ಉತ್ತರ ಪ್ರದೇಶದಿಂದ ಮಗು ಕರೆಸಿ ತಾಯಿ ವಶಕ್ಕೆ ಒಪ್ಪಿಸಿದ ಹೈಕೋರ್ಟ್‌!

By Precilla Olivia DiasFirst Published May 2, 2022, 5:49 AM IST
Highlights

* ಕೇಸ್‌ ಇತ್ಯರ್ಥಕ್ಕಿಂತ ಮೊದಲೇ ತಂದೆ ಸುಪರ್ದಿಗೆ ಮಗು ಕೊಡಲ್ಲ: ಕೋರ್‌್ಟ

* -ಮಗನನ್ನು ತಂದೆ ಅಕ್ರಮ ಬಂಧನದಲ್ಲಿಟ್ಟಿದ್ದಾರೆ ಎಂದು ತಾಯಿ ಹೇಬಿಯರ್ಸ್‌ ಕಾರ್ಪಸ್‌

* ಪತ್ನಿ ಮತ್ತೊಂದು ವಿವಾಹಕ್ಕೆ ಸಿದ್ಧರಾಗಿದ್ದಾರೆ

* ಹಾಗಾಗಿ ಮಗು ನೀಡುವಂತೆ ಕೋರಿದ್ದ ತಂದೆ

ಬೆಂಗಳೂರು(ಮೇ.02): ಮಗುವಿನ ಸುಪರ್ದಿ ವಿಷಯ ಕೋರ್ಚ್‌ನಲ್ಲಿ ಇತ್ಯರ್ಥವಾಗುವ ಮುನ್ನವೇ ಮಗುವನ್ನು ಕರೆದುಕೊಂಡು ಹೋಗಿದ್ದ ತಂದೆಯ ಕ್ರಮ ಒಪ್ಪದ ಹೈಕೋರ್ಚ್‌, ತಾಯಿಯ ಮಡಿಲಿಗೆ ಮಗುವನ್ನು ಒಪ್ಪಿಸಿದ್ದಲ್ಲದೇ, ಇಬ್ಬರ ಜಗಳದಲ್ಲಿ ಅಪ್ರಾಪ್ತ ಮಗು ದೈಹಿಕ ಮತ್ತು ಮಾನಸಿಕವಾಗಿ ಪೋಷಕರೊಂದಿಗೆ ದೂರವಾಗದಂತೆ ನೋಡಿಕೊಳ್ಳಬೇಕೆಂದು ತಂದೆ-ತಾಯಿಗೆ ಬುದ್ಧಿವಾದ ಹೇಳಿದೆ.

ತನ್ನ ಪತಿ ರವಿ ಅಪ್ರಾಪ್ತ ಮಗನನ್ನು ಅಕ್ರಮವಾಗಿ ಬಂಧನದಲ್ಲಿರಿಸಿದ್ದಾರೆ ಎಂದು ಆರೋಪಿಸಿ ಯಲಹಂಕ ನಿವಾಸಿ ರಮ್ಯಾ (ಪತಿ-ಪತ್ನಿಯ ಹೆಸರು ಬದಲಿಸಲಾಗಿದೆ) ಹೈಕೋರ್ಚ್‌ಗೆ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್‌ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ, ತಾಯಿಯ ಸುಪರ್ದಿಗೆ ಮಗುವನನ್ನು ಒಪ್ಪಿಸುವಂತೆ ರವಿಗೆ ನಿರ್ದೇಶಿಸಿತು. ಅಲ್ಲದೆ, ಶಾಲೆ ಸಮಯ ಮುಗಿದ ನಂತರ ಫೋನ್‌, ವಿಡಿಯೋ ಕಾಲ್‌, ಸ್ಕೈಪ್‌ ಸೇರಿದಂತೆ ಇನ್ನಿತರ ಮಾಧ್ಯಮಗಳ ಮೂಲಕ ಮಗುವಿನೊಂದಿಗೆ ಮಾತನಾಡಲು ತಂದೆಗೆ ಮುಕ್ತ ಅವಕಾಶವಿದೆ. ಪ್ರತಿ ಭಾನುವಾರ ಮಗುವಿನ ಯೋಗಕ್ಷೇಮ ಮತ್ತು ಬೆಳವಣಿಗೆ ಮಾಹಿತಿಯನ್ನು ಪತಿಯೊಂದಿಗೆ ಹಂಚಿಕೊಳ್ಳಬೇಕು. ವಾರಂತ್ಯದಲ್ಲಿ ರವಿ ಬೆಂಗಳೂರಿಗೆ ಬಂದು ಬೆಳಗ್ಗೆ 10ರಿಂದ 5ರವರೆಗೆ ಮಗುವಿನ ಜೊತೆಗೆ ಸಮಯ ಕಳೆಯಬಹುದು ಎಂದು ಆದೇಶಿಸಿತು.

ಹಳಸಿದ ವೈವಾಹಿಕ ಸಂಬಂಧ:

2009ರಲ್ಲಿ ಉತ್ತರ ಪ್ರದೇಶದಲ್ಲಿ ಮದುವೆಯಾಗಿದ್ದ ರವಿ ಮತ್ತು ರಮ್ಯಾ ಅವರಿಗೆ 2003ರಲ್ಲಿ ಪುತ್ರ ಇಷಾನ್‌ ಜನಿಸಿದ್ದ. ಭಿನ್ನಾಭಿಪ್ರಾಯಗಳಿಂದ ವೈವಾಹಿಕ ಸಂಬಂಧ ಹಳಸಿತ್ತು. ಹಾಗಾಗಿ ರಮ್ಯಾ ಮಗುವಿನೊಂದಿಗೆ ಬೆಂಗಳೂರಿನಲ್ಲಿ, ರವಿ ಉತ್ತರ ಪ್ರದೇಶದ ನೋಯ್ಡಾದಲ್ಲಿ ನೆಲೆಸಿದ್ದರು. ಈ ಮಧ್ಯ ಮಗುವಿನ ಸುಪರ್ದಿಗೆ ಕೋರಿ ನೋಯ್ಡಾ ಕೋರ್ಚ್‌ಗೆ ರವಿ ಅರ್ಜಿ ಸಲ್ಲಿಸಿದ್ದರು.

ಈ ಮಧ್ಯೆ 2021ರ ಅಕ್ಟೋಬರ್‌ನಲ್ಲಿ ಮಗುವನ್ನು ಕರೆದೊಯ್ದ ರವಿ, 15 ದಿನದಲ್ಲಿ ವಾಪಸ್‌ ಕರೆತರುವುದಾಗಿ ಭರವಸೆ ನೀಡಿದ್ದರು. ಆದರೆ, ಮರಳಿ ಮಗನನ್ನು ಕರೆತರದ ಕಾರಣ ರಮ್ಯಾ ಹೈಕೋರ್ಚ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿ, ಮಗನನ್ನು ಪತಿ ಅಕ್ರಮ ಬಂಧನದಲ್ಲಿರಿಸಿದ್ದಾರೆ, ಮಗುವನ್ನು ಸಂಪರ್ಕಿಸಲು ಹಾಗೂ ಮಾತನಾಡಲು ಬಿಡುತ್ತಿಲ್ಲ ಎಂದು ದೂರಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಚ್‌, ಮಗು ಹಾಜರು ಪಡಿಸುವಂತೆ ರವಿಗೆ ಸೂಚಿಸಿತ್ತು. ಅದರಂತೆ ನ್ಯಾಯಾಲಯಕ್ಕೆ ಮಗುವನ್ನು ರವಿ ಹಾಜರುಪಡಿಸಿದ್ದರು.

ವಿಚಾರಣೆ ವೇಳೆ ರವಿ ಪರ ವಕೀಲರು, ರಮ್ಯಾ ಮರು ಮದುವೆಯಾಗಲು ಬಯಸಿದ್ದಾರೆ. ಇದರಿಂದ ಮಗನನ್ನು ಹೊರಗಿನ ಅಪರಿತ ವ್ಯಕ್ತಿಯೊಂದಿಗೆ ಬಿಡಲು ರವಿಗೆ ಇಷ್ಟವಿಲ್ಲ. ಮಗನನ್ನು ನೋಡಿಕೊಳ್ಳಲು ತಾನು ಸಮರ್ಥನಿದ್ದೇನೆಂದು ಆತ ಹೇಳುತ್ತಿದ್ದಾರೆ. ಆದರೆ, ಮಗುವನ್ನು ಸಂಪರ್ಕಿಸಲು ಅರ್ಜಿದಾರರಿಗೆ ರವಿ ಅಡ್ಡಿಪಡಿಸಿಲ್ಲ ಎಂದು ಕೋರ್ಚ್‌ ಗಮನಕ್ಕೆ ತಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಮಗುವಿನ ಸುಪರ್ದಿಗಾಗಿ ರವಿ ಅವರು ನೋಯ್ಡಾ ಕೋರ್ಚ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆ ಪ್ರಕ್ರಿಯೆ ತಾರ್ತಿಕ ಅಂತ್ಯ ಕಾಣುವ ಮೊದಲೇ ತಾಯಿಯ ಸುಪರ್ದಿಯಲ್ಲಿದ್ದ ಮಗನನ್ನು ರವಿ ತೆಗೆದುಕೊಂಡು ಹೋಗಿರುವ ಕ್ರಮ ಒಪ್ಪಲಾಗದು. ಕೂಡಲೇ ಮಗನನ್ನು ತಾಯಿ ಸುಪರ್ದಿಗೆ ನೀಡಬೇಕು ಎಂದು ರವಿಗೆ ಆದೇಶಿಸಿತು.

ಜತೆಗೆ, ಮಗುವಿನ ಮಧ್ಯಂತರ ಸುಪರ್ದಿಗಾಗಿ ನ್ಯಾಯಾಲಯದಿಂದ ಪರಿಹಾರ ಪಡೆಯಲು ರವಿ ಮುಕ್ತರಾಗಿದ್ದಾರೆ. ಇನ್ನು ಒಂದು ವೇಳೆ ರಮ್ಯಾ ಮರು ಮದುವೆಯಾಗಲು ಬಯಸಿದರೆ, ಆ ಕುರಿತು ನೋಯ್ಡಾ ನ್ಯಾಯಾಲಯ ವಿವೇಚನೆ ಬಳಸಿ ಸೂಕ್ತ ಆದೇಶ ಹೊರಡಿಸಬಹುದು ಹೈಕೋರ್ಚ್‌ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿದೆ.

click me!