
ಬೆಂಗಳೂರು(ಆ.23): ಸಾಹಿತಿಗಳಿಗೆ ವೈಯಕ್ತಿಕವಾಗಿ ಬೆದರಿಕೆ ಹಾಕಿರುವ ಸಂಬಂಧ ಹಿರಿಯ ಅಧಿಕಾರಿಗಳ ಪ್ರತ್ಯೇಕ ತಂಡದಿಂದ ತನಿಖೆ ಮಾಡಲಾಗುವುದು. ಜೊತೆಗೆ ಬೆದರಿಕೆ ಎದುರಿಸುತ್ತಿರುವ ಸಾಹಿತಿಗಳಿಗೆ ಗನ್ಮ್ಯಾನ್ ಒದಗಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.
ಬೆದರಿಕೆ ಪತ್ರ ಪ್ರಕರಣಗಳ ಹಿನ್ನೆಲೆಯಲ್ಲಿ ಸಾಹಿತಿಗಳ ಜೊತೆ ವಿಧಾನಸೌಧದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಸಾಹಿತಿ ಮರುಳಸಿದ್ದಪ್ಪ ನೇತೃತ್ವದಲ್ಲಿ ಅನೇಕ ಸಾಹಿತಿಗಳು ತಮ್ಮ ಬಳಿ ಯಾವ ರೀತಿ ಬೆದರಿಕೆ ಹಾಕಲಾಗುತ್ತಿದೆ ಎಂಬುದನ್ನು ತಿಳಿಸಿದ್ದಾರೆ. ಇದೊಂದು ಸೈದ್ಧಾಂತಿಕ ವಿಚಾರ. ಒಬ್ಬರು ಒಂದು ಸಿದ್ಧಾಂತ ಒಪ್ಪಿಕೊಂಡಿದ್ದರೆ, ಮತ್ತೊಬ್ಬರು ಬೇರೊಂದು ಸಿದ್ಧಾಂತ ಒಪ್ಪಿಕೊಂಡಿರುತ್ತಾರೆ. ಸಾಹಿತಿಗಳು ತಮ್ಮ ಸಾಹಿತ್ಯದ ಮೂಲಕ ಅಭಿಪ್ರಾಯ ವ್ಯಕ್ತಪಡಿಸಬಹುದು, ನೇರವಾಗಿಯೂ ಹೇಳಬಹುದು. ಸಾಹಿತಿಗಳ ಅಭಿಪ್ರಾಯಕ್ಕೆ ವಿರುದ್ಧವಾಗಿರುವವರು ಈ ರೀತಿ ಬೆದರಿಕೆ ಒಡ್ಡಿರಬಹುದು ಎಂದರು.
ಕಳೆದ ವರ್ಷದಿಂದ ಜೀವ ಬೆದರಿಕೆ: ರಕ್ಷಣೆ ಕೋರಿ ಸಾಹಿತಿಗಳಿಂದ ಸರ್ಕಾರಕ್ಕೆ ಮೊರೆ!
ಈ ಹಿಂದೆ ಗೌರಿ ಲಂಕೇಶ್, ಎಂ.ಎಂ. ಕಲಬುರ್ಗಿ ಅವರಿಗೂ ಈ ರೀತಿ ಬೆದರಿಕೆ ಬರುತ್ತಿತ್ತು. ಹೀಗಾಗಿ ಈ ವಿಷಯವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಒಂದಿಬ್ಬರಿಗೆ ನೀಡಿದ್ದ ಗನ್ ಮ್ಯಾನ್ ಸೌಲಭ್ಯವನ್ನು ಹಿಂತೆಗೆದುಕೊಂಡಿದ್ದೆವು. ಈಗ ಮತ್ತೆ ಅವರಿಗೆ ರಕ್ಷಣೆ ನೀಡಲಾಗುವುದು. ಇದೊಂದು ಆಂತರಿಕ ತನಿಖೆಯಾಗಿರುವುದರಿಂದ ಹಿರಿಯ ಅಧಿಕಾರಿಗಳ ತಂಡದಿಂದ ತನಿಖೆ ಮಾಡುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ಬೆಂಬಲಿಗರಲ್ಲ:
ಸಾಹಿತಿಗಳು ಕಾಂಗ್ರೆಸ್ ಬೆಂಬಲಿಗರಲ್ಲ, ಸಮಾನತೆಯ ಬಗ್ಗೆ ಸೈದ್ಧಾಂತಿಕವಾಗಿ ಗುರುತಿಸಿಕೊಂಡಿರಬಹುದು. ಅವರು ಕಾಂಗ್ರೆಸ್ ಕಚೇರಿ ಅಥವಾ ಸಭೆಗೆ ಬರುವುದಿಲ್ಲ. ದಾಭೋಲ್ಕರ್, ಪಾನ್ಸರೆ ಹತ್ಯೆ ಆಗಿದೆ. ಮೂಲತಃ ಇದೊಂದು ಸೈದ್ಧಾಂತಿಕ ಪ್ರಶ್ನೆಯಾಗಿದೆ ಎಂದರು.
ಸಭೆಯಲ್ಲಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ, ವಸುಂಧರಾ ಭೂಪತಿ, ಜಾಣಗೆರೆ ವೆಂಕಟರಾಮಯ್ಯ, ಬಂಜಗೆರೆ ಜಯಪ್ರಕಾಶ್, ಹನುಮೇಗೌಡ ಸೇರಿದಂತೆ ಡಿಜಿಪಿ ಅಲೋಕ್ ಮೋಹನ್, ಪೊಲೀಸ್ ಆಯುಕ್ತ ದಯಾನಂದ ಮುಂತಾದವರು ಭಾಗಿಯಾಗಿದ್ದರು.
ಫ್ಯಾಸಿಸ್ಟ್ ಶಕ್ತಿಗಳ ಹತ್ತಿಕ್ಕಲು ಒತ್ತಾಯ
ಸಾಹಿತಿ ಕೆ. ಮರುಳಸಿದ್ದಪ್ಪ ಮಾತನಾಡಿ, ಯಾರು ಮುಕ್ತವಾಗಿ ಮಾತನಾಡುತ್ತಾರೋ ಅವರಿಗೆ ಬೆದರಿಕೆ ಒಡ್ಡಲಾಗುತ್ತಿದೆ. ಅವರ ಫ್ಯಾಸಿಸ್ಟ್ ವಿಚಾರವನ್ನು ನಾವು ಖಂಡಿಸುತ್ತಿರುವುದರಿಂದ ನಮಗೆ ಬೆದರಿಕೆ ಒಡ್ಡಲಾಗುತ್ತಿದೆ. ಗೌರಿ ಲಂಕೇಶ್, ಕಲಬುರ್ಗಿ ಹತ್ಯೆ ಯಾಕೆ ಮಾಡಲಾಯಿತು ಎಂಬುದು ನಮಗೆ ಗೊತ್ತಿದೆ. ಅದೇ ಗುಂಪು ನಮ್ಮನ್ನು ಬೆದರಿಸುತ್ತಿದೆ. ಇದರ ಹಿಂದೆ ಕೆಲಸ ಮಾಡುತ್ತಿರುವ ದೊಡ್ಡ ಗುಂಪನ್ನು ಸರ್ಕಾರ ಪತ್ತೆ ಹಚ್ಚಬೇಕಾಗಿದೆ ಎಂದರು.
ಸತ್ಯ ಹೇಳಿದರೆ ಸಿ.ಟಿ.ರವಿಗೆ ಕೆಳಗಿಂದ ಮೇಲಿನವರೆಗೆ ಉರಿಯುತ್ತೆ: ಕೆಪಿಸಿಸಿ ರಾಜ್ಯ ವಕ್ತಾರ ಲಕ್ಷ್ಮಣ್
ದೇಶದಲ್ಲಿ ಈ ಗುಂಪು ಎಷ್ಟುಅಪಾಯಕಾರಿಯಾಗಿದೆ, ದೇಶಕ್ಕೆ ಎಷ್ಟುಆತಂಕ ಸೃಷ್ಟಿಸುತ್ತಿದ್ದಾರೆ ಎಂಬುದನ್ನು ಬಯಲಿಗೆ ಎಳೆಯಬೇಕು. ನಾವು ಯಾವ ಪಕ್ಷದ ಪರ ಅಥವಾ ವಿರುದ್ಧ ಇಲ್ಲ. ದೇಶದ ಬಹುತ್ವ ಸಂಸ್ಕೃತಿ ಉಳಿಸಬೇಕು. ಯಾರು ಸಂವಿಧಾನ ವಿರೋಧಿಗಳಿದ್ದಾರೋ ಅವರನ್ನು ಹತ್ತಿಕ್ಕುವ ಕೆಲಸ ಮಾಡುವಂತೆ ಒತ್ತಾಯಿಸಿದ್ದೇವೆ ಎಂದರು.
ನಾವು ಸಿದ್ಧಾಂತರ ಪರ ಇರುವವರು. ಕಾಂಗ್ರೆಸ್ ಒಳ್ಳೆಯ ಕೆಲಸ ಮಾಡಿದರೆ ಅವರನ್ನು ಬೆಂಬಲಿಸುತ್ತೇವೆ. ಬಿಜೆಪಿ ಒಳ್ಳೆಯದನ್ನು ಮಾಡಿದರೆ ಅದನ್ನು ಬೆಂಬಲಿಸುತ್ತೇವೆ. ಬಿಜೆಪಿ ಕೆಲವು ಕಡೆ ಹಾನಿ ಮಾಡುತ್ತಿದೆ. ಅದನ್ನು ನಾವು ವಿರೋಧಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ