
ಮಂಡ್ಯ (ಡಿ.16): ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಅವರು ಮಂಡ್ಯದಲ್ಲಿಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ತಮ್ಮನ್ನು ಸ್ವಾಗತಿಸಿದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇಂದು ಮಳವಳ್ಳಿಯಲ್ಲಿ ಸುತ್ತೂರು ಮಠದ ಕಾರ್ಯಕ್ರಮವಿದ್ದು, ರಾಷ್ಟ್ರಪತಿಗಳು ಆಗಮಿಸುತ್ತಿದ್ದಾರೆ. ನನಗೂ ಆಹ್ವಾನವಿದೆ. ಕಾಕತಾಳೀಯವಾಗಿ ಇಂದೇ ನನ್ನ ಜನ್ಮದಿನ ಕೂಡ. ದೆಹಲಿಯಿಂದ ಬಂದ ನಾನು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಿದ್ದೇನೆ. ನಮ್ಮ ಪಕ್ಷದ ಕಾರ್ಯಕರ್ತರು ರಸ್ತೆಯುದ್ದಕ್ಕೂ ಅದ್ದೂರಿಯಾಗಿ ಸ್ವಾಗತಿಸಿ ಶುಭ ಕೋರಿದ್ದಾರೆ, ನಾನು ಅವರಿಗೆ ಚಿರ ಋಣಿಯಾಗಿರುತ್ತೇನೆ' ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಜವಾಬ್ದಾರಿ ಕೊಟ್ಟಿದ್ದು, ನಾಡಿಗೆ ಒಳ್ಳೆಯದಾಗಬೇಕು, ರಾಜ್ಯಕ್ಕೆ ಕೆಲಸ ಆಗಬೇಕು ಎನ್ನುವುದೇ ನನ್ನ ಕರ್ತವ್ಯವಾಗಿದೆ ಎಂದರು.
ಈ ವೇಳೆ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ ವಿಚಾರ ಪ್ರಸ್ತಾಪಿಸಿದ ಕುಮಾರಸ್ವಾಮಿ ಅವರು, ಗೃಹಲಕ್ಷ್ಮಿ ಹಣ ಕೊಡುತ್ತಿದ್ದಾರೋ ಬಿಡುತ್ತಿದ್ದಾರೋ ಗೊತ್ತಿಲ್ಲ. ಆದರೆ, ಸರ್ಕಾರ ಬಂದ ನಂತರ ರಾಜ್ಯದಲ್ಲಿ 2,800 ರೈತರು ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಗೃಹಲಕ್ಷ್ಮಿ ಗ್ಯಾರಂಟಿ ಕೊಟ್ಟು ರೈತರ ಪರಿಸ್ಥಿತಿಯನ್ನು ಎಲ್ಲಿಗೆ ತಂದಿಟ್ಟಿದ್ದಾರೆ? ಸಹಕಾರಿ ಬ್ಯಾಂಕುಗಳಲ್ಲಿ 32 ಲಕ್ಷ ಕುಟುಂಬಕ್ಕೆ 22 ಕೋಟಿ ಸಾಲ ಕೊಡುತ್ತೇವೆ ಎಂದಿದ್ದರು. ಆದರೆ, ಹೊಸದಾಗಿ ಸಾಲ ಕೊಟ್ಟಿಲ್ಲ. ರೈತರ ಪರಿಸ್ಥಿತಿ ಏನಾಗಬೇಕು ಎಂಬುದು ನನ್ನ ಚಿಂತೆ'ಎಂದರು. ಅಲ್ಲದೆ, ಗೃಹಲಕ್ಷ್ಮಿ ಹಣವನ್ನು ಚುನಾವಣಾ ಸಮಯ ಬಂದಾಗ ಒಟ್ಟಿಗೆ ಕೊಡುತ್ತಾರೆ, ಆಗ ಮಾತ್ರ ಜನ ಅವರನ್ನು ನೆನಪಿಟ್ಟುಕೊಳ್ಳುತ್ತಾರೆ ಎಂದು ಲೇವಡಿ ಮಾಡಿದರು.
ತಮ್ಮ ಮೇಲಾಗುವ ಟೀಕೆಗಳ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, 'ನನ್ನ ಮೇಲೆ ನಂಬಿಕೆ ಇಟ್ಟ ವರ್ಗ, ಟೀಕೆ ಮಾಡುವ ವರ್ಗವೂ ಇದೆ. ಆ ಟೀಕೆಗಳಿಗೆ ನಾನು ಸೊಪ್ಪು ಹಾಕಲ್ಲ. ನಾಡಿನ ಜನತೆಯ ನಿರೀಕ್ಷೆಗೆ ತಕ್ಕ ಹಾಗೆ ಕೆಲಸ ಮಾಡುತ್ತೇನೆ ಎಂದರು. ಮಂಡ್ಯ ಶಾಸಕರ ಸವಾಲಿನ ಅಗತ್ಯವಿಲ್ಲ, ನನ್ನ ಕೆಲಸ ಏನು ಅದನ್ನ ನಾನು ಮಾಡುತ್ತೇನೆ. "ಈ ಸರ್ಕಾರಕ್ಕೆ ಅಭಿವೃದ್ಧಿ ಅಂದರೆ ಏನು ಅಂತ ಗೊತ್ತಿಲ್ಲ. ಇವರಿಗೆ ನಾಡಿನ ಜನತೆಯ ತೆರಿಗೆ ಹಣ ಮಾತ್ರ ಗೊತ್ತು. ಲೂಟಿ ಮಾಡುವುದೇ ಅಭಿವೃದ್ಧಿ ಅಂತ ತಿಳಿದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು. ಇದೇ ವೇಳೆ ದ್ವೇಷ ಭಾಷಣದ ವಿಧೇಯಕ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೊದಲು ಪ್ರಧಾನ ಮಂತ್ರಿಗಳ ಮರ್ಡರ್ ಮಾಡಲು ಕಾಂಗ್ರೆಸ್ ಕಾರ್ಯಕರ್ತರು ಕೂಗಿದ್ದಾರೆ, ಮೊದಲು ಅದರ ಮೇಲೆ ಕ್ರಮ ಕೈಗೊಳ್ಳಿ' ಎಂದು ಆಗ್ರಹಿಸಿದರು.
ಬಿಜೆಪಿ ಕಾರ್ಯಕರ್ತನಿಂದ ಹೆಚ್ಡಿಕೆಗೆ 'ಶಿವ ತಾಯತ' ಉಡುಗೊರೆ
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಂಡ್ಯದ ಬಿಜೆಪಿ ಕಾರ್ಯಕರ್ತರು ವಿಶೇಷ ಉಡುಗೊರೆ ನೀಡಿದರು. ಮಂಡ್ಯದ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಅವರು, ಕುಮಾರಸ್ವಾಮಿಯವರ ಆಯುಸ್ಸು, ಆರೋಗ್ಯ ಮತ್ತು ಯಶಸ್ಸಿಗಾಗಿ ದೇವರ ತಾಯತವನ್ನು ತಂದಿದ್ದರು. ಶಿವನಿಗೆ ಪ್ರಿಯವಾದ ರುದ್ರಹೋಮ ಮಾಡಿಸಿ ಈ ತಾಯತವನ್ನು ಸಿದ್ಧಪಡಿಸಲಾಗಿದ್ದು, ಮಂಡ್ಯದ ವಿ.ಸಿ. ಫಾರಂ ಗೇಟ್ ಬಳಿ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಶಿವಕುಮಾರ್ ಆರಾಧ್ಯ ಅವರು ಕುಮಾರಸ್ವಾಮಿ ಅವರ ತೋಳಿಗೆ ಈ ತಾಯತವನ್ನು ಕಟ್ಟಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ