
ಹಾಸನ (ಜು.10): ಹಾಸನ ಜಿಲ್ಲೆಯಲ್ಲಿ ಉಂಟಾಗುತ್ತಿರುವ ಹೃದಯಾಘಾತ ಸಾವು ಪ್ರಕರಣಗಳ ಕುರಿತ ತಜ್ಞರ ಅಧ್ಯಯನ ವರದಿಯಲ್ಲಿ ಹೊಸ ಆತಂಕದ ಸಂಗತಿಯೊಂದು ಬೆಳಕಿಗೆ ಬಂದಿದೆ. ಹೃದಯಾಘಾತದಿಂದ ಮೃತಪಟ್ಟವರ ಪೈಕಿ 33% ಮಂದಿ ಆಟೋ ಹಾಗೂ ಕ್ಯಾಬ್ ಚಾಲಕರು ಎಂಬುದು ತಿಳಿದುಬಂದಿದೆ.
ಹಾಸನಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಸಂಭವಿಸಿದ ಸಾವಿನ ಪ್ರಕರಣಗಳ ಕುರಿತು ಅಧ್ಯಯನ ಮಾಡಲು ಸರ್ಕಾರದಿಂದ ತಜ್ಞರ ಸಮಿತಿಯೊಂದನ್ನು ರಚನೆ ಮಾಡಿತ್ತು.
ಅಧ್ಯಯನಕ್ಕೆ ಒಳಪಡಿಸಿದ 24 ಹೃದಯಾಘಾತ ಪೀಡಿತ ಪ್ರಕರಣಗಳಲ್ಲಿ, ಆಟೋ ಮತ್ತು ಕ್ಯಾಬ್ ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು ಎಂಬುದು ಈ ವರದಿಯ ತೀರ್ಮಾನವಾಗಿದೆ. ಇದರಲ್ಲಿ 7 ಜನರು ವಿಶೇಷವಾಗಿ ವಾಯು ಮಾಲಿನ್ಯದಿಂದ ತೀವ್ರ ಹೃದಯ ಸಮಸ್ಯೆಗಳಿಗೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಆತಂಕದ ಅಂಶವೊಂದು ತಜ್ಞರ ಗಮನ ಸೆಳೆದಿದೆ.
ವೃತ್ತಿಯ ಗತಿಯೇ ಜೀವಕ್ಕೆ ಸಂಚು?
ರಸ್ತೆಮೇಲೆ ದಿನದ ಉಷ್ಣತೆಯಲ್ಲಿ, ತೀವ್ರ ಧೂಳು, ಕಾರ್ಖಾನೆಗಳಿಂದ ಹೊರಸೂಸುವ ಕಾರ್ಬನ್ ಮಿಶ್ರಿತ ಗಾಳಿ ಸೇವನೆ ಮಾಡುವ ಚಾಲಕರಿಗೆ, ಅನೇಕ ವರ್ಷಗಳಿಂದ ಹೃದಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆಯೆಂಬುದನ್ನು ತಜ್ಞರು ಈಗ ಬಹಿರಂಗಪಡಿಸಿದ್ದಾರೆ. ಹಾಸನದ ವೈದ್ಯಕೀಯ ಹಾಗೂ ಹೃದಯ ತಜ್ಞರ ತಂಡವು ಕಳೆದ 2 ತಿಂಗಳ ಕಾಲ ವಿವಿಧ ಆಸ್ಪತ್ರೆಗಳ ಹೃದಯಾಘಾತ ದಾಖಲೆಗಳನ್ನು ಪರಿಶೀಲಿಸಿ ಈ ಅಧ್ಯಯನವನ್ನು ರೂಪಿಸಿದ್ದು, ಅದರ ಫಲಿತಾಂಶ ಸಕಾಲಿಕ ಎಚ್ಚರಿಕೆಗೆ ಕಾರಣವಾಗುತ್ತಿದೆ.
ತಕ್ಷಣ ಕ್ರಮಕ್ಕೆ ತಜ್ಞರ ಸಲಹೆ:
ಹೃದಯಾಘಾತದಿಂದ ಸಾವಿಗೀಡಾಗುತ್ತಿರುವವರ ಪೈಕಿ ತೀವ್ರ ಪ್ರಮಾಣದಲ್ಲಿ ಆಟೋ ಮತ್ತು ಕ್ಯಾಬ್ ಚಾಲಕರು ಇರುವುದರಿಂದ, ಈ ವೃತ್ತಿಗೆ ಸಂಬಂಧಿಸಿದ ಆರೋಗ್ಯ ಹಾನಿಗಳನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಉಂಟಾಗಿದೆ. ಸರ್ಕಾರ, ಆರೋಗ್ಯ ಇಲಾಖೆ ಮತ್ತು ಸಾರಿಗೆ ಸಂಘಟನೆಗಳು ಒಟ್ಟಾಗಿ ಸಮಗ್ರ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ