ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ,ಎಸ್.ಪಿ.ಡಾ ಪ್ರಕಾಶ್ ಗೌಡ, ದೇವಸ್ಥಾನ ಆಡಳಿತಾಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿ ಹೆಚ್.ಎಲ್ ನಾಗರಾಜ್ ಸಮ್ಮುಖದಲ್ಲಿ ಹಾಸನಾಂಬ ದೇಗುಲದ ಪೂಜಾ ಕೈಂಕರ್ಯ ಮುಗಿಸಿ ಬಾಗಿಲುಗಳಿಗೆ ಬೀಗ ಹಾಕಲಾಗಿದೆ.
ಹಾಸನ: ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬ ದೇವಿ ದರ್ಶನಕ್ಕೆ ವಿಧ್ಯುಕ್ತ ತೆರೆ ಬಿದ್ದಿದ್ದು, ಸಾರ್ವಜನಿಕರ ದರ್ಶನ ಅಂತ್ಯಗೊಂಡಿದೆ. ಅಮ್ಮನವರ ದರ್ಶನ ಪಡೆಯಲು ಕಡೇ ದಿನವಾದ ಗುರುವಾರ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ,ಎಸ್.ಪಿ.ಡಾ ಪ್ರಕಾಶ್ ಗೌಡ, ದೇವಸ್ಥಾನ ಆಡಳಿತಾಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿ ಹೆಚ್.ಎಲ್ ನಾಗರಾಜ್ ಸಮ್ಮುಖದಲ್ಲಿ ದೇವಾಲಯದ ಬಾಗಿಲುಗಳಿಗೆ ಬೀಗ ಹಾಕಲಾಗಿದೆ. ಹಾಸನ ಕ್ಷೇತ್ರದ ಶಾಸಕರಾದ ಪ್ರೀತಂ ಗೌಡ ಅಂತಿಮ ದಿನದಂದು ದರ್ಶನ ಪಡೆದಿದ್ದಾರೆ.
ನ. 1 ರಂದು ದೇವಸ್ಥಾನದ ಬಾಗಿಲು ತೆರೆದಿದ್ದರೂ, ನ. 2 ರಿಂದ 8 ರ ತನಕ ಅಂದರೆ ಒಟ್ಟು 7 ದಿನಗಳ ಕಾಲ ಸಾರ್ವಜನಿಕರಿಗೆ ಅಮ್ಮನವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇನ್ನು ನ. 9 ರ ಶುಕ್ರವಾರ ಮಧ್ಯಾಹ್ನ 3 ರ ವೇಳೆ ಶಾಸ್ತ್ರೋಕ್ತವಾಗಿ ಅಮ್ಮನವರ ದೇವಸ್ಥಾನದ ಬಾಗಿಲನ್ನು ಮುಚ್ಚಲಿದ್ದು, ಸಾರ್ವಜನಿಕರ ದರ್ಶನಕ್ಕೆ ಅವಕಾಶವಿರುವುದಿಲ್ಲ.
ಮತ್ತೆ ಈ ದೇಗುಲದ ಬಾಗಿಲು ತೆರೆಯುವುದು ಮುಂದಿನ ದೀಪಾವಳಿ ವೇಳೆಗೆ. ಈ ಬಾರಿ ಸುಮಾರು 2 ರಿಂದ 2 .50 ಲಕ್ಷದಷ್ಟು ಭಕ್ತರು ಹಾಸನಾಂಬ ದೇವಿಯ ದರ್ಶನ ಪಡೆದಿದ್ದಾರೆ ಎಂದು ದೇವಸ್ಥಾನ ಆಡಳಿತ ಮಂಡಳಿ ಹೇಳಿದೆ.
ಕಳೆದ 5 ರಿಂದ 6 ಲಕ್ಷದಷ್ಟು ಭಕ್ತರು ದರ್ಶನವನ್ನು ಪಡೆದಿದ್ದರು. ಟಿಕೆಟ್ ದರ ನಿಗದಿ ಪಡಿಸಿದ್ದೇ ಭಕ್ತರ ಸಂಖ್ಯೆ ಇಳಿಮುಖವಾಗಲು ಕಾರಣ ಎನ್ನಲಾಗುತ್ತಿದೆ.