
ಬೆಂಗಳೂರು (ಮೇ.17): ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರು ಬೆಂಗಳೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಡದಿ ಟೌನ್ಶಿಪ್, ರೈತರ ಜಮೀನು, ಬೆಂಗಳೂರು ಸುತ್ತಮುತ್ತಲಿನ ಭೂ ಸ್ವಾಧೀನ ಸೇರಿದಂತೆ ಹಲವು ವಿಚಾರಗಳನ್ನು ಉಲ್ಲೇಖಿಸಿ ಕಿಡಿಕಾರಿದರು.
'ಹಿಂದೆ ದೇವೇಗೌಡರು ಸಭೆಯಲ್ಲಿ ಅಳುತ್ತಿದ್ದರು ಅಂತ ವ್ಯಂಗ್ಯ ಮಾಡ್ತಿದ್ರು. ಆದರೆ ಈಗಿನ ವ್ಯವಸ್ಥೆ ನೋಡಿ ನಾನು ನಗ್ತಾ ಇದ್ದೇನೆ' ದೇವೇಗೌಡರು ತಿರುಗೇಟು ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯರ ಬಗ್ಗೆ ಮಾತನಾಡಿದ ದೇವೇಗೌಡರು, 'ಸಿದ್ದರಾಮಯ್ಯ ನನ್ನ ಸ್ನೇಹಿತ, ನನ್ನ ಕೊಲಿಗ್. ನಾವು ಜೊತೆಯಲ್ಲೇ ಕೆಲಸ ಮಾಡ್ತಿದ್ವಿ. ನಿಮ್ಮ ಸಾಮಾಜಿಕ ನ್ಯಾಯದ ಮಾತಿನ ಬಗ್ಗೆ ನನಗೂ ಅರಿವಿದೆ ಎಂದರು. ಇದೇ ವೇಳೆ, 'ಬೆಂಗಳೂರು ಹೊಣೆಗಾರಿಕೆ ಹೊತ್ತಿರುವವರ ಒತ್ತಡಕ್ಕೆ ಮಣಿದು ಜನ ಸಾಮಾನ್ಯರ ಅನ್ಯಾಯ ತಡೆಗಟ್ಟಲು ಆಗ್ತಿಲ್ವಾ?' ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿಗೆ ಬೇರೆ ಕೆಲಸ ಇಲ್ಲ ಅಂತ ಹೇಳ್ತಾರೆ!
ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಕುರಿತು ಡಿಕೆಶಿ ಹೇಳಿಕೆ ಬಗ್ಗೆ ಉಲ್ಲೇಖಿಸಿದ ತಿರುಗೇಟು ನೀಡಿದ ದೇವೇಗೌಡರು, ಕುಮಾರಸ್ವಾಮಿ ಕೇಂದ್ರದ ಮಂತ್ರಿ ಆಗಿದ್ದಾರೆ. ನಾನು ಇಂಗ್ಲಿಷ್ ಪೇಪರ್ ನೋಡ್ದೆ. ಕುಮಾರಸ್ವಾಮಿಗೆ ಮಾಡೋಕೆ ಬೇರೆ ಕೆಲ್ಸ ಇಲ್ಲ.. ಕುಮಾರಸ್ವಾಮಿ ಮಾಡಿದ ಬಿಡದಿ ಟೌನ್ ಶಿಪ್ ನಾನು ಮಾಡ್ತಾ ಇದೀನಿ ಅಂತ ( ಡಿ.ಕೆ ಶಿವಕುಮಾರ್ ) ಹೇಳಿದ್ದಾರೆ ಎನ್ನುತ್ತಾ ಡಿಕೆ ಶಿವಕುಮಾರ ಹೇಳಿಕೆಯನ್ನ ಪೇಪರ್ನಲ್ಲಿ ಓದಿದೆ ಎಂದು ದೇವೇಗೌಡರು ವ್ಯಂಗ್ಯ ಮಾಡಿದರು.
ರಾಮನಗರಕ್ಕೆ ಹೆಚ್ಚಿನ ಯೋಜನೆ ಕೊಟ್ಟಿದ್ದೇವೆ
'1994ರಲ್ಲಿ ರಾಮನಗರದಲ್ಲಿ ಗೆದ್ದು ಸಾಕಷ್ಟು ಯೋಜನೆ ಕೊಟ್ಟಿದ್ದೆವು. ನೀರಾವರಿ ಸೇರಿ ಹೆಚ್ಚು ಯೋಜನೆ ರಾಮನಗರ ಜಿಲ್ಲೆಗೆ ಕೊಟ್ಟಿದ್ದೆವು. ಆ ಕಾಲದಲ್ಲೇ ಕುಮಾರಸ್ವಾಮಿ 250 ಕೋಟಿ ಇಟ್ಟು ನೀರಾವರಿ ಯೋಜನೆ ಅನುಕೂಲ ಆಗುವ ರೀತಿಯಲ್ಲಿ ಮಾಡಿದ್ದಾರೆ' ಎಂದು ನೆನಪಿಸಿದರು.
ಕುಮಾರಸ್ವಾಮಿ ಹಿಂದೆ ಬಿಡದಿ ಟೌನ್ಶಿಪ್ ಮಾಡಿದಾಗ ಏನಾಯ್ತು?
ಬೆಂಗಳೂರು ವಾಹನ ದಟ್ಟಣೆ ಕಡಿಮೆ ಮಾಡಬೇಕೆಂದು ಕುಮಾರಸ್ವಾಮಿ ಐದು ಟೌನ್ಶಿಪ್ ಮಾಡಲು ತೀರ್ಮಾನ ಮಾಡಿದ್ದರು. ಮಾಗಡಿ, ಹೊಸಕೋಟೆ ಸೇರಿದಂತೆ ಬೆಂಗಳೂರು ಅಕ್ಕಪಕ್ಕದಲ್ಲಿ ಟೌನ್ಶಿಪ್ ಮಾಡಲು ಮುಂದಾದರು. ಬಿಡದಿ ಟೌನ್ಶಿಪ್ಗೆ 400 ಕೋಟಿ ರೂಪಾಯಿ ಡೆಪಾಸಿಟ್ ಕೂಡ ಮಾಡಲಾಗಿತ್ತು. ಪ್ರಾಜೆಕ್ಟ್ ಸಲ್ಲಿಕೆಯೂ ಆಗಿತ್ತು.
ಆದರೆ ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಎಂದು ಮಾಡಿ ಜನರನ್ನು ಎತ್ತಿಕಟ್ಟಿದ್ರು ಟೌನ್ಶಿಪ್ ಜಾಗವನ್ನು ಕುಮಾರಸ್ವಾಮಿ ಹೊಡೆಯಲು ಹೊರಟಿದ್ದಾರೆ ಅಂತ ಕಾಂಗ್ರೆಸ್ ಸತ್ಯಶೋಧನಾ ಸಮಿತಿ ರಚನೆ ಮಾಡಿತು. ನಿಮ್ಮ ಭೂಮಿ ಕಬಳಿಸ್ತಾನೆ ಅಂತ ಜನರನ್ನು ಎತ್ತಿಕಟ್ಟಿದ್ರು. ರೈತರು ಹಾಗೂ ಸಾರ್ವಜನಿಕ ವಿರೋಧ ಬಂದ ಹಿನ್ನೆಲೆ ಕುಮಾರಸ್ವಾಮಿ ಐದು ಟೌನ್ಶಿಪ್ ಯೋಜನೆ ಕೈಬಿಟ್ಟರು. ಗೆಜೆಟ್ ನೋಟಿಫಿಕೇಶನ್ ಮಾಡಿ ಭೂಮಿ ಖರೀದಿ ಕೈಬಿಟ್ಟರು.
ಈಗಿನ ಕಾಂಗ್ರೆಸ್ ಸರ್ಕಾರ ಮಾಡ್ತಿರೋದು ಏನು? ಅಂದು ರೈತರ ಭೂಮಿ ಕಬಳಿಸ್ತಾರೆ ಅಂದವರು ಈಗ ರೈತರ ಭೂಮಿಯನ್ನ ಕಬಳಿಸ್ತಿದರಲ್ಲವಾ? ಈಗ ಬೆಂಗಳೂರು ಜವಾಬ್ದಾರಿ, ನೀರಾವರಿ ಇಲಾಖೆ ಜವಾಬ್ದಾರಿ, ರಾಷ್ಟ್ರೀಯ ಪಕ್ಷದ ಅಧ್ಯಕ್ಷರ ಜವಾಬ್ದಾರಿ ಹೊತ್ತಿರುವ ಸಂದರ್ಭದಲ್ಲಿ ಸಿಎಂ ಆಗಬೇಕು ಅಂತ ಒಡಂಬಡಿಕೆ ಆಗಿದೆ ಎಂದು ಮನರಂಜನೆ ಕಾರ್ಯಕ್ರಮ ಮಾಡ್ತಿದ್ದಾರೆ. 'ಬರ್ತ್ಡೇ ದಿನ ಅಧಿಕಾರ ಹಸ್ತಾಂತರ ಆಗೋಯ್ತು ಅಂತ ಸಂಭ್ರಮಿಸುತ್ತಿದ್ದಾರೆ
ಬಿಡದಿಯ ರೈತರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ
ಆ ಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಹೈನುಗಾರಿಕೆ ಮಾಡ್ತಿದ್ದಾರೆ. ಪ್ರತಿದಿನ ಒಂದು ಪ್ರದೇಶದಲ್ಲಿ 50 ಲೀಟರ್ ಹಾಲು ಹಾಕ್ತಿದ್ದಾರೆ. ಇಂತಹ ನೀರಾವರಿ ಜಾಗವನ್ನು ಸ್ವಾಧೀನ ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಆ ಕಾಲದಲ್ಲಿ ಕುಮಾರಸ್ವಾಮಿ 250 ಕೋಟಿ ಇಟ್ಟು ನೀರಾವರಿ ಯೋಜನೆ ಅನುಕೂಲ ಆಗುವ ರೀತಿಯಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಇಂತಹ ನೀರಾವರಿ ಜಾಗವನ್ನು ಸ್ವಾಧೀನ ಮಾಡಿಕೊಳ್ಳಲು ಒಂದು ಪಕ್ಷದ ಅಧ್ಯಕ್ಷರು ( ಡಿ.ಕೆ ಶಿವಕುಮಾರ್) ಮುಂದಾಗಿದ್ದಾರೆ. ಬೆಂಗಳೂರು ಸುತ್ತಮುತ್ತಲಿನಲ್ಲಿ ಬಡವರ ಜಮೀನನ್ನು ಲೂಟಿ ಹೊಡೆಯುತ್ತಿದ್ದಾರೆ. ಬಿಡಿಎ ನಲ್ಲಿ ಏನು ಅಕ್ರಮ ನಡೆದಿದೆ ಅದರ ಬಗ್ಗೆಯೂ ಹೋರಾಟ ಮಾಡುತ್ತೇನೆ
20 ಸಾವಿರ ಎಕರೆ ಭೂಮಿ ಬಗ್ಗೆ ತನಿಖೆ ಮಾಡಿ”
ಬಿಡದಿಯ ರೈತರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಬಿಡದಿಯಲ್ಲಿ ಜನ ಕಣ್ಣೀರು ಹಾಕ್ತಿದ್ದಾರೆ ಎಂದು ಭಾವುಕರಾದ ದೇವೇಗೌಡರು. ಸುಮಾರು 20 ಸಾವಿರ ಎಕರೆ ಭೂಮಿ ಯಾರ ಹೆಸರಿನಲ್ಲಿ ಇದೆ ಎಂಬುದರ ಬಗ್ಗೆ ತನಿಖೆ ಮಾಡಿ ಎಂದು ನಾನು ಪತ್ರ ಬರೆದಿದ್ದೇನೆ. ಇ ಬಗ್ಗೆ ನಾನು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದೇನೆ. ಬಿಡದಿ ಟೌನ್ಶಿಪ್ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದೇನೆ' ಎಂದರು.
ನನ್ನ ಹೋರಾಟ ಇವತ್ತಿನಿಂದ ಆರಂಭ
ಬಡಜನರ ಜಮೀನನ್ನು, ಬೆಂಗಳೂರು ಸುತ್ತಮುತ್ತಲಿನ ಬಡವರ ಜಮೀನನ್ನು ಹೊಡೆಯುತ್ತಿದ್ದಾರೆ. ಬಿಡಿಎನಲ್ಲಿ ಏನು ಅಕ್ರಮ ನಡೆದಿದೆ ಅದರ ಬಗ್ಗೆಯೂ ಹೋರಾಟ ಮಾಡುತ್ತೇನೆ' ಎಂದು ಎಚ್ಚರಿಕೆ ನೀಡಿದರು. ನನ್ನ ಹೋರಾಟ ಇವತ್ತಿನಿಂದ ಪ್ರಾರಂಭ ಆಗಿದೆ ಎಂದು ಘೋಷಿಸಿದರು.
ಬಿಡದಿಗೆ ಹೋಗೋಣ… ಸಿದ್ದರಾಮಯ್ಯ ನೀವು ಕೂಡ ಬನ್ನಿ
ಬಿಡದಿ ಹತ್ತಿರ ಹೋಗೋಣ. ನಾನು ಬರ್ತೀನಿ, ಸಿದ್ದರಾಮಯ್ಯ ನೀವು ಬನ್ನಿ. ಸ್ಥಳಕ್ಕೆ ಭೇಟಿ ನೀಡೋಣ ಎಂದು ದೇವೇಗೌಡರು ಸವಾಲು ಹಾಕಿದರು. ಇದುವರೆಗೂ ಸ್ಥಳೀಯ ಶಾಸಕರು, ತಹಶೀಲ್ದಾರರು ಜನರ ಸಮಸ್ಯೆ ಕೇಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೊಂದು ದಂಧೆ
ಇದೊಂದು ದಂಧೆ. ರೈತರ ಜಮೀನನ್ನು ಇಟ್ಟುಕೊಂಡು ಕೆಲಸ ಮಾಡ್ತಿದ್ದಾರೆ. ಕನಕಪುರದಲ್ಲಿ ಎಷ್ಟು ಜಮೀನನ್ನು ವಶಪಡಿಸಿಕೊಂಡಿದ್ದಾರೆ ಎಂಬುದರ ಬಗ್ಗೆ ನನ್ನ ಬಳಿ ಮಾಹಿತಿ ಇದೆ ಎಂದು ಹೆಸರು ಹೇಳದೇ ಡಿ.ಕೆ ಶಿವಕುಮಾರ್ ವಿರುದ್ಧ ದೇವೇಗೌಡರು ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ