಪ ಕಿಡಿ