ನ್ಯಾಯಾಂಗ ಅಪರಾಧ ದ್ವೇಷಿಸಬೇಕೇ ವಿನಃ ಅಪರಾಧಿಯನ್ನಲ್ಲ: ಹೈಕೋರ್ಟ್

Kannadaprabha News   | Kannada Prabha
Published : Feb 22, 2026, 08:48 AM IST
Karnataka High Court

ಸಾರಾಂಶ

ಜನರಿಂದ ಎಟಿಎಂ ಕಾರ್ಡ್‌ಗಳನ್ನು ಕದ್ದು ಹಣ ಪಡೆಯುತ್ತಿದ್ದ ಇಬ್ಬರು ಅಪರಾಧಿಗಳಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ 3 ವರ್ಷಗಳ ಜೈಲು ಶಿಕ್ಷೆಯನ್ನು ಹೈಕೋರ್ಟ್ ದಂಡವಾಗಿ ಪರಿವರ್ತಿಸಿದೆ. ಕ್ರಿಮಿನಲ್‌ ನ್ಯಾಯವ್ಯವಸ್ಥೆ ಅಪರಾಧವನ್ನು ದ್ವೇಷಿಸಬೇಕೇ ವಿನಃ ಅಪರಾಧಿಯನ್ನಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಬೆಂಗಳೂರು: ಪ್ರತಿಯೊಬ್ಬ ಅಪರಾಧಿಗೂ ಉತ್ತಮ ಭವಿಷ್ಯವಿದ್ದು, ಕ್ರಿಮಿನಲ್‌ ನ್ಯಾಯವ್ಯವಸ್ಥೆ ಅಪರಾಧವನ್ನು ದ್ವೇಷಿಸಬೇಕು ವಿನಾಃ ಅಪರಾಧಿಯನ್ನಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್‌, ಜನರಿಂದ ಎಟಿಎಂ ಕಾರ್ಡ್‌ಗಳನ್ನು ಕದ್ದು, ಅವರ ಬ್ಯಾಂಕ್‌ ಖಾತೆಗಳಿಂದ ಹಣ ಪಡೆಯುತ್ತಿದ್ದ ಆರೋಪದ ಮೇಲೆ ಇಬ್ಬರು ಅಪರಾಧಿಗಳಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ 3 ವರ್ಷ ಜೈಲು ಶಿಕ್ಷೆಯನ್ನು ದಂಡವಾಗಿ ಪರಿವರ್ತಿಸಿದೆ.

ಮರು ಪರಿಶೀಲನಾ ಅರ್ಜಿ ವಿಚಾರಣೆ

ಪ್ರಕರಣ ಸಂಬಂಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 66 (ಸಿ-ವಿದ್ಯುನ್ಮಾನ ಸಹಿ, ಪಾಸ್‌ವರ್ಡ್‌ ಕಳವು) ಮತ್ತು ಐಪಿಸಿ ಸೆಕ್ಷನ್ 380 (ಮನೆಯಲ್ಲಿನ ವಸ್ತುಗಳ ಕಳವು) ಮಾಡಿದ ಆರೋಪದಲ್ಲಿ ತಮಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ತಲಾ 30 ಸಾವಿರ ರು.ದಂಡ ವಿಧಿಸಿದ ಅಧೀನ ನ್ಯಾಯಾಲಯ ಆದೇಶ ರದ್ದುಗೊಳಿಸುವಂತೆ ಕೋರಿ ಬಿಹಾರ್‌ ಮೂಲದ ಸಹದೇವ ಪ್ರಸಾದ್‌ ಮತ್ತು ಜಯಭದಕುಮಾರ್‌ ಹೈಕೋರ್ಟ್‌ಗೆ ಕ್ರಿಮಿನಲ್‌ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರು, ಪ್ರಕರಣದಲ್ಲಿ ಅಪರಾಧಿಗಳಾಗಿ ಪರಿಗಣಿಸಿ ಶಿಕ್ಷೆ ವಿಧಿಸಿರುವ ಅಧೀನ ನ್ಯಾಯಾಲಯ ಆದೇಶದಲ್ಲಿ ಮಧ್ಯಪ್ರವೇಶಿಸುವ ಅಗತ್ಯ ಇಲ್ಲ. ಆದರೆ, ಅರ್ಜಿದಾರರು ಮೊದಲ ಬಾರಿಗೆ ಈ ರೀತಿಯ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಮೊದಲ ಅರ್ಜಿದಾರರಿಗೆ ಚಿಕ್ಕ ವಯಸ್ಸಿನ ಪತ್ನಿ ಮತ್ತು ಎರಡು ವರ್ಷದ ಹೆಣ್ಣು ಮಗುವಿದೆ. ಅವರನ್ನು ಪೋಷಣೆ ಮಾಡಬೇಕಾಗಿದೆ. ಪ್ರಕರಣ ಸಂಬಂಧ ಆರೋಪಿಗಳು ತನಿಖೆ ಮತ್ತು ವಿಚಾರಣಾ ಪ್ರಕ್ರಿಯೆಗೆ ಸಹಕಾರ ಸಹ ನೀಡಿದ್ದಾರೆ ಎಂದು ಪೀಠ ಹೇಳಿದೆ.

ಅಪರಾಧವನ್ನು ದ್ವೇಷಿಸಬೇಕು ವಿನಾಃ ಅಪರಾಧಿಯನ್ನಲ್ಲ

ಪ್ರತಿಯೊಬ್ಬ ಕೈದಿಗೂ ಉತ್ತಮ ಭವಿಷ್ಯವಿದೆ. ಕ್ರಿಮಿನಲ್‌ ನ್ಯಾಯವ್ಯವಸ್ಥೆಯು ಅಪರಾಧವನ್ನು ದ್ವೇಷಿಸಬೇಕು ವಿನಾಃ ಅಪರಾಧಿಯನ್ನಲ್ಲ. ಅರ್ಜಿದಾರರು 2011ರ ಮಾರ್ಚ್‌ 1ರಿಂದ ಏಪ್ರಿಲ್ 12ರ ವರೆಗೂ ಸುಮಾರು 41 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಅವಧಿಯನ್ನೇ ಜೈಲು ಶಿಕ್ಷೆಯ ಅವಧಿಯನ್ನಾಗಿ ಪರಿಗಣಿಸಿ, ಶಿಕ್ಷೆಯನ್ನು ರದ್ದುಪಡಿಸಿ, ದಂಡ ಮೊತ್ತವನ್ನು 2 ಲಕ್ಷ ರು.ಗೆ ಹೆಚ್ಚಿಸುವುದು ಸೂಕ್ತ ಎಂದು ಪೀಠ ಹೇಳಿದೆ.

ಅಂತಿಮವಾಗಿ ಅರ್ಜಿದಾರರಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಮೂರು ವರ್ಷ ಜೈಲು ಶಿಕ್ಷೆಯನ್ನು ರದ್ದುಪಡಿಸಿರುವ ಪೀಠ, ದಂಡ ಪ್ರಮಾಣವನ್ನು ತಲಾ ಎರಡು ಲಕ್ಷ ರು.ಗೆ ಹೆಚ್ಚಿಸಿದೆ. ಅರ್ಜಿದಾರ ಆರೋಪಿಗಳು 2026ರ ಫೆ.20ರ ಒಳಗಾಗಿ ದಂಡದ ಮೊತ್ತವನ್ನು ವಿಚಾರಣಾ ನ್ಯಾಯಾಲಯದ ಮುಂದೆ ಠೇವಣಿ ಇಡಬೇಕು. ಇಲ್ಲವಾದಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ಪೂರ್ಣ ಗೊಳಿಸಬೇಕು. ಆರೋಪಿಗಳಿಂದ ವಸೂಲಿ ಮಾಡಲಾದ ದಂಡದ ಮೊತ್ತದಲ್ಲಿ ಘಟನೆಯಿಂದ ಆರ್ಥಿಕ ನಷ್ಟ ಅನುಭವಿಸಿರುವ ಇಬ್ಬರು ದೂರುದಾರರಿಗೆ 50 ಸಾವಿರ ರು., ಮತ್ತೊಬ್ಬರಿಗೆ 25 ಸಾವಿರ ರು. ಪರಿಹಾರವಾಗಿ ಪಾವತಿಸಬೇಕು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯದಲ್ಲಿ ಒಣಹವೆ ನಡುವೆಯೂ ಮಳೆ; ಈ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ವರುಣನ ಅಬ್ಬರ
Karnataka News Live: ಲೂಡೊ ಕಾಯಿ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು; ಶ್ವಾಸಕೋಶದಲ್ಲಿ ಪ್ಲಾಸ್ಟಿಕ್ ಕೋನ್ ಪತ್ತೆ