ಬೆಂಗಳೂರು (ಜು.18): ರಾಜ್ಯದಲ್ಲಿ ಮುಂಗಾರು ಕೆಲ ದಿನ ತಡವಾಗಿ ಬಂದು ಇದೀಗ ಅಬ್ಬರಿಸಲು ಶುರುವಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ.
ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಹಲವೆಡೆ ಗುಡುಗು ಸಹಿತ ಮಳೆಯಾಗುತ್ತಿದೆ.
ಚಾಮರಾಜನಗರ : ಬೆಳ್ಳಂಬೆಳಿಗ್ಗೆ ಧಾರಾಕಾರ ಮಳೆಯಾಗಿದ್ದು, ಬಿಟ್ಟು ಬಿಡದೆ ಸುರಿಯುತ್ತಿದೆ. ದೈನಂದಿನ ಕೆಲಸಕಾರ್ಯಗಳಿಗೆ ಮನೆಯಿಂದ ಹೊರಬರಲು ವರುಣನ ಅಡ್ಡಿಯಾಗುತ್ತಿದ್ದಾನೆ. ಜಿಲ್ಲೆಯಾದ್ಯಂತ ಜಡಿ ಮಳೆಯಾಗುತ್ತಿದ್ದು, ಗ್ರಾಮೀಣ ಭಾಗದ ಹಲವೆಡೆ ರಸ್ತೆಗಳು ಕೆಸರು ಗದ್ದೆಗಳಂತಾಗಿವೆ. ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.
4 ದಿನ ರಾಜ್ಯದಲ್ಲಿ ಭಾರೀ ಮಳೆ : ಯಾವ ಜಿಲ್ಲೆಗಳಿಗೆ ಅಲರ್ಟ್..?
ಚಿತ್ರದುರ್ಗ: ಇನ್ನು ಇತ್ತ ಚಿತ್ರದುರ್ಗದಲ್ಲಿಯೂ ತಡರಾತ್ರಿ ಸುರಿದ ಮಳೆಗೆ ಜನರು ತತ್ತರಿಸಿದ್ದಾರೆ. ನಗರದ ಗುಮಾಸ್ತ ಕಾಲೋನಿಯಲ್ಲಿ ರಸ್ತೆಗಳು ಜಲಾವೃತವಾಗಿದ್ದು, ತಗ್ಗು ಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿದೆ. ಮನೆಗೆ ನುಗ್ಗಿದ ನೀರನ್ನು ಹೊರ ಹಾಕಲು ಜನ ಹರಸಾಹಸ ಪಡುತ್ತಿದ್ದಾರೆ.
ದಾವಣಗೆರೆ : ರಾತ್ರಿಪೂರ್ತಿ ಮಳೆಯಾಗಿದ್ದು, ವಿಜಯನಗರ ಜಿಲ್ಲೆ ಹರಪನಹಳ್ಳಿ ಸುತ್ತಮುತ್ತ ಭಾರಿ ಮಳೆಯಾಗುತ್ತಿದೆ. ಐದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ನೂರಾರು ಎಕರೆ ಬೆಳೆ ನಾಶವಾಗಿದೆ. ಹರಪನಹಳ್ಳಿ ತಾಲೂಕು ಉಚ್ಚಂಗಿದುರ್ಗ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅವಾಂತರ ಸೃಷ್ಟಿಯಾಗಿದೆ.
ಹರಪನಹಳ್ಳಿ ತಾಲೂಕಿನ ಬೇವಿನಹಳ್ಳಿ ದೊಡ್ಡ ತಾಂಡದಲ್ಲಿ ನೂರಾರು ಎಕರೆ ಬೆಳೆ ಜಲಾವೃತವಾಗಿದೆ. ನೂರಾರು ಎಕರೆ ಮೆಕ್ಕೆಜೋಳ, ಅಡಿಕೆ, ಚೆಂಡು ಹೂವಿನ ಬೆಳೆ ಮಳೆ ನೀರಲ್ಲಿ ಮುಳುಗಿದೆ.
ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಚಳ್ಳಕೆರೆ, ಹೊಸದುರ್ಗ ತಾಲೂಕುಗಳಲ್ಲಿ, ಚೆಕ್ ಡ್ಯಾಂ, ಕೆರೆ ಕಟ್ಟೆಗಳು ಭರ್ತಿಯಾಗಿವೆ. ಹೊಸದುರ್ಗ ತಾಲೂಕಿನ ಮಾಡದಕೆರೆ ಸುತ್ತಮುತ್ತಲು ಹಳ್ಳಗಳು ತುಂಬಿ ಹರಿಯುತ್ತಿದ್ದು, ಜನರು ಪರದಾಡುವಂತಾಗಿದೆ.
ಕಾಡಜ್ಜಿ ಸಮೀಪದ ಕೆಇಬಿ ಸಬ್ ಸ್ಟೇಷನ್ಗೆ ನೀರು ನುಗ್ಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿ ಸ್ಟೇಷನ್ನಲ್ಲಿದ್ದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಮಳೆಯಿಂದಾಗಿ ಕೆಲ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದೆ. ಹದಡಿ ರೋಡ್ ಅಂಡರ್ ಬ್ರಿಡ್ಜ್ ನೀರಿನಲ್ಲಿ ಕಾರೊಂದು ಸಿಲುಕಿದ್ದು, ಸಾರ್ವಜನಿಕರ ಸಹಾಯದಿಂದ ರಕ್ಷಣೆ ಮಾಡಲಾಗಿದೆ.
ಚಿಕ್ಕಬಳ್ಳಾಪುರ : ಜಿಲ್ಲೆಯಾದ್ಯಂತ ಮಳೆರಾಯನ ಆರ್ಭಟ ಮುಂದುವರಿದಿದೆ. ನಿನ್ನೆ ರಾತ್ರಿ ಸುರಿದ ಮಳೆಯಿಂದ ಹಳ್ಳ, ಕಾಲುವೆಗಳು ತುಂಬಿ ಹರಿಯುತ್ತಿದೆ. ಬಾಗೇಪಲ್ಲಿ ಚಿತ್ರಾವತಿ ನದಿ ಮೂಲದಲ್ಲಿ ನೀರಿನ ಹರಿವು
ಗೌರಿಬಿದನೂರಿನ ಉತ್ತರ ಪಿನಾಕಿನಿ ನದಿ ಕಡೆ ನೀರಿನ ಹರಿವು ಹೆಚ್ಚಾಗಿದೆ.
ವಿಜಯನಗರ : ರಾತ್ರಿ ಪೂರ್ತಿ ಸುರಿದ ಧಾರಾಕಾರ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ನೂರಾರು ಎಕರೆ ಬೆಳೆ ನಾಶವಾಗಿದೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅವಾಂತರ ಸೃಷ್ಟಿಯಾಗಿದೆ. ಹರಪನಹಳ್ಳಿ ತಾಲೂಕಿನ ಬೇವಿನಹಳ್ಳಿ ದೊಡ್ಡ ತಾಂಡದ ಕೃಷ್ಣ ನಾಯ್ಕ ಎಂಬುವರ ಅಡಿಕೆ ತೋಟಕ್ಕೆ ನೀರು ನುಗ್ಗಿದೆ.
ಮೂರು ಎಕರೆ ಅಡಿಕೆ ಗಿಡಗಳು, ಚೆಂಡೂ ಹೂವು ಸಂಪೂರ್ಣ ನೀರಿನಲ್ಲಿ ಮುಳುಗಿವೆ.
ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿಯೂ ವರುಣ ಅಬ್ಬರಿಸುತ್ತಿದ್ದು, ಬೆಳಗ್ಗೆಯಿಂದಲೇ ಸುರಿಯುತ್ತಿರುವ ಭಾರೀ ಮಳೆಯಿಂದ ಭಟ್ಕಳದ ಮಂದಿ ತತ್ತರಿಸಿದ್ದಾರೆ. ಭಟ್ಕಳದ ಸಂಶುದ್ದೀನ್ ಸರ್ಕಲ್ ಸಂಪೂರ್ಣ ಜಲಾವೃತವಾಗಿದೆ. ರಾಷ್ಟ್ರೀಯ ರಸ್ತೆ 66ರಲ್ಲಿ ಭಟ್ಕಳದ ರಂಗಿನ ಕಟ್ಟೆ ಬಳಿ ರಸ್ತೆ ಮೇಲೆಯೇ ನೀರು ನಿಂತಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಚೌಟಾನಿ, ಆಝಾದ್ ನಗರದಲ್ಲಿ ಕಾಂಪೌಂಡ್ ಕುಸಿದಿದ್ದು, ಮನೆಯೊಳಗೆ ನೀರು ನುಗ್ಗಿದೆ.
ಶಿರಾಲಿ ಹೈವೆಯಲ್ಲೂ ಮಳೆ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿದೆ. ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಹಳಿಯಾಳ, ದಾಂಡೇಲಿ, ಜೊಯಿಡಾ, ಯಲ್ಲಾಪುರ, ಶಿರಸಿ, ಮುಂಡಗೋಡದಲ್ಲಿ ಭಾರೀ ಮಳೆಯಾಗುತ್ತಿದೆ.